ETV Bharat / entertainment

ನಿರ್ಮಾಪಕ ಕುಮಾರ್​ ಆರೋಪಕ್ಕೆ ಸುದೀಪ್​ ಬೇಸರ: ಕಿಚ್ಚ ಬರೆದ ಪತ್ರದಲ್ಲೇನಿದೆ ಗೊತ್ತಾ?

author img

By

Published : Jul 10, 2023, 5:16 PM IST

kiccha
ಸುದೀಪ್

ನಿರ್ಮಾಪಕ ಎಂ.ಎನ್​ ಕುಮಾರ್​ ಆರೋಪದ ಬೆನ್ನಲ್ಲೇ ಇದೀಗ ಕಿಚ್ಚ ಸುದೀಪ್​ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಟ ಕಿಚ್ಚ ಸುದೀಪ್​ ಅವರ ಮೇಲೆ ನಿರ್ಮಾಪಕ ಎಂ.ಎನ್​ ಕುಮಾರ್​ ಮಾಡಿರುವ ಗಂಭೀರ ಆರೋಪ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಿನ್ನೆಯಷ್ಟೇ​ ನಿರ್ಮಾಪಕ ಜಾಕ್​ ಮಂಜು ಅವರು ಸುದೀಪ್​ ಅವರ ಮೇಲೆ ಹೊರಿಸಿರುವ ಆರೋಪದ ಬಗ್ಗೆ ನಾವು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಕಿಚ್ಚ ಸುದೀಪ್​ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕಿಚ್ಚ ಪತ್ರದಲ್ಲೇನಿದೆ?: "ಎಲ್ಲರಿಗೂ ನಮಸ್ಕಾರ! ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ. ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯ. ಈ ಕಳೆದ 27 ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕನಾಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಈ 27 ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರ ಬರೆಯುತ್ತಿದ್ದೇನೆ.

ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆ ಎಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲ ಎಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.

ಅಲ್ಲದೇ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ ಎಂ.ಎನ್​. ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪುಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ.

ಇದೆಲ್ಲವನ್ನೂ ತಮಗೆ ವಿವರಿಸಿದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿಕೊಂಡಿತು. ಸಂಧಾನ ಎಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು. ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲ ಎಂಬ ನನ್ನ ನಿಲುವಿಗೆ ನಾನು ಬದ್ಧವಾಗುವುದು.

ಇನ್ನು ಇದನ್ನು ಒಂದು ಉದಾಹರಣೆಯಾಗಿ ತಮಗೆ ಅರ್ಥ ಮಾಡಿಸುವುದಾದರೆ, ಒಂದು ದಾಂಪತ್ಯದಲ್ಲಿ ಬಿರುಕು ಬಂದರೆ, ಆ ಕುಟುಂಬದ ಸ್ನೇಹಿತರು, ಯಾರ ಪರವಾಗಿ ನಿಲ್ಲಬೇಕೆಂದು ಸಂಕಟ ಪಡುತ್ತಾರೆ. ಆ ಸಂದಿಗ್ಧತೆಯಲ್ಲಿ ಒಬ್ಬರ ಪರ ನಿಲ್ಲುವುದು ಸಮಂಜಸವೂ ಆಗಿರುವುದಿಲ್ಲ. ಅಂತಹದ್ದೇ ಒಂದು ಒತ್ತಡ, ಸಂದಿಗ್ದತೆ ಈಗ ನಮ್ಮ ಮಾತೃ ಸಂಸ್ಥೆಗಳದ್ದು. ಆ ಒತ್ತಡ, ಸಂಕಷ್ಟಕ್ಕೆ ನೀವುಗಳು ಸಿಲುಕಬಾರದೆಂದೇ ನಾನು ನ್ಯಾಯಾಲಯದ ಮೊರೆ ಹೋಗಿದ್ದು.

27 ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ್​ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ.

ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆಯಿಂದಲೇ. ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತಿದ್ದೇನೆ.

