ಕಲಬುರಗಿ: ಮನೆ ಮುಂದೆ ಹೊಸ ವರ್ಷಾಚರಣೆ ಮಾಡ್ತಿದ್ದ ಯುವಕನಿಗೆ ಚಾಕು ಇರಿದು, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಲ್ಲಿಕಾರ್ಜುನ ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ ಯುವಕ. ಕಲಬುರಗಿಯ ಭವಾನಿ ನಗರದ ಮನೆ ಮುಂದೆ ಹೊಸ ವರ್ಷದ ಮಧ್ಯರಾತ್ರಿಯಂದು ಸೌಂಡ್ ಬಾಕ್ಸ್ ಹಾಕಿಕೊಂಡು ಡ್ಯಾನ್ಸ್ ಮಾಡ್ತಿದ್ದ ವೇಳೆ ಇದೇ ಬಡಾವಣೆಯ ವಿರೇಶ್ ಮತ್ತು ಆತನ ಸ್ನೇಹಿತರು ಗಲಾಟೆ ಮಾಡಿದ್ದಾರೆ. ಸೌಂಡ್ ಬಾಕ್ಸ್ ಆಫ್ ಮಾಡುವಂತೆ ವಾದ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಲ್ಲಿಕಾರ್ಜುನ ಹಾಗೂ ಸ್ನೇಹಿತರು ಸೌಂಡ್ ಬಾಕ್ಸ್ ಆಫ್ ಮಾಡಿ, ಕೇಕ್ ಕಟ್ ಮಾಡೋಕೆ ಮುಂದಾದಾಗ ವೀರೇಶ್ ಹಾಗೂ ಆತನ ಸಹಚರರು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಯುವಕನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.