ETV Bharat / international

ಇಸ್ರೇಲ್ - ಹಮಾಸ್ ಯುದ್ಧ: ಆಹಾರ, ನೀರಿನ ಕೊರತೆಯಿಂದ ಹತಾಶೆಗೊಂಡ ಪ್ಯಾಲೆಸ್ಟೀನಿಯರು: ವಿಶ್ವಸಂಸ್ಥೆ ಕಳವಳ

author img

By PTI

Published : Dec 8, 2023, 8:25 AM IST

Etv Bharat
Etv Bharat

ಇಸ್ರೇಲ್- ಹಮಾಸ್ ಯುದ್ಧದ ಪರಿಣಾಮ ಆಹಾರ, ನೀರಿನ ಕೊರತೆಯಿಂದ ಪ್ಯಾಲೆಸ್ಟೀನಿಯರು ಹತಾಶೆಗೊಂಡು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ವಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ.

ದೇರ್ ಅಲ್-ಬಲಾಹ್ (ಗಾಜಾ ಪಟ್ಟಿ): ಹಮಾಸ್​ನವರೊಂದಿಗೆ ಇಸ್ರೇಲಿ ಪಡೆಗಳು ಭೀಕರ ಕದನಗಳಲ್ಲಿ ತೊಡಗಿರುವ ಕಾರಣಕ್ಕೆ ಪ್ಯಾಲೆಸ್ಟೀನಿಯರು ಆಹಾರ ಮತ್ತು ನೀರಿನ ಸರಬರಾಜಿನಿಂದ ಕೊರತೆಯಿಂದ ಹತಾಶೆಗೆ ಒಳಗಾಗಿರುವುದು ಕಂಡುಬಂದಿದೆ. ಯುದ್ಧದ ಪರಿಣಾಮ ದಕ್ಷಿಣ ಗಾಜಾ ಪಟ್ಟಣವಾದ ರಾಫಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಾಗರಿಕರು ಆಶ್ರಯ ಪಡೆಯಲು ಭಯಪಡುತ್ತಿದ್ದಾರೆ. ಇಸ್ರೇಲ್ ಭೂಪ್ರದೇಶದ ದಕ್ಷಿಣ ಭಾಗಕ್ಕೆ ತನ್ನ ಆಕ್ರಮಣ ವಿಸ್ತರಿಸಿದ್ದು, ಕಳೆದ ಒಂದು ವಾರದಿಂದ ಗಾಜಾದಲ್ಲಿ ಯಾವುದೇ ಸುರಕ್ಷಿತ ಸ್ಥಳಗಳಿಲ್ಲ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧದ ಎಫೆಕ್ಟ್​ನಿಂದ ಖಾನ್ ಯೂನಿಸ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಗಾಜಾದ ಬಹುತೇಕ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಅಗತ್ಯ ನೆರವು ಒದಗಿಸುವುದನ್ನು ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಶೇ 80ಕ್ಕಿಂತ ಹೆಚ್ಚು ಜನರು ಈಗಾಗಲೇ ತಮ್ಮ ಮನೆಗಳನ್ನು ತೊರೆದಿದ್ದಾರೆ.

ವಿಶ್ವಸಂಸ್ಥೆ ಚಾರ್ಟರ್‌ನ ಆರ್ಟಿಕಲ್ 99 ಉಲ್ಲೇಖ: ಎರಡು ತಿಂಗಳ ಯುದ್ಧದಲ್ಲಿ ಉಭಯ ದೇಶಗಳ ನಡುವೆ ಆಕ್ರಮಣಗಳು ತೀವ್ರಗೊಂಡಿರುವ ಆತಂಕಕ್ಕೆ ಕಾರಣವಾಗಿದೆ. ಇದರ ಹಿನ್ನೆಲೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರೆಸ್ ಅವರು, ಯುದ್ಧದಿಂದ ಗಾಜಾದಲ್ಲಿ ಎದುರಾಗಿರುವ ಮಾನವೀಯ ದುರಂತದ ಕುರಿತು ಭದ್ರತಾ ಮಂಡಳಿಗೆ ಎಚ್ಚರಿಕೆ ನೀಡಿದ್ದು, ಕದನ ವಿರಾಮಕ್ಕೆ ಒತ್ತಾಯಿಸಲು ಭದ್ರತಾ ಮಂಡಳಿ ಸದಸ್ಯರಿಗೆ ಆಗ್ರಹ ಮಾಡಿದ್ದಾರೆ.