ಈಗಲೂ, ಈ ವಿಷಯದಲ್ಲಿ ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದು ಚಿತ್ರರಂಗದ ಮುಂದಿನ ಭವಿತವ್ಯಕ್ಕೆ ಕೆಟ್ಟ ಉದಾಹರಣೆಗಳು ದಕ್ಕಬಾರದು ಎಂದು. ಸಂಪೂರ್ಣ ಸಂಭಾವನೆ ಪಡೆದು ಸಿನಿಮಾ ಮಾಡಲಿಲ್ಲವೆಂಬ ದುಷ್ಟ ಸುಳ್ಳು, ಉದಾಹರಣೆಗೆ ನಾನು ಸಿಲುಕಬಾರದು. ಈ ಕಾರಣಕ್ಕೆ ಬೇರೆಲ್ಲರ ವಿಷಯದಲ್ಲಿ ಅತ್ಯಂತ ಮಾನವೀಯವಾಗಿ, ಪ್ರೀತಿಯಿಂದ ವರ್ತಿಸುವ ನಾನು ಕಠಿಣವಾಗಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ನಿಲುವಿಗೆ ಬದ್ಧನಾಗಿದ್ದೇನೆ.

ಒಂದು ಮಾತು ನಿಮ್ಮ ಪತ್ರಿಕಾಗೋಷ್ಠಿಯಲ್ಲಿ ಹೊರಬಂತು. ಅದು ನನಗೆ ತೀವ್ರ ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು. ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕು ಎಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರು ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ, ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ, ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕೆಟ್ಟ ಬೆಳವಣಿಗೆ ಆರಂಭವಾಯಿತು?.

ದೈಹಿಕವಾಗಿ, ಮಾನಸಿಕವಾಗಿ, ಕುಮಾರ್​ಗಾಗಲಿ, ಯಾರಿಗೇ ಆಗಲಿ, ಹಲವಾರು ಸಮಸ್ಯೆಗಳು ಬರಬಹುದು, ಹಾಗೇನಾದರು ಅವರಿಗೆ ತೊಂದರೆ ಆದರೆ ಅದು ನನ್ನಿಂದ ಎಂಬ ಮಹಾಪರಾಧದ ಹೇಳಿಕೆ ನನಗೆ ತೀವ್ರ ನೋವು ತಂದಿದೆ. ನಾನು ಬದುಕಿನುದ್ದಕ್ಕೂ ಈ ನೋವನ್ನು ಅನುಭವಿಸಲೇ? ಇಂತಹ ಘಟನೆಗೆ ನಾನು ಸಾಕ್ಷಿ ಪ್ರಜ್ಞೆ ಆಗಲಾರೆ. ಹಾಗಾಗಿ ನ್ಯಾಯಾಲಯದ ಹೋರಾಟಕ್ಕೆ ಸುರೇಶ್​ ಅವರನ್ನು ಭಾಗಿ ಮಾಡಿದೆ. ಅವರಿಗೂ ನೋಟಿಸ್ ಕಳುಹಿಸಿದೆ. ವಿನಃ ಕೋಪ ತಾಪ ಆಕ್ರೋಶದಿಂದಲ್ಲ. ನೋವಿನಿಂದ ಸುರೇಶ್ ಅವರ ವಿಚಾರದಲ್ಲಿ ಇನ್ನೂ ವಿವರಿಸುವುದಾದರೆ ನಿನ್ನೆ ತನಕ ಅಪರಿಚಿತರೋ, ಪರಿಚಿತರೋ, ಸಿನಿಮಾ ರಂಗದವರೋ ಅಲ್ಲವೋ, ಸಹಕಲಾವಿದರೋ, ತಂತ್ರಜ್ಞರೋ ಯಾರೇ ಬಂದು ಸಹಾಯ ಕೇಳಿದಾಗಲೂ ದೇವರು ಕೊಟ್ಟಿರುವ ಶಕ್ತಿಯಲ್ಲಿ ನನ್ನ ಕೈಲಾದಷ್ಟೂ ಸಹಾಯ ಮಾಡಿದ್ದೇನೆ.

