ETV Bharat / opinion

'ಮತ್ತೆ ಮೇಲೇಳಲಿ ಭಾರತ' ನಿರ್ಮಾಣ: ಸವಾಲುಗಳು ಮತ್ತು ಮುಂದಿನ ದಾರಿ

author img

By

Published : May 14, 2021, 7:26 PM IST

India
India

ಕೋವಿಡ್-19ರ ಎರಡನೇ ಅಲೆ ತರಲಿರುವ ಹಾಗೂ ಮೂರನೇ ಅಲೆಯು ದೇಶವನ್ನು ಮತ್ತೆ ಅಪ್ಪಳಿಸುವ ಸಾಧ್ಯತೆಯೊಂದಿಗೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕಠಿಣ ಸಮಯವನ್ನು ನಾವೀಗ ಎದುರಿಸುತ್ತಿದ್ದೇವೆ. ಸರಿಯಾಗಿ ಒಂದು ವರ್ಷದ ನಂತರವೂ ನಾವು ಮತ್ತೆ ಒಂದು ವರ್ಷದ ಹಿಂದೆ ಇದ್ದ ಸ್ಥಾನದಲ್ಲಿಯೇ ಇದ್ದೇವೆ. ಪ್ರಕರಣಗಳ ಸಂಖ್ಯೆ ಕುಸಿತವಾದ ನಂತರ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತೊಂದು ‘ಪ್ಯಾಕೇಜ್’ ಬೇಕು ಎಂಬ ಬೇಡಿಕೆಗಳು ಮತ್ತೆ ಬರುವುದು ಈಗ ಸ್ಪಷ್ಟವಾಗಿದೆ.

ಕಳೆದ ವರ್ಷ ಕೋವಿಡ್-19 ಮೊದಲ ಅಲೆಯ ಹಿಡಿತದಲ್ಲಿ ಭಾರತ ಇದ್ದಾಗ, ಬದುಕು ಮತ್ತು ಜೀವನೋಪಾಯದ ವಿಷಯದಲ್ಲಿ ದೇಶವು ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ. ಇನ್ನೊಂದೆಡೆ, ಹೆಚ್ಚುತ್ತಿರುವ ಸೋಂಕಿನಿಂದ ಕೈಗೊಂಡ ಲಾಕ್​​ಡೌನ್ ಕ್ರಮದಿಂದಾಗಿ ಉದ್ಯೋಗ ಮತ್ತು ಉತ್ಪಾದನೆಯು ಕನಿಷ್ಠ ಮಟ್ಟಕ್ಕೆ ಇಳಿಯಿತು. ಇಂತಹ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ಸಂಕಷ್ಟವನ್ನು ಸರಾಗಗೊಳಿಸುವ ಸಲುವಾಗಿ, ಸರ್ಕಾರವು 20 ಲಕ್ಷ ಕೋಟಿ ರೂ.ಗಳ ಬೃಹತ್ ಆತ್ಮನಿರ್ಭರ ಪ್ಯಾಕೇಜ್​ ಅನ್ನು 2020ರ ಮೇ 13ರಂದು ಘೋಷಿಸಿತು.

ಮೂಲತಃ ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಹಣ ಹರಿದು ಬರುವಂತೆ ಮಾಡಿ ಬಂಡವಾಳ ಲಭ್ಯತೆಯನ್ನು ಖಾತರಿಪಡಿಸುವ ಕ್ರಮಗಳನ್ನು ಒಳಗೊಂಡಿತ್ತು. ಎಂಎಸ್‌ಎಂಇಗಳಿಂದ (ಲಘು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು) ಹಿಡಿದು ಬೀದಿ ವ್ಯಾಪಾರಿಗಳವರೆಗೆ, ವಿವಿಧ ಪಾಲುದಾರರಿಗೆ ನೀಡುವ ಬ್ಯಾಂಕ್ ಸಾಲಗಳಿಗೆ ಸರ್ಕಾರ ಖಾತರಿ ನೀಡುವ ಉಪಕ್ರಮಗಳನ್ನು ಇದು ಹೊಂದಿತ್ತು. ಮತ್ತೊಂದೆಡೆ, ಕೃಷಿ ಸಂಬಂಧಿ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದರ ಜೊತೆಗೆ ಕೃಷಿ, ಕೈಗಾರಿಕೆ ಮತ್ತು ವ್ಯಾಪಾರವನ್ನು ಸುಲಭವಾಗಿಸುವುದಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆಗಳನ್ನು ತರಲಾಯಿತು. ಇನ್ನೊಂದೆಡೆ, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಲ್ಲಿ ಖಾಸಗಿ ವಲಯದ ಪ್ರವೇಶ ಇನ್ನಷ್ಟು ಸುಲಭವಾಯಿತು.

