ಕಲಬುರಗಿ: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿನೂ ಹಾಕಿಲ್ಲ, ಆಕಾಂಕ್ಷಿಯೂ ಅಲ್ಲ. ಹೀಗಿರುವಾಗ ಯಾರಾದರೂ ಅಡ್ಡಗಾಲು ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆ ಗೋನಾಳ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾತನಾಡಿದ ಅವರು, ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದಾರೆ. ಅವರೇ ನಮ್ಮ ನಾಯಕರು. ಅವರು ಹೇಳಿದ ಮಾರ್ಗದಲ್ಲಿ ನಡೆಯುತ್ತೇವೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಹೀಗಿರುವಾಗ ಅಧ್ಯಕ್ಷ ಸ್ಥಾನಕ್ಕೆ ಅಡ್ಡಗಾಲು ಹಾಕುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ಮನಸ್ಸಿದ್ದಲ್ಲಿ ಮಾರ್ಗವಿದೆ. ಭಕ್ತಿಯಿದ್ದಲ್ಲಿ ಭಗವಂತ ಇದ್ದಾನೆ. ಹೀಗಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆಯುತ್ತಿದ್ದೇನೆ. ಗೋನಾಳ ದೇವಸ್ಥಾನಕ್ಕೆ ಭೇಟಿ ನೀಡುವ ಹರಕೆ ಇತ್ತು. ಆದ್ರೆ ಬರಲು ಆಗಿರಲಿಲ್ಲ. ಈಗ ಹರಕೆ ತೀರಿಸಲು ಬಂದಿರುವುದಾಗಿ ಹೇಳಿದರು.
ನನ್ನ ಮುಖವೂ ಮಿಣಿ ಮಿಣಿ ಅಂತಿದೆ: ಕುಮಾರಸ್ವಾಮಿಯ ಮಿಣಿ ಮಿಣಿ ಪೌಡರ್ ಟ್ರೋಲ್ ಬಗ್ಗೆಪ್ರತಿಕ್ರಿಯಿಸಿದ ಡಿಕೆಶಿ, ಮಿಣಿ ಮಿಣಿ ಅಂದ್ರೆ ಏನು ತಪ್ಪಾಯ್ತು? ನನ್ನ ಮುಖವು ಮಿಣಿ ಮಿಣಿ ಅಂತಿದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಡಿ.ಕೆ.ಶಿ ಬೆಂಬಲಿಸಿದರು. ಇಂದು ಯಾದಗಿರಿಯ ಗೋನಾಳದ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಡಿಕೆ ಶಿವಕುಮಾರ್, ನಾಳೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ದರ್ಶನ ಪಡೆಯಲಿದ್ದಾರೆ.