ETV Bharat / entertainment

ಗೋಮಾಂಸದ ಬಗ್ಗೆ ಹೇಳಿಕೆ: ಉಜ್ಜೈನ್​ ದೇವಸ್ಥಾನದಲ್ಲಿ ರಣಬೀರ್ ಕಪೂರ್ ದಂಪತಿ ತಡೆದ ಬಜರಂಗ ದಳ

author img

By

Published : Sep 7, 2022, 5:03 PM IST

bajrang-dal-workers-protest-against-ranbir-and-alia-visit-to-mahakaleshwar
ಉಜ್ಜೈನ್​ ದೇವಸ್ಥಾನದಲ್ಲಿ ರಣಬೀರ್ ಕಪೂರ್ ದಂಪತಿಯನ್ನು ತಡೆದ ಬಜರಂಗ ದಳ

ರಣಬೀರ್ ಕಪೂರ್ ಗೋಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಣಬೀರ್ ದಂಪತಿಗೆ ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಉಜ್ಜೈನ್ (ಮಧ್ಯಪ್ರದೇಶ): ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಧ್ಯಪ್ರದೇಶದ ಉಜ್ಜೈನ್​ನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಜರಂಗ ದಳದ ಕಾರ್ಯಕರ್ತರು ಮುಖ್ಯ ದ್ವಾರದಲ್ಲೇ ಗದ್ದಲ ಸೃಷ್ಟಿಸಿದ್ದಾರೆ. ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಸ್ಟಾರ್​ ನಟ-ನಟಿಯರನ್ನು ಅಲ್ಲಿಯೇ ತಡೆದು ಪ್ರತಿಭಟನೆ ನಡೆಸಿದರು.

bajrang-dal-workers-protest-against-ranbir-and-alia-visit-to-mahakaleshwar
ನಿರ್ದೇಶಕ ಅಯಾನ್ ಮಹಾಕಾಳೇಶ್ವರನ ದರ್ಶನ ಪಡೆದರು.

ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ಬಜರಂಗ ದಳದ ಕಾರ್ಯಕರ್ತರ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು. ಗೋಮಾಂಸ ತಿನ್ನುತ್ತೇನೆ ಎಂದು ಎಂಬ ರಣಬೀರ್ ಹೇಳಿಕೆಯನ್ನು ಖಂಡಿಸಿ ಕಪ್ಪು ಬಾವುಟ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಉಜ್ಜೈನ್​ ದೇವಸ್ಥಾನದಲ್ಲಿ ರಣಬೀರ್ ಕಪೂರ್ ದಂಪತಿಯನ್ನು ತಡೆದ ಬಜರಂಗ ದಳ

ರಣಬೀರ್ ಕಪೂರ್ ಗೋಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವುದು ಒಳ್ಳೆಯದು ಎಂದು ಹೇಳಿದ್ದಾರೆ. ಹೀಗಾಗಿ ರಣಬೀರ್ ದಂಪತಿಗೆ ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಗೋಮಾಂಸ ಭಕ್ಷಕರನ್ನು ದೇವಾಲಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ಗೋಮಾಂಸ ತಿನ್ನುವವರಿಗೆ ದೇವಾಲಯವನ್ನು ಪ್ರವೇಶಿಸಲು ಹೇಗೆ ಅನುಮತಿ ನೀಡಲಾಯಿತು ಎಂಬುದಕ್ಕೂ ಆಡಳಿತವು ಉತ್ತರಿಸಬೇಕೆಂದು ಬಜರಂಗ ದಳದ ಮುಖಂಡ ಅಂಕಿತ್​ ಚೌಬೆ ಕಿಡಿಕಾರಿದರು.

ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು. ಅಲ್ಲದೇ, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಯಾನ್ ಮುಖರ್ಜಿ ಅವರನ್ನು ಸುರಕ್ಷಿತವಾಗಿ ಉಜ್ಜೈನ್​ ಜಿಲ್ಲಾಧಿಕಾರಿ ಮನೆಗೆ ಕರೆದುಕೊಂಡು ಹೋದರು. ನಂತರ ನಿರ್ದೇಶಕ ಅಯಾನ್ ಮತ್ತು ತಂಡಕ್ಕೆ ಮಾತ್ರವೇ ಮಹಾಕಾಳೇಶ್ವರನ ಆಶೀರ್ವಾದ ಪಡೆಯಲು ಅವಕಾಶ ನೀಡಲಾಯಿತು. ಆದರೆ, ಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದೇವರ ದರ್ಶನವನ್ನೂ ಪಡೆಯದೇ ವಾಪಸ್​ ಬರಬೇಕಾಯಿತು.

2011ರಲ್ಲಿ ರಾಕ್‌ಸ್ಟಾರ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಗೋಮಾಂಸದ ಬಗ್ಗೆ ಮಾತನಾಡಿದ್ದರು. ನನ್ನ ಕುಟುಂಬವು ಪೇಶಾವರದಿಂದ ಬಂದಿದೆ. ನನಗೆ ಮಟನ್, ಪಾಯ ಮತ್ತು ಗೋಮಾಂಸ ಇಷ್ಟ ಎಂದು ಹೇಳಿದ್ದರು. ಇದು ಬಜರಂಗ ದಳದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು, ಸೆಪ್ಟೆಂಬರ್ 9ರಂದು ತೆರೆಗೆ ಬರಲಿರುವ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಅಭಿನಯಿಸಿದ್ದಾರೆ. ಅಲ್ಲದೇ, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಹಾಕಾಳೇಶ್ವರನ ದರ್ಶನಕ್ಕೆ ಹೊರಟ ಆಲಿಯಾ ಭಟ್ ರಣಬೀರ್ ಕಪೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.