ETV Bharat / science-and-technology

ದುಬೈನಲ್ಲಿ ಇಂದಿನಿಂದ ಕಾಪ್​ - 28 ಸಮಾವೇಶ: ಹವಾಮಾನ ಬದಲಾವಣೆ ತಗ್ಗಿಸುವ ಬಗ್ಗೆ ವಿಶ್ವನಾಯಕರ ಚರ್ಚೆ

author img

By ETV Bharat Karnataka Team

Published : Nov 30, 2023, 4:09 PM IST

Updated : Nov 30, 2023, 4:45 PM IST

ಕಾಪ್​-28 ಸಮಾವೇಶ
ಕಾಪ್​-28 ಸಮಾವೇಶ

ಬದಲಾಗುತ್ತಿರುವ ಹವಾಮಾನ ತಗ್ಗಿಸುವ ಕುರಿತು ಕಾರ್ಯತಂತ್ರ ರೂಪಿಸಲು ಇಂದಿನಿಂದ ಕಾಪ್​-28 ಸಮ್ಮೇಳನ ಆರಂಭವಾಗಿದೆ. ದುಬೈನಲ್ಲಿ ಇದರ ಸಮಾವೇಶ ನಡೆಯಲಿದೆ.

ನವದೆಹಲಿ: ಹವಾಮಾನ ಬದಲಾವಣೆ ತಗ್ಗಿಸುವ ಕುರಿತು ಚರ್ಚಿಸಲು ಇಂದಿನಿಂದ (ನವೆಂಬರ್ 30 ರಿಂದ 12 ಡಿಸೆಂಬರ್​​) ದುಬೈನಲ್ಲಿ ಕಾಪ್​-28 ಸಮ್ಮೇಳನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ವಿಶ್ವ ನಾಯಕರು ಈ ಸಮಾವೇಶದಲ್ಲಿ ವರ್ಚುಯಲ್​ ಆಗಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ದೇಶಗಳ ನಿಯೋಗಗಳು ಅಲ್ಲಿ ಹಾಜರಿರಲಿವೆ. ಜೀವನದ ಸುಸ್ಥಿರತೆಗೆ ಭೂಮಿಯ ಹೊರಪದರವು ಹೇಗೆ 'ನಿರ್ಣಾಯಕ ಪಾತ್ರ'ವನ್ನು ವಹಿಸುತ್ತದೆ ಎಂಬುದರ ಪ್ರಮುಖ ಚರ್ಚೆ ನಡೆಯಲಿದೆ.

ಪರಿಸರ ರಕ್ಷಣೆಗೆ ಅಗತ್ಯವಾಗಿರುವ ಓಝೋನ್​ ಪದರವು ವಿವಿಧ ಮಾಲನ್ಯದಿಂದಾಗಿ ಹಾನಿಯುಂಟಾಗುತ್ತಿದ್ದು, ಅದರ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯಲಿದೆ. ಹೊರಪದರ ಮತ್ತು ಬಾಷ್ಪಶೀಲ ವಸ್ತುಗಳ ಮರುಬಳಕೆಯಂತಹ ಪ್ರಕ್ರಿಯೆಗಳ ಮೂಲಕ ಮನುಷ್ಯ ಸೇರಿದಂತೆ ಪ್ರಾಣಿಗಳ ವಾಸಯೋಗ್ಯವಾದ ಭೂಮಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕಿದೆ. ಹೊರಪದರವು ಭೂಮಿಯನ್ನು ಶೆಲ್​ನಂತೆ ಕಾಪಾಡುತ್ತದೆ. ಇದನ್ನು ಹಲವಾರು ಟೆಕ್ಟೋನಿಕ್ ಪ್ಲೇಟ್‌ಗಳಾಗಿ ವಿಂಗಡಿಸಲಾಗಿದೆ. ಅದರ ಕೆಳಗಿರುವ ಅರೆ ದ್ರವ ಅಸ್ತೇನೋಸ್ಪಿಯರ್‌ನಲ್ಲಿ ತೇಲುತ್ತದೆ.

ಜ್ವಾಲಾಮುಖಿಯಿಂದಲೂ ಪರಿಸರಕ್ಕೆ ಹಾನಿ: ಭೂಮಿಯ ಹೊರಪದರವು ಕ್ರಿಯಾತ್ಮಕವಾಗಿದೆ. ಟೆಕ್ಟೋನಿಕ್ ಫಲಕಗಳು ಚಲನಶೀಲವಾಗಿವೆ. ಈ ಚಲನೆಯು ಜ್ವಾಲಾಮುಖಿಗಳಿಗೆ ಕಾರಣವಾಗುತ್ತವೆ. ಭೂಮಿಯ ಒಳಭಾಗದಿಂದ ಕರಗಿದ ಕಲ್ಲು ಅಥವಾ ಶಿಲಾಪಾಕವು ಜ್ವಾಲಾಮುಖಿ ಸ್ಫೋಟಗಳ ಮೂಲಕ ಮೇಲ್ಮೈಯನ್ನು ತಲುಪುತ್ತವೆ. ಸ್ಫೋಟದಿಂದಾಗಿ ನೀರಿನ ಆವಿ, ಇಂಗಾಲದ ಡೈಆಕ್ಸೈಡ್, ಸಾರಜನಕ ಮತ್ತು ಸಲ್ಫರ್ ಸಂಯುಕ್ತಗಳಂತಹ ಅನಿಲಗಳು ಮತ್ತು ಬಾಷ್ಪಶೀಲ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಇವೆಲ್ಲವೂ ಭೂಮಿಗೆ ಹಾನಿಕಾರಕವಾಗಿವೆ.

