ETV Bharat / entertainment

ನೀವು ಯಾರ ಪರ? ಯಾವ ಪಕ್ಷಕ್ಕೆ ಅಧಿಕಾರ?: ಪತ್ನಿ ಪ್ರಶ್ನೆಗೆ ಯೋಗರಾಜ್​ ಭಟ್ರ ಉತ್ತರ ಹೀಗಿತ್ತು.. ವಿಡಿಯೋ ನೋಡಿ

author img

By

Published : May 12, 2023, 12:50 PM IST

Yogaraj Bhatt
ಯೋಗರಾಜ್​ ಭಟ್​ ದಂಪತಿ ಸಂಭಾಷಣೆ

ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಪತ್ನಿಯ ಪ್ರಶ್ನೆಗೆ ಯೋಗರಾಜ್​ ಭಟ್ರು ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

ಯೋಗರಾಜ್​ ಭಟ್​ ದಂಪತಿ ಸಂಭಾಷಣೆ

ಕರ್ನಾಟಕದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನು ಒಂದು ದಿನ ಬಾಕಿ ಇದೆ. ಈ ಮಧ್ಯೆ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಯೋಗರಾಜ್‌ ಭಟ್ ಈ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಅವರು ರಾಜಕೀಯದ ಬಗ್ಗೆ ಯಾವತ್ತೂ ಮಾತಾಡೋದಿಲ್ಲ.

ಎಲ್ಲ ರಾಜಕೀಯ ಮುಖಂಡರೊಂದಿಗೂ ಚೆನ್ನಾಗಿರೋ ಭಟ್ರು ರಾಜಕೀಯ ಪಕ್ಷಗಳ ಬಗ್ಗೆ ಈವರೆಗೂ ನೇರವಾಗಿ ಮಾಡಿದ್ದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಫ್ಯಾಮಿಲಿ ಜೊತೆ ಮತ ಚಲಾಯಿಸಿ ಹೊಸ ಅವತಾರದಲ್ಲಿ ಪತ್ನಿ ಹಾಗೂ ಮಗಳೊಂದಿಗೆ ರಾಜಕೀಯ ಲೆಕ್ಕಾಚಾರ ವಿಶ್ಲೇಷಣೆ ಮಾಡಿದ್ದಾರೆ. ಮೀಸೆ ತೆಗೆದು ಹೊಸ ಅವತಾರದಲ್ಲಿ ಭಟ್ರು ಪ್ರತ್ಯಕ್ಷ ಆಗಿದ್ದಾರೆ. ಈ ಬಾರಿ ಯಾವ ಪಕ್ಷ ಗೆಲ್ಲಬಹುದು ಅನ್ನೋ ಪತ್ನಿಯ ಪ್ರಶ್ನೆಗೆ ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.

ಯೋಗರಾಜ್ ಭಟ್‌ಗೆ ಪತ್ನಿ ಕೇಳಿದ ಪ್ರಶ್ನೆಗಳಿವು..: ನೀವು ಯಾವ ಪಾರ್ಟಿ ಪರ ಅಂತ ಕೇಳಬಹುದಾ? ಯಾವ ಸೈಡ್ ನೀವು? ಎಂದು ನೇರವಾಗಿಯೇ ಗಂಡನಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಭಟ್ರು, "ನಮ್ಮನ್ನು ಸಿನಿಮಾ ನಿರ್ದೇಶಕರು, ದಿಗ್ಗಜರು ಅಂತ ಕರೀತಾರೆ. ಟಾಪು, ಬಾಟಮ್ಮು, ಫ್ರಂಟು, ಬ್ಯಾಕು, ಎಡ, ಬಲ ಎಲ್ಲ ಒಂದೇ ತರ ಅಂತ ಅಂದುಕೊಳ್ಳಬಹುದು. ಎಲ್ಲ ದಿಕ್ಕಿಗೂ ಸಮಾನ ರೆಸ್ಪೆಕ್ಟ್ ಕೊಡಬೇಕು. ಮನುಷ್ಯತ್ವ ಮುಖ್ಯ. ಮನುಷ್ಯನ ದಿಕ್ಕು ತಗೊಂಡು ಏನು ಮಾಡೋಣ? ನಾನು ಅಥವಾ ನಮ್ಮಂತಹವರು ನಿರ್ಲಿಪ್ತ, ನಿರ್ವಿಘ್ನ ನಾಗರೀಕರು" ಎಂದು ಒಗಟಾಗಿ ಉತ್ತರಿಸಿದರು.

ಸಿನಿಮಾದವರೆಲ್ಲ ಅಲ್ಲಿ ಇಲ್ಲಿ ಪ್ರಚಾರಕ್ಕೆ ಹೋಗ್ತಿದ್ರೆ, ತಾವು ಹೋಗಿಲ್ವೇನು? ಎಂದು ಪತ್ನಿ ಕೇಳಿದ್ದಾರೆ. ಇದಕ್ಕೆ ಭಟ್ರು, "ಅದು ಅವರವರ ಆಸೆ, ಅವರವರ ಆಯ್ಕೆ. ತಪ್ಪು ಸರಿ ಚರ್ಚೆ ಮಾಡುವುದಕ್ಕೆ ಹೋಗಬಾರದು. ಕಾಸು ಖುಷಿ ಕೆಡಿಸಿತು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅಂತ ಒಂದು ಗಾದೆ ಇದೆ" ಎಂದು ಪಂಚ್​ ಉತ್ತರ ಕೊಟ್ಟರು.