ಆದಾಗ್ಯೂ, ಆರಂಭಿಕ ಹಂತಗಳಲ್ಲಿ ಕಂಡು ಬಂದಿದ್ದ ಚೇತರಿಕೆಯ ಚಿಹ್ನೆಗಳು, ಪ್ಯಾಕೇಜ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲೇ ಬಲು ಬೇಗ ಮಾಯವಾದವು. ಕೋವಿಡ್-19ರ ಎರಡನೇ ಅಲೆಯು ಯಾವ ಪರಿ ಅಪ್ಪಳಿಸಿತೆಂದರೆ, ದೇಶಾದ್ಯಂತ ಭಾರಿ ಪ್ರಮಾಣದ ಸಾವು ನೋವುಗಳನ್ನು ಹಾಗೂ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದ ಸೋಂಕನ್ನು ಉಂಟು ಮಾಡಿದೆ. ಭಾರತೀಯ ಆರ್ಥಿಕತೆಯು 1952ರಿಂದ ಕಾಣದಿದ್ದ ಅತಿ ದೊಡ್ಡ ಸಂಕಷ್ಟವನ್ನು ಈ ಅವಧಿಯಲ್ಲಿ ಎದುರಿಸಿತು.

ರೇಟಿಂಗ್​ ಸಂಸ್ಥೆಗಳಿಂದ ಭಾರತದ ಜಿಡಿಪಿ ಕಡಿತ

ಪರಿಸ್ಥಿತಿ ಹೀಗಿರುವಾಗ, ಇನ್ನೊಂದೆಡೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಭವಿಸಬೇಕಿದ್ದ ಆರ್ಥಿಕ ಬೆಳವಣಿಗೆಯ ದರವನ್ನು ತಜ್ಞರು ಮತ್ತಷ್ಟು ಕಡಿತಗೊಳಿಸಿದ್ದಾರೆ. ಎಸ್ & ಪಿ ಗ್ಲೋಬಲ್ ರೇಟಿಂಗ್ಸ್, ತನ್ನ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯ ಪ್ರಮಾಣವನ್ನು ಹಿಂದಿನ ಶೇಕಡಾ 11ರಿಂದ ಶೇಕಡಾ 9.8ಕ್ಕೆ ಕಡಿತಗೊಳಿಸಿದರೆ, ಫಿಚ್ ಸಲ್ಯೂಷನ್ಸ್ ಸಂಸ್ಥೆಯು ಆರ್ಥಿಕತೆಯ ವೃದ್ಧಿಯು ಶೇಕಡಾ 9.5 ರಷ್ಟು ಬೆಳವಣಿಗೆಯಾಗುವ ಮುನ್ಸೂಚನೆ ನೀಡಿದೆ. ಇದು ಬ್ಲೂಮ್‌ಬರ್ಗ್ ಸಂಸ್ಥೆಯ ಮುನ್ನೋಟವಾದ ಶೇಕಡಾ 11ಕ್ಕಿಂತ ಕೆಳಗಿಳಿಸಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಮುಖ್ಯವಾಗಿ ಆರ್ಥಿಕತೆಯಲ್ಲಿ ಉಳಿತಾಯದ ಕುಸಿತವೇ ಆರ್ಥಿಕ ವೃದ್ಧಿ ದರ ಕುಸಿತದ ಮುನ್ಸೂಚನೆಗೆ ಪ್ರಮುಖ ಕಾರಣಗಳು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕಠಿಣ ಸಮಯ