ಯಾರದೇ ಆಗಲಿ ಜೀವನ - ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ. ಎಲ್ಲ ನಿರ್ಮಾಪಕರ ಬಗ್ಗೆ ಗೌರವವಿಲ್ಲದೆ, ನಂಬಿಕೆ ಇಲ್ಲದೆ, ಇಷ್ಟರವರೆಗೆ ನಾನು ಚಿತ್ರರಂಗದಲ್ಲಿ ನೆಲೆನಿಂತೇನೆ? ನನ್ನ ಮನೆಯಲ್ಲೂ ವೃದ್ಧ ಪೋಷಕರಿದ್ದಾರೆ. ನಂಗೂ ಕಣ್ಣೀರಿದೆ. ದುಃಖ ದುಮ್ಮಾನಗಳಿವೆ. ನಮ್ಮಲ್ಲಿ ಯಾರಿಗೇ ತೊಂದರೆಯಾದರೂ, ಮಂಡಳಿಯೇ ಅಥವಾ ಯಾವುದೇ ನಿರ್ದಿಷ್ಟ ವ್ಯಕ್ತಿ ಹೊಣೆಗಾರ ಎನ್ನಲಾದಿತೇ? ಎಂದಾದರೂ ಹಾಗೆ ನಡೆದುಕೊಂಡಿದ್ದೇನೆಯೇ?

ಇನ್ನು, ರಾಜರಾಜೇಶ್ವರಿ ನಗರದ ಮನೆಯ ವಿಷಯದಲ್ಲಿ ಒಂದು ಸ್ಪಷ್ಟನೆ ತಮಗೆ ವೈಯಕ್ತಿಕವಾಗಿ ನೀಡುತ್ತೇನೆ. ನಾನು ತುಂಬಾ ಆಸ್ತಿವಂತ ಅಲ್ಲದೇ ಇರಬಹುದು. ಆದರೆ, ಸಂಪಾದಿಸಿದ ಆಸ್ತಿಯಲ್ಲಿ ನನ್ನ ಬೆವರಿದೆ, ಶ್ರಮವಿದೆ. ಶೇಕಡಾ 95ರಷ್ಟು ಬ್ಯಾಂಕ್ ಲೋನ್ ಪಡೆದು ಆ ಮನೆ ಖರೀದಿಸಿದ್ದೇನೆ. ಈ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ನೀಡಬಲ್ಲೆ ಎಂಬ ನೈತಿಕ ಶಕ್ತಿಯ ಮೇರೆಗೆ ಈ ಕಠಿಣ ನಿಲುವು ಹೊಂದಿದ್ದೇನೆ.

ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರಿರಬಹುದು, ತಂತ್ರಜ್ಞರಿರಬಹುದು, ಯಾವುದೇ ವಿಭಾಗದವರಾಗಿರಬಹುದು. ಆ ದೂರಿನ ಕುರಿತಾದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದುವರಿಯಿರಿ ಮತ್ತು ಈ ಕೆಟ್ಟ ಪರಂಪರೆಗೆ ನಾಂದಿ ಹೇಳುವುದಕ್ಕೆ ನಾವು ಯಾರು ಹೊಣೆಗಾರರಾಗುವುದು ಬೇಡ.

ದಯಮಾಡಿ ತಾವು ಸಂದಿಗ್ಧತೆಗೆ ಒಳಗಾಗದೇ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೊಡಿ. - ಎಂದೆಂದಿಗೂ ನಿಮ್ಮವ ಕಿಚ್ಚ ಸುದೀಪ" ಎಂದು ಸುದೀಪ್​ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ​ ಕುಮಾರ್​ ಅವರಿಂದ ಸುದೀಪ್ ಒಂದು ರೂಪಾಯಿಯನ್ನೂ ಪಡೆದಿಲ್ಲ: ಪ್ರಕರಣದ ಬಗ್ಗೆ ಜಾಕ್ ಮಂಜು ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.