ETV Bharat / entertainment

Rachita Ram: ಸ್ವಚ್ಛತಾ ಕಾರ್ಮಿಕನಿಗೆ ಕಾರು ಡಿಕ್ಕಿ; ಮನೆಗೆ ಕರೆಸಿ ಕ್ಷಮೆ ಯಾಚಿಸಿದ ನಟಿ‌ ರಚಿತಾ ರಾಮ್

author img

By

Published : Aug 15, 2023, 6:46 PM IST

Updated : Aug 15, 2023, 8:00 PM IST

Rachita Ram apologized with worker
ಸ್ವಚ್ಛತಾ ಕಾರ್ಮಿಕನಲ್ಲಿ ಕ್ಷಮೆಯಾಚಿಸಿದ ನಟಿ‌ ರಚಿತಾ ರಾಮ್

Actress Rachita Ram: ಆಕಸ್ಮಿಕವಾಗಿ ಸ್ವಚ್ಛತಾ ಕಾರ್ಮಿಕನಿಗೆ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ನಟಿ‌ ರಚಿತಾ ರಾಮ್ ಕ್ಷಮೆ ಯಾಚಿಸಿದ್ದಾರೆ.

ಬೆಂಗಳೂರು: ಕಾರು ಚಾಲಕನಿಂದಾದ ಆಕಸ್ಮಿಕ ತಪ್ಪಿನಿಂದ ನಿನ್ನೆ (ಸೋಮವಾರ) ಸ್ಯಾಂಡಲ್​ವುಡ್​ ನಟಿ​ ರಚಿತಾ ರಾಮ್ ಅವರು ಮುಜುಗರಕ್ಕೆ ಒಳಗಾಗಿದ್ದರು. ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೋಗುವ ಸಂದರ್ಭದಲ್ಲಿ ರಚಿತಾ ರಾಮ್‌ ಅವರಿದ್ದ ಕಾರು ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ನಟಿ ಕಾರ್ಮಿಕನ ಬಳಿ ಕ್ಷಮೆಯಾಚಿಸದೇ ಸ್ಥಳದಿಂದ ಹೊರಟು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಜಾಲತಾಣ ಸೇರಿದಂತೆ ಕಾರ್ಮಿಕರ ಒಕ್ಕೂಟಗಳಿಂದಲೂ ವಿರೋಧ ವ್ಯಕ್ತವಾಗಿತ್ತು.

ಈ‌ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಚಿತಾ ರಾಮ್‌, ಇಂದು ಕಾರ್ಮಿಕನನ್ನು ತಮ್ಮ ಮನೆಗೆ ಕರೆಸಿಕೊಂಡು ಕ್ಷಮೆಯಾಚಿಸಿದ್ದಾರೆ. "ಲಾಲ್‌ ಬಾಗ್‌ ಕಾರ್ಯಕ್ರಮಕ್ಕೆ ಹೋದ ವೇಳೆ ಆಕಸ್ಮಿಕವಾಗಿ ಘಟನೆ ನಡೆಯಿತು. ಇಂದು ನಾನು ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಕಾರು ಗುದ್ದಿದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮ ಕಡೆಯಿಂದ ತಪ್ಪಾಗಿತ್ತು. ನಾನು ಬೇಕಂತಲೇ ಮಾಡಿದ ತಪ್ಪಲ್ಲ. ಆಕಸ್ಮಿಕವಾಗಿ ನಡೆದಿದೆ. ಹೀಗಾಗಿ, ಅಣ್ಣಾ ನಾನು ನಿಮ್ಮಲ್ಲಿ ಮನಸಾರೆ ಕ್ಷಮೆ ಕೇಳುತ್ತೇನೆ. ನಮ್ಮ ಚಾಲಕನ ಕಡೆಯಿಂದಲೂ ಕ್ಷಮೆ ಯಾಚಿಸುತ್ತಿದ್ದೇನೆ. ಈ ವಿಚಾರವಾಗಿ ಕಾರ್ಮಿಕರಿಗೆ ನೋವುಂಟಾಗಿದ್ದರೆ, ಇನ್ನೊಮ್ಮೆ ಸಾರಿ ಕೇಳುತ್ತೇನೆ" ಎಂದು ತಿಳಿಸಿದರು.

ರಚಿತಾ ರಾಮ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾರ್ಮಿಕ ರಂಗಪ್ಪ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ ಕೋರಿದ್ದಾರೆ.

"ನಾನು ಸ್ವಾತಂತ್ರ್ಯ ದಿನಾಚರಣೆಯಂದು ಎಂದಿಗೂ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿರಲಿಲ್ಲ. ಆದರೆ, ಇಂದು ಬೆಳಗ್ಗೆ ರಂಗಪ್ಪ ನಮ್ಮ ಮನೆಗೆ ಬರುವವರೆಗೂ ಕಾದು, ನಂತರ ಸ್ವಾತಂತ್ರ್ಯ ದಿನಾಚರಿಸಿದೆವು. ರಂಗಪ್ಪ ಅವರು ಲಾಲ್‌ಬಾಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ" ಎಂದು ರಚಿತಾ ರಾಮ್‌ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Akshay Kumar: 'ಮನಸ್ಸು, ಪೌರತ್ವ ಎರಡೂ ಹಿಂದೂಸ್ತಾನಿ'.. ಅಧಿಕೃತವಾಗಿ ಭಾರತೀಯ ಪ್ರಜೆಯಾದ ನಟ ಅಕ್ಷಯ್​ ಕುಮಾರ್

ರಚಿತಾ ರಾಮ್‌ ಸಿನಿಮಾ ವಿಚಾರ ಗಮನಿಸುವುದಾದರೆ, ಸದ್ಯ ಮಾಟ್ನಿ ಸಲುವಾಗಿ ಸುದ್ದಿಯಲ್ಲಿದ್ದಾರೆ. ಮನೋಹರ್ ಕಾಂಪಲ್ಲಿ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ರಚಿತಾ ರಾಮ್​ ಜೊತೆ ಸತೀಶ್​ ನಿಸಾಸಂ ಸ್ಕ್ರೀನ್​ ಮಾಡಿದ್ದು, ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧತೆ ನಡೆದಿದೆ. ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ಸಂಜೆ ಮೇಲೆ ಫೋನು ಮಾಡ್ಲ ನಿಂಗೆ' ಎಂಬ ಹಾಡು ಪ್ರೇಕ್ಷಕರ ಮನ ತಲುಪಿದೆ. ಪಾರ್ವತಿ ಎಸ್.​ ಗೌಡ ನಿರ್ಮಾಣದ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ಪ್ರಮುಖ ಪಾತ್ರ ವಹಿಸಿದ್ದಾರೆ. ಪೋಸ್ಟರ್, ಹಾಡುಗಳಿಂದ ಸುದ್ದಿಯಲ್ಲಿರುವ ಮ್ಯಾಟ್ನಿ ವೀಕ್ಷಣೆಗೆ ಸಿನಿಪ್ರಿಯರು ಕಾತರರಾಗಿದ್ದಾರೆ.

ಇದನ್ನೂ ಓದಿ: Independence day: ರಿಷಬ್​ ಶೆಟ್ಟಿ ಸೇರಿ ಸ್ಯಾಂಡಲ್​ವುಡ್​ ಗಣ್ಯರಿಂದ ನಾಡಿನ ಜನತೆಗೆ ಶುಭಾಶಯ

Last Updated :Aug 15, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.