ಕೋವಿಡ್-19ರ ಎರಡನೇ ಅಲೆ ತರಲಿರುವ ಹಾಗೂ ಮೂರನೇ ಅಲೆಯು ದೇಶವನ್ನು ಮತ್ತೆ ಅಪ್ಪಳಿಸುವ ಸಾಧ್ಯತೆಯೊಂದಿಗೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕಠಿಣ ಸಮಯವನ್ನು ನಾವೀಗ ಎದುರಿಸುತ್ತಿದ್ದೇವೆ. ಸರಿಯಾಗಿ ಒಂದು ವರ್ಷದ ನಂತರವೂ ನಾವು ಮತ್ತೆ ಒಂದು ವರ್ಷದ ಹಿಂದೆ ಇದ್ದ ಸ್ಥಾನದಲ್ಲಿಯೇ ಇದ್ದೇವೆ. ಪ್ರಕರಣಗಳ ಸಂಖ್ಯೆ ಕುಸಿತವಾದ ನಂತರ, ಆರ್ಥಿಕತೆ ಪುನರುಜ್ಜೀವನಗೊಳಿಸಲು ಮತ್ತೊಂದು ‘ಪ್ಯಾಕೇಜ್’ ಬೇಕು ಎಂಬ ಬೇಡಿಕೆಗಳು ಮತ್ತೆ ಬರುವುದು ಈಗ ಸ್ಪಷ್ಟವಾಗಿದೆ.

ಇಂತಹ ವಿಪತ್ತಿನ ಸನ್ನಿವೇಶದಲ್ಲಿ ದೇಶವು ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಕಾರಣಕ್ಕಾಗಿ, ‘ಆತ್ಮನಿರ್ಭರ ಭಾರತ’ ಎಂಬ ನಮ್ಮ ಕಲ್ಪನೆಯನ್ನು ಪುನರ್ವಿಮರ್ಶಿಸುವುದು ಸೂಕ್ತ ಎನಿಸುತ್ತದೆ. ಆತ್ಮನಿರ್ಭರ ಪ್ಯಾಕೇಜ್‌ನ ವಿಷಯಕ್ಕೆ ಬಂದರೆ, ಕೆಲವು ನಿಗದಿತ ವೆಚ್ಚಗಳಿಗೆ ನೀಡುವ ಸಬ್ಸಿಡಿಗಳ ವಿಷಯಕ್ಕೆ ಸಂಬಂಧಿಸಿದಂತೆ ನೇರ ಬೆಂಬಲವನ್ನು ನೀಡುವ ಬದಲು ಸಾಲಗಳನ್ನು ನೀಡುವತ್ತಲೇ ಇದು ಹೆಚ್ಚಾಗಿ ಗಮನ ಕೇಂದ್ರೀಕರಿಸಿದೆ. ಈ ಸನ್ನಿವೇಶದಲ್ಲಿ ಗಮನಿಸಬೇಕಾದ ಅಂಶ ಎಂದರೆ, ಉದ್ಯಮವು ಯಾವಾಗ ಸಾಲದ ಮೊರೆ ಹೋಗುತ್ತದೆ ಎಂದರೆ, ಉದ್ಯಮವು ಅಭಿವೃದ್ಧಿ ಹೊಂದುತ್ತದೆ ಎಂಬ ಸಾಕಷ್ಟು ವಿಶ್ವಾಸವಿದ್ದಾಗ ಹಾಗೂ ಅದರ ನಿರೀಕ್ಷಿತ ಆದಾಯವು ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಸಮಾನವಾಗಿ ಅಥವಾ ಅದಕ್ಕೂ ಹೆಚ್ಚಿಗೆ ಇರುವಂತಿದ್ದಾಗ ಮಾತ್ರ. ಆರ್ಥಿಕತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಹೆಚ್ಚುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ಸಹಜವಾಗಿ ಕುಸಿಯುತ್ತದೆ. ಇಂತಹ ಸಮಯದಲ್ಲಿ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಯಾವ ರೀತಿಯ ಪ್ಯಾಕೇಜ್​​ನ್ನು ತರಬೇಕು ಎಂಬುದನ್ನು ನಿರ್ಧರಿಸುವುದಕ್ಕಿಂತ ಮುಂಚೆ ನಾವು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವ ಹಾಗೂ ಅದಕ್ಕೆ ತಕ್ಕಂತೆ ನೀತಿಗಳನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ.

