ETV Bharat / city

ಘಾಟಿ ಸುಬ್ರಹ್ಮಣ್ಯ ಬಳಿ ಕಂದಕಕ್ಕೆ ಬಿದ್ದ ಬಸ್​​: ಸ್ಥಳದಲ್ಲೇ ಇಬ್ಬರ ಸಾವು, 27 ಮಂದಿಗೆ ಗಾಯ

author img

By

Published : Oct 24, 2021, 11:58 AM IST

Ghati Subrahmanya   bus accident
ಕಂದಕಕ್ಕೆ ಬಿದ್ದ ಬಸ್

ಘಾಟಿ ಸುಬ್ರಮಣ್ಯ ಬಳಿಯ ಕಂದಕಕ್ಕೆ ಬಸ್ಸೊಂದು ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೊಡ್ಡಬಳ್ಳಾಪುರ: ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಊರಿಗೆ ತೆರಳುತ್ತಿದ್ದ ಬಸ್ ಘಾಟಿ ಸುಬ್ರಮಣ್ಯ ಬಳಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಾಟಿ ಸುಬ್ರಮಣ್ಯ ಬಳಿ ಬಸ್ ಅಪಘಾತ​

ವಿವರ:

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಬಳಿ ದುರ್ಘಟನೆ ನಡೆದಿದೆ. ನಿನ್ನೆ ಘಾಟಿ ಸುಬ್ರಮಣ್ಯದ ಒಕ್ಕಲಿಗರ ಸಮುದಾಯ ಭವನದಲ್ಲಿ ಗೌರಿಬಿದನೂರು ತಾಲೂಕಿನ ಪಿಂಚಾರ್ಲಹಳ್ಳಿಯ ಕಡೆಯವರ ಮದುವೆ ನಿಗದಿಯಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮದ ಸಂಬಂಧಿಕರು ಮತ್ತು ಸ್ನೇಹಿತರು ಬಸ್​ನಲ್ಲಿ ಬಂದಿದ್ದಾರೆ. ಮದುವೆ ಕಾರ್ಯಕ್ರಮ ಮುಗಿಸಿ ನಂತರ ಬಸ್​ನಲ್ಲಿ ಊರಿಗೆ ವಾಪಸ್ ಆಗುವಾಗ ಸುಮಾರು 10 ಗಂಟೆಯ ವೇಳೆ ಘಾಟಿ ಸುಬ್ರಮಣ್ಯ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದೆ.

30 ಅಡಿಗಳ ಆಳದ ಕಂದಕಕ್ಕೆ ಬಿದ್ದ ಬಸ್​:

ಅಂದಾಜು 30 ಅಡಿ ಆಳದ ಕಂದಕಕ್ಕೆ ಬಸ್ ಉರುಳಿ ಬಿದ್ದಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ, 27 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತರನ್ನು ಮಾಕಳಿ ಗ್ರಾಮದ ಶಿವಕುಮಾರ್, ಬಂಡಿಚಿಕ್ಕನಹಳ್ಳಿ ರಾಮಕೃಷ್ಣ ರೆಡ್ಡಿ ಗುರುತಿಸಲಾಗಿದೆ.

ಮಳೆ ಮತ್ತು ಚಾಲಕನ ಕುಡಿತದ ನಶೆಯಿಂದ ಅಪಘಾತ:

ಕೆಲವು ದಿನದಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಸಹ ಮಳೆಯಾಗುತ್ತಿತ್ತು. ಇದೇ ಸಮಯದಲ್ಲಿ ಮದುವೆ ದಿಬ್ಬಣದ ಬಸ್ ಘಾಟಿ ಸುಬ್ರಮಣ್ಯ ಬಳಿಯ ಕಡಿದಾದ ತಿರುವಿನಲ್ಲಿ ಬರುವಾಗ ಮಳೆಯಿಂದಾಗಿ ಬಸ್ ಜಾರಿ ಕಂದಕದತ್ತ ಸಾಗಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ.

ಮತ್ತೊಂದು ಮಾಹಿತಿ ಪ್ರಕಾರ, ಮದುವೆಗೆ ಬಂದಿದ್ದ ಸಂಬಂಧಿಕರ ಯುವಕನೇ ಬಸ್ ಚಾಲಕನಾಗಿದ್ದ. ಆತ ಕುಡಿದ ನಶೆಯಲ್ಲಿದ್ದು, ಅತಿಯಾದ ಮಳೆ ಮತ್ತು ಕಡಿದಾದ ತಿರುವಿನಲ್ಲಿ ರಸ್ತೆ ಕಾಣಿಸದೆ ನೇರವಾಗಿ ಕಂದಕದೆಡೆ ಬಸ್ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಬಸ್​ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಗಾಯಾಳುಗಳಿಗೆ ನೆರವಾದ ಮೇಕ್ ಶಿಫ್ಟ್ ಆಸ್ಪತ್ರೆ:

ದೊಡ್ಡಬಳ್ಳಾಪುರ ಸಾರ್ವಜನಿಕ ಅವರಣದಲ್ಲಿ ನಿರ್ಮಾಣವಾಗಿರುವ ಮೇಕ್ ಶಿಫ್ಟ್ ಆಸ್ಪತ್ರೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಒಂದೇ ಸಮಯದಲ್ಲಿ ಬಂದ 27ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಸೂಕ್ತ ಹಾಸಿಗೆ ವ್ಯವಸ್ಥೆ ಮಾಡಲು ನೆರವಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಶಾಸಕ ಟಿ. ವೆಂಕಟರಮಣಯ್ಯ, ರೋಗಿಗಳು ಬೇಗ ಗುಣಮುಖರಾಗುವಂತೆ ಹಾರೈಸಿದರು.

ಇದನ್ನೂ ಓದಿ: ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.