ETV Bharat / city

ಮೇಕೆದಾಟು ಪಾದಯಾತ್ರೆ ಸಂಬಂಧ ಬಿಜೆಪಿ ಟೀಕೆಗೆ ಜನರೇ ಉತ್ತರ ನೀಡಿದ್ದಾರೆ: ಕಾಂಗ್ರೆಸ್​

author img

By

Published : Mar 4, 2022, 9:44 AM IST

The closing ceremony of mekedatu padaytra
ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರದಂದು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯಿತು.

ಬೆಂಗಳೂರು: ಕಾಂಗ್ರೆಸ್​​ನವರು ತೂಕ ಇಳಿಸಿಕೊಳ್ಳಲು, ಬೆಂಗಳೂರು ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಸೇರಿದಂತೆ ಹಲವು ಟೀಕೆಗಳನ್ನು ಬಿಜೆಪಿಯವರು ಮಾಡಿದ್ದರು. ಆ ಎಲ್ಲ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರದಂದು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯದ ಜನತೆಗೆ ಧನ್ಯವಾದ: ಶುಕ್ರವಾರ(ಇಂದು) ಬಜೆಟ್ ಅಧಿವೇಶನ ಇರುವುದರಿಂದ ನಮ್ಮ ಪಾದಯಾತ್ರೆಯನ್ನು ಎರಡು ದಿನ ಕಡಿತಗೊಳಿಸಿ ಇಂದೇ(ಗುರುವಾರ) ಮುಕ್ತಾಯಗೊಳಿಸುತ್ತಿದ್ದೇವೆ. ರಾಮನಗರದಿಂದ ಬೆಂಗಳೂರಿನವರೆಗೆ ನಮ್ಮ ಪಾದಯಾತ್ರೆಗೆ ಜನ ಅತಿ ಹೆಚ್ಚು ಬೆಂಬಲ ನೀಡಿದ್ದಾರೆ. ನಮ್ಮೊಂದಿಗೆ ನಿಂತ ಎಲ್ಲರಿಗೂ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಶಿವರಾತ್ರಿ ದಿನ ಕಡಿಮೆ ಜನರು ಸೇರಬಹುದು ಎಂಬ ಅಂದುಕೊಂಡಿದ್ದೆವು. ಆದರೆ, ಅಂದೇ ಅತಿ ಹೆಚ್ಚು ಜನರು ಸೇರಿದ್ದರು. ಅಂದರೆ ಹೋರಾಟದ ಮಹತ್ವ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದರ್ಥ ಎಂದು ಹೇಳಿದರು.

The closing ceremony of mekedatu padaytra
ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ

ಕಾವೇರಿ ವಿವಾದದ ಅಂತಿಮ ತೀರ್ಪು ಬಂದ ನಂತರ ನಾವು ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕಾಯಿತು. ಇದಲ್ಲದೇ ಕಳೆದ ಏಳು ವರ್ಷಗಳಲ್ಲಿ ಮಳೆಗಾಲ ಹಾಗೂ ಇನ್ನಿತರೆ ಸಮಯದಲ್ಲಿ ಒಟ್ಟು 582 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿನ ಸಮುದ್ರ ಸೇರಿದೆ. ಹೀಗೆ ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ ನೀರನ್ನು ನಾವು ಸದುಪಯೋಗ ಮಾಡಿಕೊಂಡರೆ ಏನು ತಪ್ಪು? ಎಂದು ಪ್ರಶ್ನಿಸಿದರು.

ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗ ಶಾಲೆಯಾಗಿವೆ: ಈ ಹಿಂದೆಯೂ ನಾವು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದೆವು. ಅದರಿಂದ ಕೆಲವರು ಜೈಲು ಸೇರಿದ್ರು, ಅಕ್ರಮ ಗಣಿಗಾರಿಕೆ ನಿಂತಿತು. ಜಿ. ಪರಮೇಶ್ವರ್​ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎರಡು ಪಾದಯಾತ್ರೆ ಮಾಡಿದ್ದೆವು. ಮೊದಲನೆಯದು ಉಳ್ಳಾಲದಿಂದ ಉಡುಪಿವರೆಗೆ 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಎಂಬ ಪಾದಯಾತ್ರೆ ಮಾಡಿದ್ದೆವು. ಆದರೆ ಇಂದು ರಾಜ್ಯದ ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗ ಶಾಲೆಯಾಗಿದೆ.