ನಿಮ್ಮ ಪ್ರಕಾರ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಂಬ ಪ್ರಶ್ನೆಗೆ ಯೋಗರಾಜ್​ ಭಟ್ರು, "ಜಮಾನ ತುಂಬಾ ಸ್ಪೀಡ್ ಆಗಿದೆ. ಮನುಷ್ಯ ಕಂಡು ಹಿಡಿದುಕೊಂಡಿದ್ದನ್ನೆಲ್ಲ ಮನುಷ್ಯನೇ ಸ್ಪೀಡ್ ಮಾಡಿಕೊಂಡಿದ್ದಾನೆ. ಈ ಹಿಂದೆ 5 ದಿನ ಟೆಸ್ಟ್ ಕ್ರಿಕೆಟ್ ಅಂತ ನಡೆಯುತ್ತಿತ್ತು. ಅದೀಗ ಒಂದು ದಿವಸ ಆಡೋದೇ ದೊಡ್ಡದಾಯ್ತು. ಈಗ 20 ಓವರ್‌ಗೆ ಬಂದಾಗಿದೆ. ಇನ್ನೊಂದು ಸ್ವಲ್ಪ ದಿನ ಬರೀ ಹೈಲೈಟ್ಸ್ ಅಷ್ಟೇ. ಇನ್ನು ಮೂರುವರೆ ನಾಲ್ಕು ತಾಸು ಸಿನಿಮಾಗಳೆಲ್ಲವೂ ಇದ್ದವು. ಅವೆಲ್ಲ ಈಗ 20 ಸೆಕೆಂಡ್ ರೀಲ್ಸ್, ಶಾರ್ಟ್ ಆಗಿ ಮೊಬೈಲ್‌ನಲ್ಲಿ ಬಂದು ಬಿದ್ದು ಬಿಡುತ್ತವೆ. ಇನ್ನು ಐದು ವರ್ಷಕ್ಕೆ ಮತ್ತೊಂದು ಚುನಾವಣೆ ನಾಲ್ಕರಿಂದು ಐದು ಮಂದಿ ಕೂತು ಏಳುತ್ತಾರೆನೋ ಗೊತ್ತಿಲ್ಲ. ವರ್ಷಕ್ಕೆ ಇಬ್ಬರು ಅಂತ ಬಂದರೆ, ವರ್ಷಕ್ಕೊಂದು ಎಲೆಕ್ಷನ್ ಲೆಕ್ಕಾನೇ ಬರುತ್ತೆ" ಎಂದು ಉತ್ತರಿಸಿದರು.

ತಮ್ಮಂಗೆ ಬದುಕೋದು ಹೇಗೆ ಸ್ವಾಮಿ? ಎಂಬ ಪತ್ನಿಯ ಪ್ರಶ್ನೆಗೆ, "ನನ್ನ ಹಾಗೇ ಯಾರೂ ಇರಬಾರದು. ನಾನೊಬ್ಬನೇ ಇರಬೇಕು" ಎಂದು ಹೇಳಿದರು. ನಿಮ್ಮ ಪ್ರಕಾರ, ಮನುಷ್ಯರು ಈಗ ಏನು ಮಾಡಬೇಕು? ಎಂದು ಪತ್ನಿ ಕೇಳಿದಕ್ಕೆ ಭಟ್ರು, "ಮನುಷ್ಯರು ಏನು ಮಾಡಬೇಕು ಅಂತ ಹೇಳುವುದಕ್ಕೆ ನಾವ್ಯಾರು? ನಾವೇನು ಮಾಡಬೇಕೋ ಅದನ್ನು ಮಾತ್ರ ಯೋಚನೆ ಮಾಡಬೇಕು" ಎಂಬ ಉತ್ತರವನ್ನು ಕೊಟ್ಟರು. ನೀವೇನಾಗ್ಬೇಕು ಅಂತಿದ್ದೀರಾ ಅದನ್ನಾದ್ರೂ ಹೇಳಿ ಎಂದು ಪತ್ನಿ ಕೇಳಿದ್ದಕ್ಕೆ ಆದಿ ಮಾನವ ಆಗಿಬಿಡೋಣ ಅಂತ ಹೇಳಿದ್ದಾರೆ.

ಇದನ್ನು ಅಲ್ಲೇ ಕುಳಿತು ಕೇಳುತ್ತಿದ್ದ ಅವರ ಮಗಳು ನಗುತ್ತಾ ನೀವು ಈಗಲೂ ಹಂಗೇ ಇರೋದು ಎಂದಿದ್ದಾರೆ. ಸದ್ಯ ಯೋಗರಾಜ್ ಭಟ್ ತಮ್ಮ ಫ್ಯಾಮಿಲಿ ಜೊತೆ ಮಾಡಿರೋ ಈ ವಿಡಿಯೋ ಚುನಾವಣೆ ಫಲಿತಾಂಶ ಬೆನ್ನಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ನಟ ಅಮೀರ್​ ಖಾನ್​ ಜೊತೆ ಕ್ರಿಕೆಟಿಗ ಚಹಾಲ್​ ದಂಪತಿ ಫೋಟೋ: ಫ್ಯಾನ್ಸ್​ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.