ವಿಶ್ವಸಂಸ್ಥೆ ಚಾರ್ಟರ್‌ನ ಆರ್ಟಿಕಲ್ 99 ಅನ್ನು ಉಲ್ಲೇಖಿಸಿ ಗುಟೆರೆಸ್ ಅವರು, ಇದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ವಿಷಯವನ್ನು ಕೌನ್ಸಿಲ್‌ನ ಗಮನಕ್ಕೆ ತರಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು. ವಿಶ್ವಸಂಸ್ಥೆಯ ಇತಿಹಾಸದಲ್ಲಿ ಈ ಅಧಿಕಾರವನ್ನು ಬೆರಳೆಣಿಕೆಯಷ್ಟು ಅಧಿಕಾರಿಗಳು ಬಾರಿ ಮಾತ್ರ ಬಳಕೆ ಮಾಡಿದ್ದಾರೆ.

ಆತಂಕಕ್ಕೆ ಒಳಗಾದ ಅಮೆರಿಕ ಅಧಿಕಾರಿಗಳು: ಇಸ್ರೇಲ್‌ನ ನಿಕಟ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಈ ಯುದ್ಧವನ್ನು ತಡೆಯುವ ಪ್ರಯತ್ನ ಮಾಡುವ ಸಾಧ್ಯತೆಯಿದೆ. ಈಗಾಗಲೇ ವಿನಾಶದ ಬಗ್ಗೆ ಅಮೆರಿಕ ದೇಶ ಕೂಡ ಆಲೋಚಿಸಿದೆ. ಇಸ್ರೇಲ್​ ತನ್ನ ಭೂಪ್ರದೇಶದ ದಕ್ಷಿಣ ಭಾಗದಲ್ಲಿ ಹೆಚ್ಚಿಸಿದ ಆಕ್ರಮಣ ಬಗ್ಗೆ ಆತಂಕಗೊಂಡ ಅಮೆರಿಕ ಅಧಿಕಾರಿಗಳು, ಇಸ್ರೇಲ್‌ಗೆ ನಾಗರಿಕ ಸಾವುಗಳು ಮತ್ತು ಸ್ಥಳಾಂತರ ಮಾಡುವುದನ್ನು ಮಿತಿಗೊಳಿಸಬೇಕು. ಇಸ್ರೇಲ್ ಗಾಜಾ ನಗರ ಮತ್ತು ಉತ್ತರದ ಹೆಚ್ಚಿನ ಭಾಗದ ಮೇಲೆ ದಾಳಿ ಮಾಡಿದ್ದರಿಂದ ಅನೇಕ ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದರು.

ಬ್ಲಿಂಕೆನ್, ಡರ್ಮರ್‌ ಮಾತುಕತೆ: ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಗುರುವಾರ, ಇಸ್ರೇಲಿ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡರ್ಮರ್ ಜೊತೆಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ''ಯುದ್ಧದಿಂದ ಮತ್ತಷ್ಟು ಸಾವು ನೋವುಗಳು ಹೆಚ್ಚಿವೆ. ಸಾವು -ನೋವುಗಳನ್ನು ಕಡಿಮೆ ಮಾಡಲು ಇಸ್ರೇಲ್ ಪ್ರಯತ್ನ ಮಾಡಬೇಕು. ಗಾಜಾಕ್ಕೆ ಮಾನವೀಯ ನೆರವು ಒದಗಿಸಲು ಮುಂದಾಗಬೇಕು ಎಂದು ಬ್ಲಿಂಕೆನ್ ಅವರು, ಡರ್ಮರ್‌ಗೆ ತಿಳಿಸಿದರು.

ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್‌ನ ಮಿಲಿಟರಿ ಸಾಮರ್ಥ್ಯಗಳನ್ನು ಹತ್ತಿಕ್ಕಬೇಕು. ಅದನ್ನು ಅಧಿಕಾರದಿಂದ ತೆಗೆದುಹಾಕಬೇಕು ಎಂದು ಇಸ್ರೇಲ್ ಹೇಳುತ್ತದೆ. ಇಸ್ರೇಲಿ ಪಡೆಗಳಿಂದ ಗಾಜಾದಲ್ಲಿ ನೂರಾರು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಇಸ್ರೇಲಿ ಸೇನಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ.

