ETV Bharat / entertainment

ಟಾಕಿ ಕಾಲದಲ್ಲಿ ಮೂಕಿ 'ಮಹಾಗುರು': 36 ವರ್ಷಗಳ‌ ಬಳಿಕ ಕನ್ನಡದಲ್ಲಿ ಬರ್ತಿದೆ ಮೂಕಿಚಿತ್ರ

author img

By

Published : Jun 27, 2023, 4:45 PM IST

ಕನ್ನಡದಲ್ಲಿ ಮತ್ತೊಂದು ಮೂಕಿಚಿತ್ರ ಮಹಾಗುರು ತೆರೆಕಾಣಲು ಸಜ್ಜಾಗಿದೆ.

Mahaguru movie
ಮೂಕಿಚಿತ್ರ ಮಹಾಗುರು

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಚಿತ್ರಗಳು ಕನ್ನಡಿಗರ ಮನ ಗೆಲ್ಲುತ್ತಿವೆ. ಇದೀಗ 36 ವರ್ಷಗಳ ಬಳಿಕ ಕನ್ನಡದಲ್ಲಿ ಮೂಕಿಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಅಸಲಿಗೆ ಸಿನಿಮಾ ಜಗತ್ತು ಆರಂಭವಾಗಿದ್ದೇ ಮೂಕಿ ಚಿತ್ರದಿಂದ. ಆನಂತರ ಟಾಕಿಚಿತ್ರಗಳ ಯುಗ ಶುರುವಾಯಿತು. ಕನ್ನಡದಲ್ಲಿ 36 ವರ್ಷಗಳ ಹಿಂದೆ ಪುಷ್ಪಕ ವಿಮಾನ ಎಂಬ ಚಿತ್ರ ತೆರೆ ಕಂಡಿತ್ತು. ಇದೀಗ ಮತ್ತೊಂದು ಮೂಕಿಚಿತ್ರ ತೆರೆಗಪ್ಪಳಿಸಲು ರೆಡಿಯಾಗಿದೆ. ಈ ಚಿತ್ರದ ಶೀರ್ಷಿಕೆ 'ಮಹಾಗುರು'. ಇದೊಂದು ಫ್ಯಾಂಟಸಿ ಚಲನಚಿತ್ರವಾಗಿದ್ದು, ಚಿತ್ರತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿದೆ.

ಮೈಸೂರು ರಮಾನಂದ್, ಮಹಿಮಾ ಗುಪ್ತಾ, ಬ್ಯಾಂಕ್ ಜನಾರ್ಧನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಸಿ. ಮಹೇಂದ್ರನ್ ಕ್ಯಾಮರಾ ವರ್ಕ್ ನಿಭಾಯಿಸಿದ್ದಾರೆ. ಕಾಡಿನ‌ ಮಧ್ಯೆ ಇರುವ ಗುಪ್ತನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ ಹಾಗೂ ಅದನ್ನು ಕಾಯುತ್ತಿರುವ ಯಕ್ಷಕನ್ಯೆಯ ನಡುವೆ ನಡೆಯುವ ಕಥಾಹಂದರವೇ ಈ ಚಿತ್ರ.

Mahaguru movie
ಮಹಾಗುರು ಚಿತ್ರತಂಡ

ಹಿರಿಯ ನಟ ಮೈಸೂರು ರಮಾನಂದ್ ಮಾತನಾಡಿ, "ನಾನು ಈವರೆಗೆ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಈ ಹಿಂದೆ ಸ್ಟಂಟ್ ಮಾಸ್ಟರ್ ಎಂಬ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದೆ. ಸದ್ಯ ಈ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡಿದ್ದೇನೆ. ಒಬ್ಬ ಕುಳ್ಳನಾದರೆ, ಮತ್ತೊಬ್ಬ ಸಾಮಾನ್ಯ ವ್ಯಕ್ತಿಯಾಗಿ ನನ್ನ ಪಾತ್ರಗಳಿವೆ. ಈ ಪಾತ್ರಗಳನ್ನು ನಿರ್ವಹಿಸಲು ಸ್ವಲ್ಪ ಶ್ರಮ ಹಾಕಬೇಕಾಯ್ತು. ನಿಧಿ ಹುಡುಕಿಕೊಂಡು ಹೋಗುವ ಮಂತ್ರವಾದಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ಆವರಿಗೆ ನಿಧಿ ಸಿಗುತ್ತೋ ಇಲ್ವೋ ಅನ್ನೋದೇ ಕಥೆ. ಮಾತುಗಳೇ ಇಲ್ಲದೇ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರ. ಎರಡೂ ‌ಪಾತ್ರಗಳು ತುಂಬಾ ಚೆನ್ನಾಗಿವೆ. ಇದರಲ್ಲಿ ಉತ್ತಮ ಚಿತ್ರಕಥೆ, ದೃಶ್ಯಸಂಯೋಜನೆ ಇದೆ. ಕನ್ನಡ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದೆ" ಎಂದು ತಿಳಿಸಿದರು.