ಜ್ವಾಲಾಮುಖಿಗಳ ಆರಂಭಿಕ ಸ್ಥಿತಿಯಲ್ಲಿ ಉಂಟಾಗುವ ಬಿಸಿಯಿಂದ ಅನಿಲ ವಿಸರ್ಜನೆಯಾಗುತ್ತದೆ. ಮುಖ್ಯವಾಗಿ ಹೈಡ್ರೋಜನ್ ಸಲ್ಫೈಡ್, ಮೀಥೇನ್, ಕಾರ್ಬನ್ ಡೈಆಕ್ಸೈಡ್, ಹೀಲಿಯಂ, ಆರ್ಗಾನ್, ನಿಯಾನ್, ಕ್ಸೆನಾನ್ ಮತ್ತು ಕ್ರಿಪ್ಟಾನ್‌ನಂತಹ ಜಡ ಅನಿಲಗಳು ವಾತಾವರಣದಲ್ಲಿ ಸಂಗ್ರಹಗೊಳ್ಳುತ್ತವೆ ಎಂದು ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಬಿ ಶ್ರೀನಿವಾಸ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಬಾಷ್ಪಶೀಲ ವಸ್ತುಗಳ ಹೊರಹರಿವು ಭೂಮಿಯ ವಾತಾವರಣದ ಸಂಯೋಜನೆಗೆ ಕೊಡುಗೆ ನೀಡುತ್ತದೆ. ಉದಾಹರಣೆಗೆ, ಜ್ವಾಲಾಮುಖಿ ಚಟುವಟಿಕೆಯಿಂದ ಬಿಡುಗಡೆಯಾದ ನೀರಿನ ಆವಿಯು ಘನೀಕರಿಸುತ್ತದೆ. ಇವು ಮೋಡಗಳನ್ನು ರೂಪಿಸುತ್ತದೆ. ಮಳೆ ಮತ್ತು ಮೇಲ್ಮೈಯಲ್ಲಿ ನೀರಿನ ಹರಿವಿಗೆ ಕಾರಣವಾಗುತ್ತದೆ. ನೀರು ಜೀವನಕ್ಕೆ ಪ್ರಮುಖ ಘಟಕಾಂಶ ಎಂದು ಅವರು ಹೇಳಿದರು.

ಸ್ಪಷ್ಟ ಮಾರ್ಗಸೂಚಿ ನಿರೀಕ್ಷೆಯಲ್ಲಿ ಭಾರತ: ಇಂದಿನಿಂದ ಪ್ರಾರಂಭವಾಗಿರುವ COP28 ಸಮಾವೇಶದಲ್ಲಿ ಹವಾಮಾನ ತಗ್ಗಿಸುವ ಕಾರ್ಯತಂತ್ರಗಳಿಗೆ ಬೇಕಾಗುವ ಸ್ಪಷ್ಟ ಮಾರ್ಗಸೂಚಿಯನ್ನು ಭಾರತ ನಿರೀಕ್ಷಿಸುತ್ತಿದೆ. ಹವಾಮಾನ ಹಣಕಾಸು ಮತ್ತು ಹವಾಮಾನ ತಂತ್ರಜ್ಞಾನವು ಪರಿಸರದ ಅವನತಿಯ ಸವಾಲನ್ನು ಎದುರಿಸುವಲ್ಲಿ ಜಾಗತಿಕ ಪ್ರಯತ್ನ ಅತ್ಯಂತ ನಿರ್ಣಾಯಕವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಹವಾಮಾನ ಹಣಕಾಸು ಕುರಿತು COP28 ನಲ್ಲಿ ಸ್ಪಷ್ಟ ಮಾರ್ಗಸೂಚಿಯನ್ನು ಒಪ್ಪಿಕೊಳ್ಳುವ ಆಶಾಭಾವ ಇದೆ. ಹೊಸದಾದ ಮತ್ತು ಸಾಮೂಹಿಕ ಹೊಣೆಗಾರಿಕೆಯನ್ನು ರೂಪಿಸಬೇಕಿದೆ. ಹವಾಮಾನ ಬದಲಾವಣೆಯ ಮೇಲೆ ಕಾರ್ಯತಂತ್ರಗಳನ್ನು ರೂಪಿಸಲು ಬೇಕಾಗುವ ಹಣಕಾಸನ್ನು ಕ್ರೋಢೀಕರಿಸಬೇಕಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಟಾಟಾ ಟೆಕ್‌ ಷೇರುದಾರರಿಗೆ ಹೊಡೆದ ಬಂಪರ್‌​: ಒಂದು ಲಾಟ್​ಗೆ 21 ಸಾವಿರ ರೂಪಾಯಿ ಲಾಭ!

Last Updated :Nov 30, 2023, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.