ಸವಾಲುಗಳು:

ನಮ್ಮ ಕೈಯಲ್ಲಿರುವ ಮೊದಲ ಹಾಗೂ ಪ್ರಮುಖ ಸವಾಲೆಂದರೆ, ಆರ್ಥಿಕತೆಯಲ್ಲಿನ ಬಳಕೆಯ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವುದು. ಬೇಡಿಕೆಯ ಕುಸಿತವು ಉತ್ಪಾದನೆ ಕುಸಿಯಲು ಕಾರಣವಾಗುತ್ತದೆ. ಇದರಿಂದಾಗಿ ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಬಹುತೇಕ ರಾಜ್ಯಗಳು ಕೋವಿಡ್-19 ತಂದೊಡ್ಡಿರುವ ಲಾಕ್ ಔಟ್‌ನಂತಹ ನಿರ್ಬಂಧಗಳ ಅಡಿ ಇರುವುದರಿಂದ ಬೇಡಿಕೆಯ ಕುಸಿತ ಹೆಚ್ಚಾಗಲಿದೆ, ಅಂದರೆ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಲಿದೆ.

ಎರಡನೇ ಸವಾಲೆಂದರೆ, ಆದಾಯದ ಅಸಮಾನತೆಗಳನ್ನು ಎದುರಿಸುವುದು. ಕೋವಿಡ್ ಎರಡನೇ ಅಲೆಯ ನಂತರ ಇದು ಮತ್ತಷ್ಟು ಆಳವಾಗಿ ಹಾಗೂ ವಿಸ್ತೃತವಾಗಿ ಇರಲಿದೆ. ಇದರ ಜೊತೆಗೆ ಅಸಮಾನತೆಗಳಲ್ಲಿ ಏರಿಕೆ ಕಂಡುಬರಲಿದೆ. ಏಕೆಂದರೆ ಸಾಂಕ್ರಾಮಿಕ ಹಾಗೂ ಅದು ಉಂಟು ಮಾಡುವ ಆದಾಯದ ಮೇಲಿನ ಪರಿಣಾಮಗಳನ್ನು ನಿಭಾಯಿಸುವ ಸಾಮರ್ಥ್ಯವು ಸಮಾಜದ ವಿವಿಧ ವರ್ಗಗಳಿಗೆ ಬೇರೆ ಬೇರೆಯಾಗಿರುತ್ತದೆ. ಕಾರ್ಮಿಕ ವರ್ಗವು ಉದ್ಯೋಗಗಳನ್ನು ಕಳೆದುಕೊಂಡಿರುವ ಹಾಗೂ ಅವರ ಉಳಿತಾಯವು ಕರಗಿರುವ ಈ ಸಂದರ್ಭದಲ್ಲಿಯೇ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಬೆಳವಣಿಗೆಯನ್ನು ದಾಖಲಿಸಿವೆ. ಇದನ್ನು ನಾವು ಮೊದಲ ಅಲೆಯ ಸಮಯದಲ್ಲಿ ಹಾಗೂ ನಂತರ ನೋಡಿದ್ದೇವೆ. ಅಗತ್ಯ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳದಿದ್ದರೆ, ಎರಡನೇ ಅಲೆಯು ಹೋದ ನಂತರವೂ ಈ ಪರಿಸ್ಥಿತಿ ಪುನರಾವರ್ತನೆಯಾಗುತ್ತದೆ.