"ಒಂದು ವಿಶೇಷ ಪ್ರಯೋಗದಂತೆ ಸಿನಿಮಾ ಪ್ಲ್ಯಾನ್ ಮಾಡಿದೆವು. ಸೌಂಡ್ ಎಫೆಕ್ಟ್​ನಲ್ಲೇ ಕಥೆ ಹೇಳುತ್ತೇವೆ. ಚಿತ್ರವನ್ನು ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರದ್ದು ನನಗೆ ಹಳೇ ಪರಿಚಯ. ಸಿಜಿ ವರ್ಕ್ ನಾನೇ ಮಾಡುತ್ತಿದ್ದೇನೆ. ಇದು ನನ್ನ ನಿರ್ದೇಶನದ ಮೂರನೇ ಸಿನಿಮಾ. ಬೆಂಗಳೂರು ಮೂವಿಸ್ ಸ್ಟುಡಿಯೋದಲ್ಲಿ 8 ದಿನ ಸೆಟ್ ಹಾಕಿ ಚಿತ್ರೀಕರಿಸಿದ್ದೇವೆ. ಸಕಲೇಶಪುರ ಕಾಡಿನಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ" ಅನ್ನೋದು ನಿರ್ದೇಶಕ ಕಸ್ತೂರಿ ಜಗನ್ನಾಥ್ ಮಾತು.

ಇದನ್ನೂ ಓದಿ: '7 ಸ್ಟಾರ್ ಸುಲ್ತಾನ' ಕುರುಬಾನಿ ಕೊಡದಿರಲು ನಿರ್ಧಾರ: ಫಲಿಸಿತು 'ಟಗರು ಪಲ್ಯ' ಚಿತ್ರತಂಡದ ಮನವಿ

ಮುಂಬೈ ಮೂಲದ ನಾಯಕಿ‌ ಮಹಿಮಾ ಗುಪ್ತ ಮಾತನಾಡಿ, "ನಾನು ಮೂಲತಃ ಮಾಡೆಲ್. ಕೆಲ ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದು ಮೊದಲ ಕನ್ನಡ ಚಿತ್ರ. ಇದರಲ್ಲಿ ನಿಧಿ ಕಾಯುವ ಏಂಜಲ್ ಆಗಿ ಕಾಣಿಸಿಕೊಂಡಿದ್ದೇನೆ" ಎಂದು ತಿಳಿಸಿದರು.

ಹಿರಿಯ ಛಾಯಾಗ್ರಾಹಕ ಎ.ಸಿ. ಮಹೇಂದ್ರನ್ ಮಾತನಾಡಿ, "ಈವರೆಗೆ 55 ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿದ್ದೇನೆ. ಈ ಸಿನಿಮಾದಲ್ಲಿ ಶೇ. 75ರಷ್ಟು ಭಾಗ ಕಾಡಿನಲ್ಲೇ ಶೂಟ್ ಮಾಡಿದ್ದೇವೆ. ಶೇ. 25ರಷ್ಟು ಮನೆಯೊಂದರಲ್ಲಿ ಚಿತ್ರೀಕರಿಸಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಬಹುತಾರಾಗಣದ 'ಪ್ರಾಜೆಕ್ಟ್ ಕೆ': ಈ ಬಿಗ್​​ ಸ್ಟಾರ್ಸ್​ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.