ಮಾನವೀಯ ನೆರವು: ದೇರ್ ಅಲ್-ಬಾಲಾಹ್‌ನಲ್ಲಿ ಅವ್ಯವಸ್ಥೆಯ ದೃಶ್ಯವು ಸಾಮಾನ್ಯವಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ. ಈ ಭಾಗದಲ್ಲಿರುವ ಶಾಲೆಗಳಲ್ಲಿ ಆಶ್ರಯ ಪಡೆದ ಸಂತ್ರಸ್ತ ಕುಟುಂಬಗಳ ಸಮೂಹಕ್ಕೆ ಮಾನವೀಯ ನೆರವು ಒದಗಿಸಲಾಗುತ್ತಿದೆ. ಉತ್ತರ ಗಾಜಾದಲ್ಲಿ ಮತ್ತು ದಕ್ಷಿಣದ ಖಾನ್ ಯೂನಿಸ್‌ನಲ್ಲಿ ನೆಲದ ಕಾದಾಟದ ನಡುವೆ ದೇರ್ ಅಲ್-ಬಾಲಾ ಪ್ರದೇಶ ಸಿಲುಕಿಕೊಂಡಿದೆ. ಈ ಪ್ರದೇಶದ ಮೇಲೆ ಕಳೆದ 24 ಗಂಟೆಗಳಲ್ಲಿ ನಡೆದ ಬಾಂಬ್ ದಾಳಿಗೆ ಒಳಗಾಗಿ ಸಾವನ್ನಪ್ಪಿದವರ 115 ಮೃತದೇಹಗಳನ್ನು ಪಟ್ಟಣದ ಅಲ್-ಅಕ್ಸಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಂತಾರಾಷ್ಟ್ರೀಯ ನೆರವು ಗುಂಪು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ತಿಳಿಸಿದೆ.

ಹಸಿವಿನ ಬಿಕ್ಕಟ್ಟಿನ ಕುರಿತು ಡಬ್ಲ್ಯೂಎಫ್​ಪಿ ಎಚ್ಚರಿಕೆ: ರಾಫಾದ, ಖಾನ್ ಯೂನಿಸ್ ಮತ್ತು ಇತರ ಪ್ರದೇಶಗಳಿಂದ ಸಾವಿರು ಜನರು ಆಶ್ರಯಪಡೆದಿದ್ದಾರೆ. ಈ ಪ್ರದೇಶಗಳಿಗೆ ಸುಮಾರು 470,000ಕ್ಕೂ ಹೆಚ್ಚು ಸಂತ್ರಸ್ತರು ಸ್ಥಳಾಂತರಗೊಂಡಿದ್ದಾರೆ. ಶೆಲ್ಟರ್‌ಗಳು ಮತ್ತು ಮನೆಗಳು ನಿರಾತ್ರಿತರಿಂದ ತುಂಬಿ ಹರಿಯುತ್ತಿವೆ. ಅನೇಕ ಜನರು ಟೆಂಟ್‌, ಬೀದಿಗಳಲ್ಲಿ ಮಲಗುತ್ತಿದ್ದಾರೆ. ಈ ಭಾಗದಲ್ಲಿ ಅತಿಸಾರ, ಉಸಿರಾಟದ ಸೋಂಕುಗಳು ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವ ಆಹಾರ ಕಾರ್ಯಕ್ರಮ(ಡಬ್ಲ್ಯೂಎಫ್​ಪಿ)ವು ಹಸಿವಿನ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿದೆ.

ಆಶ್ರಯಕ್ಕಾಗಿ ನಿರಾಶ್ರಿತರ ಹೆಣಗಾಟ: ಹಮಾಸ್‌ನ ಅಕ್ಟೋಬರ್ 7 ರಂದು ದಾಳಿ ನಡೆಸಿ, 1,200 ಇಸ್ರೇಲಿಗಳನ್ನು ಹತ್ಯೆ ಮಾಡಿತ್ತು. 240 ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿತ್ತು. ಇದರಿಂದ ಆಕ್ರೋಶಗೊಂಡ ಇಸ್ರೇಲಿ ಪ್ರತಿದಾಳಿ ನಡೆಸಿತ್ತು. ಇದರಿಂದಾಗಿ ಗಾಜಾ ಪಟ್ಟಿ ಪ್ರದೇಶದಲ್ಲಿರುವ ಸಾವಿರಾರು ಜನರು ಮೃತಪಟ್ಟರು. ಜೊತೆಗೆ ಸಾವಿರಾರು ನಿರಾಶ್ರಿತರಾಗಿದ್ದಾರೆ. ಗಾಜಾ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಗಾಜಾದಲ್ಲಿ ಸಾವಿನ ಸಂಖ್ಯೆ 16,015 ಆಗಿದೆ. ಉತ್ತರ ಗಾಜಾದಲ್ಲಿ ಲಕ್ಷಾಂತರ ಜನರು ಯುದ್ಧದ ಸಮಯದಲ್ಲಿ ನಿರಾಶ್ರಿತರಾಗಿದ್ದಾರೆ. ಅವರು ಆಶ್ರಯ ಪಡೆಯಲು ಹೆಣಗಾಡುತ್ತಿದ್ದಾರೆ.

ಇದನ್ನೂ ಓದಿ: ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಮನೆ ಸುತ್ತುವರಿದ ಐಡಿಎಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.