ಮೂರನೆಯ ಸವಾಲೆಂದರೆ, ಭಾರತದ ಕೈಗಾರಿಕಾ ಬೆಳವಣಿಗೆಗೆ, ವಿಶೇಷವಾಗಿ ಎಂಎಸ್‌ಎಂಇಗಳಿಗೆ ಪ್ರಮುಖವಾಗಿರುವ ಗ್ರಾಮೀಣ ಬೇಡಿಕೆಯಲ್ಲಿನ ಕುಸಿತ ಹಾಗೂ ಗ್ರಾಮೀಣ ವೇತನದಲ್ಲಿನ ನಿಶ್ಚಲತೆ. ಕೃಷಿ ಮತ್ತು ಎಂಎಸ್‌ಎಂಇ ವಲಯವು ಜಂಟಿಯಾಗಿ ದೇಶದ ಶೇಕಡಾ 80ರಷ್ಟು ಉದ್ಯೋಗಿಗಳನ್ನು ಪೋಷಿಸುತ್ತಿರುವುದರಿಂದ ಆರ್ಥಿಕತೆ ಮತ್ತೆ ಪುಟಿದೇಳಲು, ಅವುಗಳನ್ನು ಪುನರುಜ್ಜೀವನಗೊಳಿಸುವುದು ಮಹತ್ವದ್ದಾಗಿದೆ.

ಮುಂದಿನ ದಾರಿ:

ಬಳಕೆಯ ಬೇಡಿಕೆಯನ್ನು ಪುನಃಶ್ಚೇತನಗೊಳಿಸಬೇಕೆಂದರೆ ನಾವು ಭಾರಿ ಪ್ರಮಾಣದ ಹಣಕಾಸು ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕು (ಸಾಲ ನೀಡಿಕೆ ಅಲ್ಲ). ಉತ್ತಮ ಫಲಿತಾಂಶ ಪಡೆಯಬೇಕೆಂದರೆ ಇದೇ ಉತ್ತಮ ನೀತಿ. ನಿರುದ್ಯೋಗಿಗಳಿಗೆ ಕೆಲಸ ಒದಗಿಸುವಂತಹ ಸಾರ್ವಜನಿಕ ಖರ್ಚು, ರೈತರಿಗೆ ವೆಚ್ಚಕ್ಕೆ ಸಹಾಯಧನ, (ಇನ್‌ಪುಟ್ ಸಬ್ಸಿಡಿ), ಹಣಕಾಸಿನ ಪ್ರೋತ್ಸಾಹ ಮತ್ತು ಲಘು, ಸಣ್ಣ ಚಿಲ್ಲರೆ ವ್ಯಾಪಾರಗಳು ಹಾಗೂ ಎಂಎಸ್‌ಎಂಇಗಳ ನಿಗದಿತ ವೆಚ್ಚದ ಅವಶ್ಯಕತೆಗಳನ್ನು ಪೂರೈಸುವುದು ಈ ‘ಉತ್ತೇಜನಾ ಕ್ರಮ’ದ ಒಂದು ಭಾಗವಾಗಬಹುದು. ಎಂಎನ್‌ಆರ್‌ಇಜಿಎಸ್ (ಎಂನರೇಗಾ) ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹಂಚಿಕೆಗಳನ್ನು ಮಾಡುವ ಅವಶ್ಯಕತೆಯಿದೆ, ಇದು ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಬೇಡಿಕೆಯ ಬೆಳವಣಿಗೆಯನ್ನು ವೇಗಗೊಳಿಸಲಿದ್ದು ಪ್ರಸಕ್ತ ಸಮಯದಲ್ಲಿ ಇಂಥದೊಂದು ಕ್ರಮ ತುಂಬಾ ಅಗತ್ಯವಾಗಿದೆ. ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು, ಅಸ್ತಿತ್ವದಲ್ಲಿರುವ ಉದ್ಯೋಗಿಗಳು ಹಾಗೂ ಹೊಸ ನೇಮಕಾತಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರಿಗೆ ನಿರ್ದಿಷ್ಟ ಅವಧಿಯವರೆಗೆ ವೇತನ ಸಹಾಯಧನ ನೀಡುವ ನೀತಿಯನ್ನು ಪರಿಗಣಿಸಬಹುದು. ಅಂತಹ ಉಪಕ್ರಮವು ಉದ್ಯೋಗ ನಷ್ಟವನ್ನು ತಪ್ಪಿಸುತ್ತದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗಿಗಳಿಗೆ ಸ್ಥಿರವಾದ ಆದಾಯವನ್ನು ಖಾತರಿಗೊಳಿಸುತ್ತದೆ. ಆ ಮೂಲಕ ಆದಾಯದ ಅಸಮಾನತೆಗಳು ಹೆಚ್ಚಾಗುವುದನ್ನು ತಡೆಯುತ್ತದೆ.