ಗಲಭೆಗಳು ನಿರಂತರವಾಗಿ ನಡೆಯುತ್ತಿದೆ, ಕೊಲೆಗಳಾಗುತ್ತಿವೆ. ಎರಡನೆಯದು ಹೊಸಪೇಟೆಯಿಂದ ಸಂಗಮದ ವರೆಗೆ ಪಾದಯಾತ್ರೆ ಮಾಡಿದ್ದೆವು. ಅದನ್ನು ಕೂಡ ತಿರುಚಿ ಅಪಪ್ರಚಾರ ಮಾಡಿದ್ರು. ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಖರ್ಚು ಮಾಡ್ತೀವಿ ಎಂಬ ಭರವಸೆ ನೀಡಿದ್ದೆವು, ಅದನ್ನು ತಿರುಚಿ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಕೊಡುತ್ತೀನಿ ಅಂದಿದ್ರು ಎಂದು ಸುಳ್ಳು ಪ್ರಚಾರ ಮಾಡಿದ್ರು ಎಂದು ಅಸಮಾಧಾನ ಹೊರಹಾಕಿದ್ರು.

ಸಾಧನೆ ಬಗ್ಗೆ ಮಾತನಾಡೋಕೆ ನಾಚಿಕೆಯಾಗಬೇಕು: ಬಿಜೆಪಿಯವರು ಐದು ವರ್ಷಗಳಲ್ಲಿ ನೀರಾವರಿಗೆ ಒಂದೂವರೆ ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಅಂದರೆ ಪ್ರತಿ ವರ್ಷ ಕನಿಷ್ಠ ರೂ. 30,000 ಕೋಟಿ ಖರ್ಚು ಮಾಡಬೇಕು. ಆದರೆ ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ ರೂ. 40,000 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಿದೆ. ಇಂಥವರಿಗೆ ನಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡೋಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಡಿಗಳ ಸರ್ಕಾರ: ಮೇಕೆದಾಟು ಜಾರಿಯಾದ್ರೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ನೀಡಬಹುದು. ಜೊತೆಗೆ ಬೇಸಿಗೆ ಕಾಲದಲ್ಲಿ ರಾಜ್ಯದ ಹೇಮಾವತಿ, ಹಾರಂಗಿ, ಕೆ.ಆರ್.ಎಸ್ ಮುಂತಾದ ಅಣೆಕಟ್ಟುಗಳಲ್ಲಿ ನೀರಿಲ್ಲದೇ ಹೋದಾಗ ಮೇಕೆದಾಟು ಇಂದ ನೀರು ಹರಿಸಬಹುದು. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಕೊಡಬಹುದು. ಸಮುದ್ರ ಪಾಲಾಗುವ ವ್ಯರ್ಥ ನೀರಿನ ಸದ್ಭಳಕೆ ಇದರಿಂದಾಗುತ್ತದೆ. ಇದು ಕೇಂದ್ರ ಸರ್ಕಾರಕ್ಕೆ ಏಕೆ ಅರ್ಥವಾಗ್ತಿಲ್ಲ.

ಕುಡಿಯುವ ನೀರಿನ ಯೋಜನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯದಿಂದ ಬಿಜೆಪಿಯ 25 ಜನ ಸಂಸದರು ಆಯ್ಕೆಯಾಗಿ ಸಂಸತ್ತಿಗೆ ಹೋಗಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಕಳೆದ ಮೂರು ವರ್ಷದಲ್ಲಿ ಒಂದು ಪರಿಸರ ಅನುಮತಿ ಪತ್ರ ಪಡೆಯಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಆಗಿಲ್ಲವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕಾರಜೋಳ ಅವರನ್ನು ಕೇಳಿದ್ರೆ ಅದಕ್ಕೆ ಉತ್ತರ ಕೊಡಲ್ಲ. ಅದಕ್ಕೆ ಈ ಸರ್ಕಾರವನ್ನು ಹೇಡಿಗಳ ಸರ್ಕಾರ ಎಂದು ನಾನು ಕರೆದಿದ್ದು ಎಂದರು.

ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭ

ನೀರಿನ ವಿಷಯದಲ್ಲಿ ರಾಜಕೀಯವಿಲ್ಲ: ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡಲ್ಲ. ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರಕ್ಕೆ ನೀರು ಕೊಡಬೇಕೋ ಬೇಡವೋ? ರಾಜಕೀಯ ಹೋರಾಟ ಬೇರೆ ಸಮಯದಲ್ಲಿ ಮಾಡ್ತೇವೆ, ಈ ವಿಚಾರದಲ್ಲಿ ಅಲ್ಲ. ಕೋಮುವಾದಿ, ಭ್ರಷ್ಟ, ದುರಾಡಳಿತದಿಂದ ಕೂಡಿರುವ ಈ ಸರ್ಕಾರವನ್ನು ಕಿತ್ತೆಸೆಯಲು ರಾಜಕೀಯ ಹೋರಾಟದ ಅಗತ್ಯವಿದೆ. ಅದನ್ನು ಬಹಿರಂಗವಾಗಿ ಮಾಡುವ ಸಮಯ ಬಂದಾಗ ಮಾಡ್ತೇವೆ ಎಂದರು.

ಬಿಜೆಪಿ ಕೊಡುಗೆ ಶೂನ್ಯ: ಇನ್ನೂ ಸ್ವಾಗತ ಭಾಷಣ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ರಾಜ್ಯದ ಎಲ್ಲ ವರ್ಗದ ಜನರ ಬೆಂಬಲದಿಂದ ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಈ ಹೋರಾಟ ಆರಂಭವಾದಾಗಿನಿಂದಲೂ ಇದನ್ನು ಹತ್ತಿಕ್ಕಲು ಸರ್ಕಾರ ಸತತ ಪ್ರಯತ್ನ ಮಾಡಿದೆ. ಪ್ರಕರಣ ದಾಖಲಿಸಿದರು. ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯಕ್ಕೆ ಗೌರವ ಕೊಟ್ಟು ನಮ್ಮ ನಾಯಕರು ಇದಕ್ಕೆ ಅಲ್ಪ ವಿರಾಮ ಹಾಕಿ, ಈಗ ಇದನ್ನು ಮತ್ತೆ ಆರಂಭಿಸಿ ಯಶಸ್ವಿಯಾಗಿ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ.

ಬಿಜೆಪಿಗರ ಅಪಪ್ರಚಾರ: ಕಾಂಗ್ರೆಸ್ ಪಕ್ಷ ಬೆಂಗಳೂರಿಗೆ ಕುಡಿಯುವ ನೀರು ತಂದಿಲ್ಲ ಎಂದು ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಮಹಾರಾಜರ ಕಾಲದಲ್ಲಿ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿಯಲ್ಲಿ ನೀರು ತರಲಾಗಿತ್ತು. ನಂತರ ದೇವರಾಜ ಅರಸು, ಗುಂಡೂರಾವ್, ವೀರಪ್ಪ ಮೋಯ್ಲಿ, ಎಸ್.ಎಂ ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಹೀಗೆ ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಒಟ್ಟು ಐದು ಹಂತಗಳಲ್ಲಿ ಬೆಂಗಳೂರಿಗೆ ನೀರು ತರಲಾಗಿದೆ. ಬಿಜೆಪಿ ಪಾತ್ರ ಇದರಲ್ಲಿ ಶೂನ್ಯ. ಬೆಂಗಳೂರು ನಗರಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಕಳೆದ ಬಾರಿ 5 ವರ್ಷ ಅಧಿಕಾರ ಇದ್ದಾಗ ಏನು ಮಾಡಲಿಲ್ಲ, ಈಗ ಮೂರು ವರ್ಷದಿಂದ ಅಧಿಕಾರದಲ್ಲಿದ್ದರೂ ಕೇಂದ್ರದ ಪರಿಸರ ಇಲಾಖೆ ಅನುಮತಿ ತರಲು ಆಗಿಲ್ಲ. ಆದರೂ ಬಿಜೆಪಿಗರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಮಾರಂಭದಲ್ಲಿ ಅಭಿಮಾನಿಗಳ ಕೊರತೆ? ಕಾಂಗ್ರೆಸ್ ನಾಯಕರು ಹರಸಾಹಸಪಟ್ಟು ಎರಡು ಹಂತದಲ್ಲಿ ಒಟ್ಟು ಹತ್ತು ದಿನ ನಡೆಸಿದ ಪಾದಯಾತ್ರೆಯ ಸಮಾರೋಪ ಸಮಾರಂಭ ಮಾತ್ರ ಅಭಿಮಾನಿಗಳ ಕೊರತೆಯನ್ನು ಎದುರಿಸಿತು.

