ETV Bharat / city

ಖ್ಯಾತ ವಕೀಲನ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಕಣ್ಮರೆಗೆ ಸಹಕರಿಸಿದ ಓರ್ವನ ಬಂಧನ

author img

By

Published : Oct 28, 2021, 1:17 AM IST

SEXUAL HARASSMENT Case
SEXUAL HARASSMENT Case

ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಎಂಬುವರ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದೆ.

ಮಂಗಳೂರು: ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಖ್ಯಾತ ವಕೀಲ ರಾಜೇಶ್ ಭಟ್​​ಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಓರ್ವನನ್ನು ಮಂಗಳೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬೋಂದೆಲ್​ನ ಅನಂತ ಭಟ್ (48) ಬಂಧಿತ. ಇಂಟರ್ನ್​​ಶಿಪ್​ಗೆ ಬಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ವಕೀಲ ರಾಜೇಶ್ ಭಟ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸುತ್ತಿದ್ದು, ಇದರ ಬೆನ್ನಲ್ಲೇ ತಪ್ಪಿಸಿಕೊಳ್ಳಲು ಅನಂತ ಭಟ್ ಸಹಕರಿಸಿದ್ದಾರೆಂಬ ಆರೋಪದಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿರಿ: ಮಂಗಳೂರಿನ ಖ್ಯಾತ ವಕೀಲ ಕೆಎಸ್​ಎನ್ ರಾಜೇಶ್‌ ಮೇಲೆ ಲೈಂಗಿಕ ಕಿರುಕುಳ ಆರೋಪ

ಅನಂತ ಭಟ್ ಅವರು ರಾಜೇಶ್ ಭಟ್ ಜೊತೆ ಸಂಪರ್ಕದಲ್ಲಿದ್ದರು. ಆರೋಪಿ ರಾಜೇಶ್ ಭಟ್ ನನ್ನು ಪೊಲೀಸರ ಬಂಧನಕ್ಕೆ ಸಿಗದಂತೆ ಸಹಕರಿಸಿದ್ದು, ಪ್ರಕರಣ ವರದಿಯಾದ ಕೂಡಲೇ ರಾಜೇಶ್ ಭಟ್​ನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದಾರೆ. ರಾಜೇಶ್ ಭಟ್​ ಅವರ ಕಾರು & ಮೊಬೈಲ್ ಪೋನ್ ಅಜ್ಞಾತ ಸ್ಥಳದಲ್ಲಿ ಬಚ್ಚಿಟ್ಟು ಪೊಲೀಸರಿಗೆ ಸಿಗದಂತೆ ಸಹಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಇವರ ಪಾತ್ರವನ್ನು ತಿಳಿದುಕೊಳ್ಳಲು ಮತ್ತು ರಾಜೇಶ್​ ಭಟ್ ಪತ್ತೆ ಹಚ್ಚುವ ಸಲುವಾಗಿ ಅನಂತ ಭಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಾರು & ಮೊಬೈಲ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಕೀಲ ರಾಜೇಶ್ ಭಟ್​​ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಮಂಗಳೂರಿನ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.