ಇದರ ಜೊತೆಗೆ, ಬಡವರಿಗೆ ಮತ್ತು ದುರ್ಬಲರಿಗೆ ನಗದು ವರ್ಗಾವಣೆಯನ್ನು ಮತ್ತಷ್ಟು ಹೆಚ್ಚಿಸುವ ಅವಶ್ಯಕತೆಯಿದೆ. ಏಕೆಂದರೆ ತಮ್ಮ ಆದಾಯದ ಗರಿಷ್ಠ ಪಾಲನ್ನು ಅವರು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲಿಕ್ಕೇ ಖರ್ಚು ಮಾಡುತ್ತಾರೆ. ಇಂತಹ ಉಪಕ್ರಮವು ಗ್ರಾಹಕರ ಬೇಡಿಕೆ ಪ್ರಮಾಣವನ್ನು ಸುಧಾರಿಸುತ್ತದೆ. ಕೃಷಿ ಮತ್ತು ಎಂಎಸ್‌ಎಂಇ ವಲಯಗಳೆರಡನ್ನೂ ಪುನರುಜ್ಜೀವನಗೊಳಿಸುವುದು ಆದಾಯವನ್ನು ಒದಗಿಸುವುದಲ್ಲದೇ ನಂತರ ಬಳಕೆಗೂ ಉತ್ತೇಜನ ನೀಡುತ್ತದೆ. ಆದ್ದರಿಂದ ಈಗ ಮಾಡಬೇಕಾದ ಕೆಲಸವೇನೆಂದರೆ, ಹಣಕಾಸಿನ ಕ್ರಮಗಳೊಂದಿಗೆ ಈ ಕ್ಷೇತ್ರಗಳಿಗೆ ಸಹಾಯ ಮಾಡುವುದು. ಇದು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವುದು. ಇನ್ನು, ಹಣಕಾಸಿನ ಕೊರತೆಯ ಸಮಸ್ಯೆ ಖಂಡಿತವಾಗಿಯೂ ಉದ್ಭವಿಸುತ್ತದೆ. ಆದರೆ, ಬಹುಸಂಖ್ಯಾತ ಭಾರತೀಯರ ಜೀವನ ಮತ್ತು ಜೀವನೋಪಾಯದ ಪ್ರಶ್ನೆಗಿಂತ ಇದು ದೊಡ್ಡದಾಗಿರಲಿಕ್ಕಿಲ್ಲ. ದೇಶಕ್ಕೆ ಈಗ ಜೀವನ ರೇಖೆ ಬೇಕು. ಚೇತರಿಸಿಕೊಂಡ ನಂತರವಷ್ಟೇ ಅದು ‘ಆತ್ಮನಿರ್ಭರ’ವಾಗಬಹುದು ಹಾಗೂ ಮತ್ತೆ ಮೇಲಕ್ಕೆ ಎದ್ದು ನಿಲ್ಲಬಲ್ಲುದು.

- ಡಾ. ಮಹೇಂದ್ರ ಬಾಬು ಕುರುವಾ

(ಲೇಖಕರು ಸಹಾಯಕ ಪ್ರಾಧ್ಯಾಪಕರು, ವ್ಯವಹಾರ ನಿರ್ವಹಣಾ ವಿಭಾಗ, ಹೆಚ್.ಎನ್.ಬಿ. ಗಢವಾಲ್ ಕೇಂದ್ರ ವಿಶ್ವವಿದ್ಯಾಲಯ, ಶ್ರೀನಗರ ಗಢವಾಲ್, ಉತ್ತರಾಖಂಡ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.