ಸಮಾರಂಭವನ್ನು ವಿಳಂಬವಾಗಿ ಶುರುಮಾಡಿದರು. ಇದೆಲ್ಲದರ ಮಧ್ಯೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ದಿಲ್ಲಿಗೆ ಹಿಂದಿರುಗಬೇಕಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲು ಅಧ್ಯಕ್ಷೀಯ ಭಾಷಣವನ್ನು ಮುಗಿಸಿದರು. ಜನರ ಪಾಲಿಗೆ ಅದು ಸಮಾರಂಭದ ಕೊನೆ ಭಾಷಣ ಎನ್ನುವ ರೀತಿ ಭಾಸವಾಯಿತು. ಅಲ್ಲದೇ ಕತ್ತಲಾದ ಹಿನ್ನೆಲೆ ಜನರು ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದರು.

ಸಾಕಷ್ಟು ಕಾರ್ಯಕರ್ತರು ಬೆಂಗಳೂರು ನಗರದಿಂದ ಆಗಮಿಸಿದ್ದರೆ, ಇನ್ನೊಂದಷ್ಟು ಮಂದಿ ಬೆಂಗಳೂರು ಸಮೀಪದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು. ಎಲ್ಲರಿಗೂ ತಮ್ಮ ಊರುಗಳಿಗೆ ಹಾಗೂ ಮನೆಗಳಿಗೆ ತೆರಳುವ ಧಾವಂತ ಕಂಡುಬಂತು.

ಇದನ್ನೂ ಓದಿ: ರಾಜ್ಯ ಬಜೆಟ್ ಅಧಿವೇಶನ: ಇಂದು ಜೆಡಿಎಸ್ ಶಾಸಕಾಂಗ ಸಭೆ

ಡಿಕೆಶಿ ಭಾಷಣ ಮುಗಿಯುತ್ತಿದ್ದಂತೆ ವೇದಿಕೆ ಮೇಲಿದ್ದ ಕೆಲ ನಾಯಕರು ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ತೆರಳಿದರೆ, ವೇದಿಕೆ ಕೆಳಗಿದ್ದ ನಾಗರಿಕರು ಇದೇ ಸರಿಯಾದ ಸಮಯ ಅಂತ ಸ್ಥಳದಿಂದ ತೆರಳಿದರು. ಹೀಗಾಗಿ ಡಿಕೆಶಿ ನಂತರ ಮಾತನಾಡಿದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್ ಮಾತನಾಡುವ ವೇಳೆ, ಅರ್ಧಕ್ಕಿಂತ ಹೆಚ್ಚು ಆಸನಗಳು ಖಾಲಿಯಾಗಿದ್ದವು.

ಸಾಕಷ್ಟು ಮಂದಿ ಭಾಷಣಕಾರರು ಇರುವ ಮುನ್ನವೇ ಸಮಾರಂಭದ ವೇದಿಕೆ ಮುಂಭಾಗದ ಆಸನಗಳು ಖಾಲಿಯಾಗಿ ಕಂಡದ್ದು ವಿಪರ್ಯಾಸ. ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ನಿರೀಕ್ಷೆಯ ಈ ಸಮಾವೇಶ ಈ ರೀತಿ ಜನರಿಂದ ನೀರಸ ಪ್ರತಿಕ್ರಿಯೆ ಪಡೆದದ್ದು ಕಾಂಗ್ರೆಸ್ ನಾಯಕರಿಗೆ ಮುಜುಗರ ತರಿಸುವಂತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.