80ರ ದಶಕದಲ್ಲಿ ಅಣ್ಣಾವ್ರ 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಅಯಾಮ ನೀಡಿದ ಬಾಂಡ್ ಸಿನಿಮಾ. ನಂತರ ನಿರ್ದೇಶಕ ಸಿಂಪಲ್ ಸುನಿ ಹಾಗೂ ರಿಷಿ ಕಾಂಬಿನೇಷನ್ನ ಆಪರೇಷನ್ ಅಲಮೇಲಮ್ಮ ಕೂಡ ಬಂದು ಚಂದನವನದಲ್ಲಿ ಹೊಸದೊಂದು ಟ್ರೆಂಡ್ ಸೆಟ್ ಮಾಡಿತ್ತು. ಮತ್ತೆ ಅದೇ ಹೆಸರಿನಲ್ಲಿ 'ಆಪರೇಷನ್ ನಕ್ಷತ್ರ' ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಈ ಮೂಲಕ ಚಿತ್ರರಂಗದಲ್ಲಿ ಮತ್ತೊಂದು ಆಪರೇಷನ್ ಸದ್ದು ಮಾಡುತ್ತದೆಯೇ, ಇಲ್ಲವೇ ಎಂಬುದನ್ನು ಬಿಡುಗಡೆವರೆಗೂ ಕಾಯಬೇಕಿದೆ.
ಈಗಾಗಲೇ ಚಿತ್ರದ ಟ್ರೇಲರ್ನ ಬಿಡುಗಡೆ ಮಾಡಲಾಗಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳುತ್ತಿದೆ. ಟ್ರೇಲರ್ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ನಡೆದಿರುವ ಒಂದು ಕೊಲೆಯ ಸುತ್ತಲೂ ಇರುವ ಸತ್ಯಾಂಶಗಳನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುದೇ ಚಿತ್ರದ ಒನ್ಲೈನ್ ಸ್ಟೋರಿ. ಚಿತ್ರದಲ್ಲಿ ನಾಲ್ಕು ಪಾತ್ರಗಳಿದ್ದು, ಹಲವು ದಿನಗಳ ನಂತರ ಯಜ್ಞಾಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಲಿಖಿತ್ ಸೂರ್ಯ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೀಪಕ್ ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ, ಟಿ ಎಸ್ ಭರತ್ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ 'ಆಪರೇಷನ್ ನಕ್ಷತ್ರ' ಚಿತ್ರದ ಸೂತ್ರದಾರಿ ಮಧುಸೂಧನ್. ಅಷ್ಟೇ ಅಲ್ಲದೆ, ಕಥೆ, ಚಿತ್ರ ಕಥೆಯೂ ಅವರದ್ದೇ ಆಗಿದೆ.
ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಚಿತ್ರತಂಡ ನಿರತವಾಗಿದೆ. ಚಿತ್ರದಲ್ಲಿ ಸುಮಧುರವಾದ ಎರಡು ಹಾಡುಗಳಿದ್ದು, ವೀರ್ ಸಮರ್ಥ್ ಅವುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸಂಜಿತ್ ಹೆಗಡೆ ಹಾಡಿರುವ 'ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳ ಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ...' ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದೆ. ಅಲ್ಲದೆ ಈ ಹಾಡು ಮೆಲೊಡಿಯಾಗಿ ಮೂಡಿ ಬಂದಿದೆ.