ETV Bharat / city

ಖದೀಮರು ದೋಚಿದ್ದ 5 ಕೋಟಿ ಮೌಲ್ಯದ ಚಿನ್ನ ಜಪ್ತಿ: ಹಣ, ಚಿನ್ನಾಭರಣದ ಮಾಹಿತಿಯೇ ಇಲ್ಲವೆಂದ ಮಾಲೀಕರು

author img

By

Published : Jun 17, 2022, 1:59 PM IST

ಚಾಮರಾಜಪೇಟೆ ಪೊಲೀಸ್​ಠಾಣೆ
ಚಾಮರಾಜಪೇಟೆ ಪೊಲೀಸ್​ ಠಾಣೆ

ಕಳ್ಳರು ದೋಚಿದ್ದ ಕೋಟಿಗಟ್ಟಲೇ ಸಂಪತ್ತನ್ನು ಪೊಲೀಸರು ಜಪ್ತಿ ಮಾಡಿಕೊಂಡರೂ ಮಾಲೀಕರು ಮಾತ್ರ ಕಳವು ಆಗಿದ್ದ ನಗ-ನಾಣ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ಆಶ್ಚರ್ಯ ಎಂದರೆ, ಇದುವರೆಗೂ ಕಳ್ಳತನವಾಗಿರುವ ಹಣ ಹಾಗೂ ಚಿನ್ನಾಭರಣ ಎಷ್ಟು ಎಂಬುದು ಗೊತ್ತೇ‌ ಇಲ್ಲ ಎನ್ನುತ್ತಿದ್ದಾರೆ.

ಬೆಂಗಳೂರು: ಕಳ್ಳತನ ಪ್ರಕರಣಗಳ ಕುರಿತು ಮಾಲೀಕರು ಪೊಲೀಸರಿಗೆ ದೂರು ನೀಡುವುದು ಸಹಜ‌. ಆದರೆ, ಇಲ್ಲೊಂದು ವಿಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿ‌ ಹಣ ದರೋಡೆ ಮಾಡಿದ ಪ್ರಕರಣದ ಆರೋಪಿಗಳನ್ನ ಬಂಧಿಸಿ, ದೋಚಿದ್ದ ಕೋಟಿಗಟ್ಟಲೇ ಸಂಪತ್ತನ್ನು ಪೊಲೀಸರು ಜಪ್ತಿ ಮಾಡಿಕೊಂಡರೂ ಮೃತನ ಕುಟುಂಬಸ್ಥರು ಕಳವು ಆಗಿದ್ದ ನಗ-ನಾಣ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ಆಶ್ಚರ್ಯವೆಂದ್ರೆ, ಇದುವರೆಗೂ ಕಳ್ಳತನವಾಗಿರುವ ಹಣ ಹಾಗೂ ಚಿನ್ನಾಭರಣ ಎಷ್ಟು ಎಂಬುದು ಗೊತ್ತೇ‌ ಇಲ್ಲ ಎನ್ನುತ್ತಿದ್ದಾರೆ ಮನೆ ಮಾಲೀಕರು.

ಚಾಮರಾಜಪೇಟೆಯ ಟೆಂಪಲ್‌ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ನನ್ನು ಮೇ 24 ರಂದು ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ರಾಜಸ್ಥಾನ ಮೂಲದ‌‌ ಬಿಜಾರಾಮ್, ಕಣ್ಣಿಗೆ ಖಾರದ‌ಪುಡಿ ಎರಚಿ ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರು, ಗುಜರಾತ್ ಪೊಲೀಸರ ಸಹಕಾರದೊಂದಿಗೆ ಬಿಜಾರಾಮ್‌ ಹಾಗೂ ಆತನ ಸಹಚರನನ್ನು ಬಂಧಿಸಿ 4,93 ಕೋಟಿ ಮೌಲ್ಯದ 8 ಕೆ.ಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ, ಹಾಗೂ 53 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದರು.

