ETV Bharat / city

ಅನಾನಸ್ ಬೆಳೆ ರಕ್ಷಣೆಗೆ ಮುಂದಾದ ಶಿವಮೊಗ್ಗ ಡಿಸಿ... ಸಿಎಫ್‍ಟಿಆರ್​ಐ ತಜ್ಞರೊಂದಿಗೆ ವಿಡಿಯೋ ಸಂವಾದ

author img

By

Published : Apr 23, 2020, 3:49 PM IST

Shimogga DC Conversation with CFTRI Experts to Protect Pineapple Crop
ಶಿವಮೊಗ್ಗ ಡಿಸಿ

ರಾಜ್ಯದಲ್ಲಿ ಕೊರೊನಾ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಮಾರುಕಟ್ಟೆ ತಲುಪುವ ಮುಂಚೆ ಮಣ್ಣಿನಲ್ಲಿ ನಾಶವಾಗುತ್ತಿವೆ. ಈ ನಿಟ್ಟಿನಲ್ಲಿ ಅನಾನಸ್​ ಬೆಳೆದ ರೈತರ ಹಿತ ಕಾಪಾಟಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್​ ಅವರು ಮೈಸೂರಿನ ಸಿಎಫ್​​ಟಿಆರ್​ಐ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾಹಿತಿ ನೀಡಿದರು.

ಶಿವಮೊಗ್ಗ: ಲಾಕ್‍ಡೌನ್‍ನಿಂದ ಸಮಸ್ಯೆಗೆ ಸಿಲುಕಿರುವ ಜಿಲ್ಲೆಯ ಅನಾನಸ್ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಇಂದು ಮೈಸೂರಿನ ಸಿಎಫ್‍ಟಿಆರ್​ಐ (ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್ಸ್ಟಿಟ್ಯೂಟ್) ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಜಿಲ್ಲೆಯಲ್ಲಿ ಅಂದಾಜು 65 ಸಾವಿರ ಟನ್ ಅನಾನಸ್​ ಬೆಳೆದಿದ್ದು, ಕಳೆದ 20 ದಿನಗಳಲ್ಲಿ ವಿವಿಧ ಮೂಲಗಳನ್ನು ಬಳಸಿಕೊಂಡು ಮಾರುಕಟ್ಟೆಗೆ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ರಾಜಾ ತಳಿಯ ಅನಾನಸಿಗೆ ದೆಹಲಿಯ ಜ್ಯೂಸ್ ಕಂಪನಿಗಳು ಪ್ರಮುಖ ಮಾರುಕಟ್ಟೆಯಾಗಿವೆ. ಆದ್ರೆ ಲಾಕ್‍ಡೌನ್‍ನಿಂದ ಸಾಗಣೆಗೆ ತೊಂದರೆಯಾಗಿದೆ. ಪ್ರಸ್ತುತ ದಿನನಿತ್ಯ 125 ರಿಂದ 150 ಟನ್ ಅನಾನಸ್​ ಮಾತ್ರ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಪ್ರತಿನಿತ್ಯ 250 ರಿಂದ 300 ಟನ್ ಇಳುವರಿ ಬರುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಿಎಫ್‍ಟಿಆರ್​ಐ ತಜ್ಞರೊಂದಿಗೆ ವಿಡಿಯೋ ಸಂವಾದ ನಡೆಸಿದ ಶಿವಮೊಗ್ಗ ಡಿಸಿ

ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಮಾರುಕಟ್ಟೆ ಕಲ್ಪಿಸಲು, ವಿವಿಧ ಆಹಾರ ಸಂಸ್ಕರಣಾ ತಂತ್ರಗಳನ್ನು ಬಳಸಿಕೊಂಡು ಅನಾನಸ್​ ಉತ್ಪನ್ನಗಳನ್ನು ದಾಸ್ತಾನು ಇರಿಸುವುದು ಸೇರಿದಂತೆ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಅವಕಾಶಗಳ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರಿಂದ ಮಾರ್ಗದರ್ಶನವನ್ನು ಜಿಲ್ಲಾಧಿಕಾರಿ ಕೋರಿದ್ದಾರೆ.

ಕೋಲ್ಡ್ ಸ್ಟೋರೇಜ್ ಬಳಸಿಕೊಂಡು ಅನಾನಸ್​ ಗರಿಷ್ಠ ಒಂದು ವಾರ ಕಾಲ ಮಾತ್ರ ದಾಸ್ತಾನು ಇರಿಸಲು ಸಾಧ್ಯವಿದೆ. ಅದನ್ನು ಪಲ್ಪ್ ಆಗಿ ಪರಿವರ್ತಿಸಿದರೆ ಗರಿಷ್ಠ ಎರಡು ವರ್ಷಗಳ ಕಾಲ ಕಾಪಾಡಬಹುದು. ಹುಬ್ಬಳ್ಳಿ ಮತ್ತು ಚಿತ್ತೂರುಗಳಲ್ಲಿ ಅಂತಹ ಸಂಸ್ಕರಣಾ ಉದ್ಯಮಗಳಿದ್ದು, ಅನಾನಸನ್ನು ಪಲ್ಪ್ ಆಗಿ ಪರಿವರ್ತಿಸಿದ ಬಳಿಕ ಹಾಪ್‍ಕಾಮ್ಸ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಸಿಎಫ್‍ಟಿಆರ್‍ಐ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಅನಾನಸ್​ ಸಂಸ್ಕರಣೆಯನ್ನು ಸ್ಥಳೀಯವಾಗಿ ಮಾಡಲು ಸಾಧ್ಯವಿದೆ. ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಅಂತಹ ಚಟುವಟಿಕೆ ನಡೆಸಲು, ರೈತರಿಗೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸೂಕ್ತ ತರಬೇತಿಯನ್ನು ನೀಡಲು ಸಂಸ್ಥೆ ಸಿದ್ಧವಿದೆ. ಲಾಕ್‍ಡೌನ್ ಮುಗಿದ ಬಳಿಕ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಿಎಫ್‍ಟಿಆರ್​ಐ ಎಲ್ಲಾ ತಾಂತ್ರಿಕ ನೆರವು ನೀಡಲು ಸಿದ್ಧವಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ರಾಘವರಾವ್ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.