ETV Bharat / sports

ಕೆಕೆಆರ್​ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್​ ಕಿಂಗ್ಸ್​

author img

By

Published : Sep 26, 2021, 7:37 PM IST

Updated : Sep 26, 2021, 8:10 PM IST

Chennai Super Kings vs Kolkata Knight Riders
ಚೆನ್ನೈ ಸೂಪರ್​ ಕಿಂಗ್ಸ್ vs ಕೆಕೆಆರ್​

ರವೀಂದ್ರ ಜಡೇಜಾ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.

ಅಬುಧಾಬಿ: ರವೀಂದ್ರ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

172 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್​ ಮತ್ತು ಫಾಫ್​ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ 74 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು.

28 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 40 ರನ್​ಗಳಿಸಿದ್ದ ಗಾಯಕ್ವಾಡ್​ ರಸೆಲ್​ ಬೌಲಿಂಗ್​ನಲ್ಲಿ ಮಾರ್ಗನ್​ಗೆ ಕ್ಯಾಚಿತ್ತು ಔಟಾದರು. ನಂತರ ಡುಪ್ಲೆಸಿಸ್​ ಜೊತೆಗೂಡಿದ ಮೊಯೀನ್ ಅಲಿ(32) 2ನೇ ವಿಕೆಟ್​​ಗೆ 28 ರನ್​ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಪ್ಲೆಸಿಸ್​(43) ಪ್ರಸಿಧ್ ಕೃಷ್ಣಾಗೆ ವಿಕೆಟ್​ ಒಪ್ಪಿಸಿದರು.

ಇವರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್​ಕೆ ದಿಢೀರ್ ಕುಸಿತ ಕಂಡಿದ್ದಲ್ಲದೆ, ರನ್​ ಗಳಿಸಲು ಕೂಡ ಪರದಾಡಿತು. ಮೊಯೀನ್​ ಅಲಿ 32, ಅಂಬಾಟಿ ರಾಯುಡು 10, ಸುರೇಶ್ ರೈನಾ 11, ಎಂ.ಎಸ್.ಧೋನಿ 1 ರನ್​ಗಳಿಸಿ ಔಟಾದರು.

19ನೇ ಓವರ್​ನಲ್ಲಿ 22 ರನ್​ ಚಚ್ಚಿದ ಜಡೇಜಾ:

138ಕ್ಕೆ 4 ವಿಕೆಟ್​ ಕಳೆದುಕೊಂಡರೂ ಗೆಲುವಿನ ನೆಚ್ಚಿನ ತಂಡವಾಗಿದ್ದ ಸಿಎಸ್​ಕೆ ದಿಢೀರ್ ಕುಸಿತ ಅನುಭವಿಸಿದ್ದರಿಂದ ಕೊನೆಯ 2 ಓವರ್​ಗಳಲ್ಲಿ ಗೆಲ್ಲಲು 26 ರನ್​ ಗಳಿಸಬೇಕಿತ್ತು. ಮೇಲ್ನೋಟಕ್ಕೆ ಕೆಕೆಆರ್​ ಗೆಲ್ಲಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ರವೀಂದ್ರ ಜಡೇಜಾ ಎಲ್ಲವನ್ನು ತಲೆಕೆಳಗೆ ಮಾಡಿದರು. ಪ್ರಸಿಧ್ ಕೃಷ್ಣ ಎಸೆದ 19ನೇ ಓವರ್​ನಲ್ಲಿ 22 ರನ್‌ಸೂರೆಗೈದು ಪಂದ್ಯವನ್ನು ಸಿಎಸ್​ಕೆ ಕಡೆಗೆ ತಿರುಗಿಸಿದರು.

ರೋಚಕವಾಗಿದ್ದ ಕೊನೆಯ ಓವರ್:​

ಸಿಎಸ್​ಕೆ ಗೆಲುವಿಗೆ ಕೊನೆಯ ಓವರ್​ನಲ್ಲಿ 4 ರನ್ ​ಅಗತ್ಯವಿತ್ತು. ನರೈನ್ ಎಸೆದ 20ನೇ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್​ ಕರ್ರನ್​ ಕ್ಯಾಚ್​ ನೀಡಿ ಔಟಾದರು. ನಂತರದ ಎಸೆತ ಡಾಟ್​ ಆದರೆ 3ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್​ 3 ರನ್​ ತೆಗೆದುಕೊಂಡರು. 3 ಎಸೆತಕ್ಕೆ ಕೇವಲ 1 ರನ್​ ಅಗತ್ಯವಿತ್ತು. 4ನೇ ಎಸೆತದಲ್ಲಿ ಡಾಟ್ ಮಾಡಿದ ಜಡೇಜಾ 5ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕೊನೆಯ ಎಸೆತದಲ್ಲಿ ದೀಪಕ್​ ಚಹರ್​ ಸಿಂಗಲ್​ ತೆಗೆಯುವುದರೊಂದಿಗೆ ಸಿಎಸ್​ಕೆಗೆ ರೋಚಕ ಗೆಲುವು ತಂದುಕೊಟ್ಟರು.

ಕೆಕೆಆರ್​ ಪರ ಸುನೀಲ್ ನರೈನ್ 3 ವಿಕೆಟ್​, ವರುಣ್ ಚಕ್ರವರ್ತಿ 22ಕ್ಕೆ1, ಪ್ರಸಿಧ್ ಕೃಷ್ಣ 41ಕ್ಕೆ1, ​ಲಾಕಿ ಫರ್ಗುಸನ್​ 33ಕ್ಕೆ1, ಆ್ಯಂಡ್ರೆ ರಸೆಲ್ 28ಕ್ಕೆ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೆಕೆಆರ್​ ತಂಡದ ರಾಹುಲ್ ತ್ರಿಪಾಠಿ 45, ನಿತೀಶ್ ರಾಣಾ 37, ಆ್ಯಂಡ್ರೆ ರಸೆಲ್ 20 ಮತ್ತು ಕಾರ್ತಿಕ್ ಅವರ 26 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್​ಗಳಿಸಿತ್ತು.

Last Updated :Sep 26, 2021, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.