ETV Bharat / sitara

ಕನ್ನಡಕ್ಕೆ ಮತ್ತೆ ಆರ್​ಜಿವಿ ಎಂಟ್ರಿ.. ರಿಯಲ್ ಸ್ಟಾರ್​ ಚಿತ್ರಕ್ಕೆ ಹೇಳ್ತಾರಾ ಆ್ಯಕ್ಷನ್ ಕಟ್?

author img

By

Published : Sep 18, 2021, 9:14 AM IST

ಆರ್​ಜಿವಿ
ಆರ್​ಜಿವಿ

ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಉಪೇಂದ್ರ ಅಭಿನಯಿಸಲಿರುವ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದವರು ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಮ್​ಗೋಪಾಲ್ ವರ್ಮಾ. ಈ ಚಿತ್ರ ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು.

ಆ ನಂತರ ಅವರು ಕನ್ನಡದ ಯಾವುದೇ ಚಿತ್ರ ನಿರ್ದೇಶಿಸದಿದ್ದರೂ, ಕನ್ನಡ ಚಿತ್ರರಂಗದೊಂದಿಗಿನ ಅವರ ಒಡನಾಟ ಚೆನ್ನಾಗಿಯೇ ಇದೆ. ಕಳೆದ ವರ್ಷ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದ ಅವರು, ಶಿವರಾಜ್​ ಕುಮಾರ್ ಅಭಿನಯದ ಟಗರು ಚಿತ್ರ ನೋಡಿ ಮೆಚ್ಚಿದ್ದರು.

ಈಗ ಆರ್​ಜಿವಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಉಪೇಂದ್ರ ಅಭಿನಯಿಸಲಿರುವ ಚಿತ್ರವೊಂದಕ್ಕೆ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಇಂದು ಉಪೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿವೆ. ಈ ಚಿತ್ರವನ್ನು ಎ ಸ್ಕ್ವೇರ್ ಪ್ರೊಡಕ್ಷನ್ಸ್​ನಡಿ ದಾವಣಗೆರೆಯ ರಾಜ್ ಯಜಮಾನ್ ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯ ಮೊದಲ ಚಿತ್ರವಾಗಿರಲಿದೆ.

ಇದನ್ನೂ ಓದಿ: ನಟನೆ ಜೊತೆಗೆ ವಿಷ್ಣುವರ್ಧನ್ ಗಾಯಕರಾದ ಇಂಟ್ರಸ್ಟ್ರಿಂಗ್ ಕಥೆ..

ಉಪೇಂದ್ರ ಅಭಿನಯದ ಚಿತ್ರವನ್ನು ಆರ್​ಜಿವಿ ನಿರ್ದೇಶಿಸುತ್ತಾರೆ ಎಂಬುದು ನಿಜವಾದರೆ, ಯಾವಾಗ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ಉಪೇಂದ್ರ ಅವರು ಲಗಾಮ್ ಮತ್ತು ಕಬ್ಜ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇವೆರೆಡೂ ಚಿತ್ರಗಳು ಪೂರ್ತಿಯಾಗುವುದಕ್ಕೆ ಇನ್ನೂ ಮೂರು ತಿಂಗಳಾದರೂ ಬೇಕು. ಇದಲ್ಲದೆ, ಉಪೇಂದ್ರ ಕೈಯಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ಇನ್ನೊಂದು ಕಡೆ ಆರ್​ಜಿವಿ ಸದ್ಯ ಯಾವುದೇ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿಲ್ಲ.

ಉಪೇಂದ್ರ ಬಿಡುವಾಗುವುದರೊಳಗೆ, ಅವರು ಕಥೆ-ಚಿತ್ರಕಥೆ ರೆಡಿ ಮಾಡಿಟ್ಟುಕೊಂಡು, ಮುಂದಿನ ವರ್ಷದಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಚಿತ್ರತಂಡದವರಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.