'ಬೆಳೆವ ಸಿರಿ ಮೊಳಕೆಯಲ್ಲಿ' ಎಂಬ ಮಾತಿದೆ, ಮಕ್ಕಳನ್ನು ನಾವು ಚಿಕ್ಕಂದಿನಲ್ಲಿ ಹೇಗೆ ಬೆಳೆಸುತ್ತೇವೋ, ಹೇಗೆ ಸಂಸ್ಕಾರ ಕಲಿಸುತ್ತೇವೆಯೋ ದೊಡ್ಡವರಾದಾಗ ಕೂಡಾ ಅದೇ ಸಂಸ್ಕಾರ ಬರುತ್ತದೆ. ಸಾಧಕರ ಜೀವನವೇ ಇದಕ್ಕೆ ಉತ್ತಮ ಉದಾಹರಣೆ. ಯಾವ ಕ್ಷೇತ್ರದ ಸಾಧಕರಾಗಲಿ, ಅವರೆಲ್ಲಾ ಚಿಕ್ಕಂದಿನಿಂದ ಪಟ್ಟ ಶ್ರಮವೇ ಇಂದು ಅವರು ಹೆಸರು ಮಾಡಲು ಕಾರಣ.
- " class="align-text-top noRightClick twitterSection" data="">
ಈ ಮಾತು ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರಿಗೂ ಅನ್ವಯಿಸುತ್ತದೆ. ವಿಜಯ್ ಪ್ರಕಾಶ್ ಹಾಡಿರುವ ಹಾಡುಗಳನ್ನು ಕೇಳದವರಿಲ್ಲ. ಮೂಲತಃ ಮೈಸೂರಿನರಾದ ವಿಜಯ್ ಪ್ರಕಾಶ್, ಇಂದು ಬಾಲಿವುಡ್ ಮಟ್ಟದಲ್ಲೂ ಹೆಸರು ಮಾಡಿದ್ದಾರೆ. ಸಂಗೀತ ಕಲೆ ಹುಟ್ಟಿನಿಂದಲೇ ಅವರ ರಕ್ತದಲ್ಲಿ ಬಂದಿದೆ. ವಿಜಯ್ ಪ್ರಕಾಶ್ ತಂದೆ ತಾಯಿ ಕೂಡಾ ಶಾಸ್ತ್ರೀಯ ಸಂಗೀತಗಾರರಾಗಿದ್ದರಿಂದ ವಿಜಯ್ ಪ್ರಕಾಶ್ ಅವರಿಗೆ ಬಾಲ್ಯದಲ್ಲೇ ಸಂಗೀತ ಕಲಿಯಲು ಸಹಾಯವಾಯ್ತು. ಇಷ್ಟೆಲ್ಲಾ ಹೇಳಲು ಕಾರಣ ಕೂಡಾ ಇದೆ. ವಿಜಯ್ ಪ್ರಕಾಶ್ ತಾವು 11 ವರ್ಷದವರಿರುವಾಗ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡಿದ್ದ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ.
1987 ರಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಪ್ರಕಾಶ್ ಹಂಚಿಕೊಂಡಿದ್ದಾರೆ. ' ಮೈಸೂರಿನ ಲಲಿತ್ ಮಹಲ್ ಪ್ಯಾಲೇಸಿನಲ್ಲಿ ನಾನು 11 ವರ್ಷದವನಿರುವಾಗ ಸಂಗೀತ ಕಾರ್ಯಕ್ರಮ ನೀಡಿದ್ದೆ, ನನ್ನ ಹಿಂದೆಯೇ ನನಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುತ್ತಾ ಕುಳಿತಿರುವ ನಮ್ಮ ತಂದೆಯನ್ನೂ ನೋಡಬಹುದು' ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ 'ಕನಸಿನಲ್ಲಿ ಬಂದು ನನ್ನ ಹರಸಿ ಹೋಗೆಯಾ ಗುರುವೇ' ಎಂಬ ಸುಂದರವಾದ ಗೀತೆಯನ್ನು ಎಲ್ಲರೂ ತಲೆದೂಗುವಂತೆ ಹಾಡಿದ್ದಾರೆ. ಇಂದು ವಿಜಯ್ ಪ್ರಕಾಶ್ ಗಾಯಕರಾಗಿ ಹೆಸರು ಮಾಡಲು ತಂದೆ ತಾಯಿ ನೀಡಿದ ಪ್ರೋತ್ಸಾಹ, ಅವರು ಕಲಿಸಿದ ಸಂಸ್ಕಾರವೇ ಕಾರಣ.
ವಿಜಯ್ ಪ್ರಕಾಶ್ ತಂದೆ ವಿದ್ವಾನ್ ಎಲ್. ರಾಮಶೇಷ ಅವರು ಕಳೆದ ವರ್ಷ ಏಪ್ರಿಲ್ನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ತಂದೆ ನಿಧನರಾದಾಗ ವಿಜಯ್ ಪ್ರಕಾಶ್ ಅಮೆರಿಕದ ಸಂಗೀತ ಕಾರ್ಯಕ್ರಮಗೊಂದರಲ್ಲಿ ಬ್ಯುಸಿ ಇದ್ದರು. ವಿಷಯ ತಿಳಿದ ಕೂಡಲೇ ಮೈಸೂರಿಗೆ ಬಂದ ವಿಜಯ್ ಪ್ರಕಾಶ್ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿದರು. ತಂದೆ ಕೂಡಾ ಸಂಗೀತಗಾರರಾಗಿದ್ದರಿಂದ 11ನೇ ದಿನದ ಪುಣ್ಯತಿಥಿಯಂದು ವಿಜಯ್ ಪ್ರಕಾಶ್ ತಂದೆಯ ಮೆಚ್ಚಿನ ಗೀತೆಗಳನ್ನು ಹಾಡಿದ್ದರು. ಈ ವಿಡಿಯೋ ಕೂಡಾ ವೈರಲ್ ಆಗಿತ್ತು.