ಶಿವಮೊಗ್ಗ : ದಸರಾ ಮೆರವಣಿಗೆಗೆ ಆಗಮಿಸಿದ್ದ ಆನೆಗಳಿಗೆ ಮಹಾನಗರ ಪಾಲಿಕೆ ಅಗೌರವ ತೋರಿದೆ ಎಂದು ಸಾಮಾಜಿಕ ತಾಲತಾಣದಲ್ಲಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸ್ಪಷ್ಟನೆ ನೀಡಿದ್ದಾರೆ.
ದಸರಾ ಮೆರವಣಿಗೆಯಲ್ಲಿ ಸಕ್ರೆಬೈಲು ಬಿಡಾರದ ಸಾಗರ ಮತ್ತು ಭಾನುಮತಿ ಆನೆಗಳು ಭಾಗಿಯಾಗಿದ್ದವು. ಇವೆರಡು ಆನೆಗಳು ಸ್ವಲ್ಪ ದೂರ ಹೆಜ್ಜೆ ಹಾಕಿ ಹಿಂತಿರುಗಿದ್ದವು. ಅದೇ ದಿನ ಮಧ್ಯಾಹ್ನ ದಸರಾದಲ್ಲಿ ಭಾಗಿಯಾದ ಆನೆಗಳಿಗೆ ಪಾಲಿಕೆ ಯಾವುದೇ ಬೀಳ್ಕೊಡಿಗೆ ನೀಡಿಲ್ಲ. ಅಷ್ಟೇ ಅಲ್ಲ, ಆನೆಗಳು ಶಿವಮೊಗ್ಗದಿಂದ ಬಿಸಿಲಿನಲ್ಲಿ ನಡೆದುಕೊಂಡೇ ಬಿಡಾರಕ್ಕೆ ಬಂದಿವೆ.
ಆನೆಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ, ಫೋಟೋಗಳು ಸಾಮಾಜಿಕ ಜಾತತಾಣಗಳಲ್ಲಿ ವೈರಲ್ ಆಗಿದ್ದರಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಪ್ರತಿಬಾರಿ ಶಿವಮೊಗ್ಗ ದಸರಾಗೆ ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ವಾಹನಗಳಲ್ಲಿ ಕರೆ ತಂದು ಬಳಿಕ ವಾಹನದಲ್ಲೇ ಬಿಡಲಾಗುತ್ತಿತ್ತು.
ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ಆನೆಗಳು ರಸ್ತೆ ಮಾರ್ಗದಲ್ಲೇ ಸುಮಾರು 8 ಕಿ.ಮೀ. ದೂರ ನಡೆದುಕೊಂಡು ಹೋಗಿವೆ. ಜಂಬೂಸವಾರಿ ಮರುದಿನ ಮಾವುತರಿಗೆ, ಕಾವಾಡಿಗಳಿಗೆ ಹಾಗೂ ಆನೆ ಬಿಡಾರದ ಅರಣ್ಯಾಧಿಕಾರಿಗಳಿಗೆ ಗೌರವ ಸಲ್ಲಿಸಿ ಬೀಳ್ಕೊಡಲಾಗುತ್ತಿತ್ತು. ಆದರೆ, ಈ ಬಾರಿ ಯಾವುದನ್ನು ಅನುಸರಿಸಿಲ್ಲ ಎಂಬ ಮಾತು ಕೇಳಿ ಬಂದಿದೆ.
ಮೇಯರ್ ಪ್ರತಿಕ್ರಿಯೆ : ಈ ಕುರಿತಂತೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ದಸರಾ ಆನೆಗಳಿಗೆ ಅಗೌರ ತೋರಲಾಗಿದೆ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ, ಯಾವುದೇ ಅಗೌರವ ತೋರಿಲ್ಲ.
ಆನೆಗಳು ಲಾರಿ ಹತ್ತದ ಕಾರಣ ಅವು ನಡೆದುಕೊಂಡು ಹೋಗಿವೆ. ಎರಡ್ಮೂರು ದಿನಗಳಲ್ಲಿ ಬಿಡಾರಕ್ಕೆ ಹೋಗಿ ಕಾವಾಡಿಗರಿಗೆ, ಮಾವುತರಿವೆ ಹಾಗೂ ದಸರಾದಲ್ಲಿ ಭಾಗವಹಿಸಿದ್ದ ಭಾನುಮತಿ ಹಾಗೂ ಸಾಗರ್ ಆನೆಗಳಿಗೆ ಗೌರವ ಸಲ್ಲಿಸಿ ಬರುತ್ತೇವೆ ಎಂದು ಈಟಿವಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಇದೇ ತಿಂಗಳು 25 ರಿಂದ 1-5ನೇ ತರಗತಿ ಆರಂಭ.. ಶೇ 50 ರಷ್ಟು ಮಾತ್ರ ಹಾಜರಾತಿ