ETV Bharat / city

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದು ಪಕ್ಕಾ: ಪ್ರಿಯಾಂಕ್ ಖರ್ಗೆ

author img

By

Published : May 14, 2022, 3:19 PM IST

MLA Priyank Kharge
ಶಾಸಕ ಪ್ರಿಯಾಂಕ್ ಖರ್ಗೆ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ಕಿಡಿ ಕಾರಿ, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ..

ಕಲಬುರಗಿ : ಪಿಎಸ್ಐ ಅಕ್ರಮ ನೇಮಕ ಪ್ರಕರಣದಲ್ಲಿ ಗೃಹ ಸಚಿವರು ಯಾರನ್ನು ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತೂ ಪಕ್ಕಾ. ಇದರಿಂದ ಅವರ ಕೆರಿಯರ್ ಹಾಳಾಗುತ್ತದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಸರ್ಕಾರಕ್ಕೆ ಪ್ರೆಶ್ನೆಗಳ ಸುರಿಮಳೆಗೈದು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ನನಗೆ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಅವರ ಸರ್ಟಿಫಿಕೇಟ್ ಬೇಡವೆಂದಿದ್ದರು.

ಆದ್ರೀಗ ಅವರ ಪಕ್ಷದ ಶಾಸಕ ಯತ್ನಾಳ್ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಅಧಿಕಾರದ ಮೋಹದಿಂದ ಅಥವಾ ಯಾರನ್ನೋ ರಕ್ಷಿಸಲು ಅವರು ಹೀಗೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿರುವುದು..

ಕಾನ್ಸ್​ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿದೆಯೆಂಬ ಶಂಕೆ ವ್ಯಕ್ತಪಡಿಸಿದರು. ಅಲ್ಲದೇ ಕಾನ್ಸ್​ಟೇಬಲ್ ನೇಮಕಾತಿಯಲ್ಲಿ ಅಕ್ರಮವೆಸಗಿದವರೆ ಪಿಎಸ್‌ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಇನ್ನೂ ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್‌ಡಿ ಪಾಟೀಲ್ ಕಿಂಗ್‌ಪಿನ್ ಎಂದು ಹೇಳ್ತಿದ್ದಾರೆ. ಆದರೆ, ಪ್ರಮುಖ ಕಿಂಗ್‌ಪಿನ್‌ಗಳು ಬೇರೆ. ಅವರು ಬೆಂಗಳೂರಿನಲ್ಲೇ ಇದ್ದು ಅವರನ್ನು ಹೊರತರಬೇಕು ಎಂದರು.

ಬಂಧಿತರ ನಿಖರ ಲಿಸ್ಟ್ ಎಲ್ಲಿದೆ?: ಈವರೆಗೂ ಬಂಧಿತರಾದವರ ನಿಖರ ಲಿಸ್ಟ್ ಅನ್ನು ಸರ್ಕಾರ ಕೊಟ್ಟಿಲ್ಲ. ಬಂಧನವಾಗಿರುವ ಆರೋಪಿಗಳ ವಿವರವನ್ನು ಸರ್ಕಾರ ಯಾಕೆ ನೀಡುತ್ತಿಲ್ಲ. ಈವರೆಗೆ ತಲೆಮರೆಸಿಕೊಂಡಿರುವವರು ಎಷ್ಟು ಜನ? ಸರ್ಕಾರವನ್ನು ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಸಲಾಗುತ್ತಿದೆ. ಒಟ್ಟು ಎಷ್ಟು ಜನರಿಗೆ ನೋಟಿಸ್ ನೀಡಿದ್ದೀರಿ, ಎಷ್ಟು ಜನರಿಗೆ ವಿಚಾರಣೆ ನಡೆಸಿದ್ದೀರಿ? ಎಂದು ಪ್ರಶ್ನೆಗಳ ಮಳೆ ಸುರಿಸಿದರು.

ಇದನ್ನೂ ಓದಿ: ಬೆಂಗಳೂರು ಲಾಡ್ಜ್​ನಲ್ಲಿ ಇಬ್ಬರು ತೃತೀಯ ಲಿಂಗಿಗಳ ಮೇಲೆ ಮಾರಣಾಂತಿಕ ಹಲ್ಲೆ.. ಒಬ್ಬರ ಸ್ಥಿತಿ ಚಿಂತಾಜನಕ!

ಅಧಿಕೃತ ವರದಿ ಏನಾಗಿದೆ?: ಐದು ಅಭ್ಯರ್ಥಿಗಳು ಪಿಎಸ್ಐ ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ ಅಂತಾ ಗೃಹ ಸಚಿವರೇ ಹೇಳಿದ್ದಾರೆ. ದೂರುಗಳು ಬಂದಿವೆ. ಆದರೆ, ಇದನ್ನು ನಾವು ಮೇಲಧಿಕಾರಿಯ ಪರಿಶೀಲನೆಗೆ ನೀಡಿದ್ದೇನೆ ಎಂದಿದ್ದಾರೆ. ಅರ್ಹತೆ ಪ್ರಕಾರ ಅಂಕ ನೀಡಲಾಗಿದೆ ಅಂತಾ ಹೇಳಿದ್ದಾರೆ. ಗೃಹ ಸಚಿವರು ಅಕ್ರಮ ನಡೆದಿಲ್ಲ ಅಂತಾ ಹೇಳಿದ್ದಾರೆ.

ಈಗ ತನಿಖೆಯಲ್ಲಿ ಲೋಪ ಕಂಡು ಬಂದಿದೆ. ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಜನರನ್ನು ಸಸ್ಪೆಂಡ್ ಸಹ ಮಾಡಲಾಗಿದೆ. ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಯಾರು? ತನಿಖೆ ನಡೆದಿದ್ದು ಹೇಗೆ? ಆ ವರದಿ ಎಲ್ಲಿದೆ? ಗೃಹ ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಆಫಿಷಿಯಲ್ ವರದಿ ಏನಾಗಿದೆ? ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.