ಚಾಮರಾಜಪೇಟೆ ಪೊಲೀಸ್ ​ಠಾಣೆ

ಲೆಕ್ಕ ಕೊಡದ ಮೃತನ ಕುಟುಂಬಸ್ಥರು: ದೀಪಂ ಎಲೆಕ್ಟ್ರಿಕಲ್ ಮಾಲೀಕನಾಗಿದ್ದ ಜುಗ್ಗುರಾಜ್​, ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು.‌ ಜೊತೆಗೆ ಬೇರೆ ಬೇರೆ ಮೂಲಗಳಿಂದ ಆದಾಯವಿತ್ತು‌. ಹಣಕಾಸಿನ ವ್ಯವಹಾರದ ಬಗ್ಗೆ ಮಕ್ಕಳ ಹತ್ತಿರ ಹೇಳಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. ಜಗ್ಗುರಾಜ್ ಕೊಲೆಯಾಗುವ ಮುನ್ನ ಮಗ ಸಹ ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದರು.

ಕೊಲೆ ಬಳಿಕ ಪ್ರಮುಖ ಆರೋಪಿ ಲಪಾಟಾಯಿಸಿದ್ದ ಸಂಪತ್ತಿನ ಪೈಕಿ 5 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದರು. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಳಿ ಸಹ ಕೋಟ್ಯಂತರ ಮೌಲ್ಯದ ಚಿನ್ನಾಭರಣವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮತ್ತೊಬ್ಬ ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಪೊಲೀಸರು ರಾಜಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ.

ಲೆಕ್ಕ ಕೊಡದಿದ್ದರೆ ಐದು ಕೋಟಿ ಸರ್ಕಾರದ ಖಜಾನೆಗೆ: ಕಳ್ಳತನವಾದ 5 ಕೋಟಿಗಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದಿಗೆ ಜುಗ್ಗುರಾಜ್ ಮನೆಯವರು ದಾಖಲಾತಿ ನೀಡಬೇಕು. ಯಾವ ಮೂಲಗಳಿಂದ ಹಣ ಸಂಪಾದನೆ‌‌ ಮಾಡಿದ್ದರು. ವ್ಯವಹಾರದಿಂದ ಬಂದಿದ್ದ ಹಣವೆಷ್ಟು ?, ಚಿನ್ನಾಭರಣ ಖರೀದಿಸಿದಕ್ಕೆ ರಶೀದಿಗಳು. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸಿದ್ದರೆ ದಾಖಲೆ ನೀಡಬೇಕು.

ದಾಖಲೆ ಸರಿಯಿದ್ದರೆ ನ್ಯಾಯಾಲಯಕ್ಕೆ ಹೋಗಿ ಚಿನ್ನಾಭರಣ ಬಿಡಿಸಿಕೊಳ್ಳಬಹುದಾಗಿದೆ. ದಾಖಲೆ ನೀಡದಿದ್ದರೆ ಜಪ್ತಿಯಾದ ಚಿನ್ನಾಭರಣವನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.‌ ಮತ್ತೊಂದೆಡೆ, ಜಪ್ತಿ ಮಾಡಿಕೊಂಡ ಚಿನ್ನಾಭರಣಕ್ಕೆ‌ ಐಟಿ ಇಲಾಖೆಗೆ ಚಾಮರಾಜಪೇಟೆ ಪೊಲೀಸರು ಪತ್ರ ಬರೆದಿದ್ದಾರೆ.

ಸುಳ್ಳು ದಾಖಲಾತಿ‌ ನೀಡಿದರೆ ಎದುರಾಗಲಿದೆ ಸಂಕಷ್ಟ: ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾದರೂ ಮನೆಯವರು ದಾಖಲಾತಿ ಇಲ್ಲ ಎನ್ನುತ್ತಿದ್ದಾರೆ. ಜಪ್ತಿ ಮಾಡಿಕೊಂಡಿರುವ ಬೃಹತ್ ಮೊತ್ತದ ಸಂಪತ್ತಿಗೆ ಕಾಗದ ಪತ್ರಗಳು ನ್ಯಾಯಾಲಯದಲ್ಲಿ ತೋರಿಸಬೇಕಿದೆ.

ಒಂದು ವೇಳೆ‌ ನಕಲಿ ದಾಖಲಾತಿ ಸೃಷ್ಟಿಸಿದರೆ ಸಂಕಷ್ಟ ಎದುರಾಗಲಿದೆ. ಚಿನ್ನಾಭರಣ ಖರೀದಿಸಿದ ವಿವರ, ಯಾವಾಗ ಖರೀದಿ, ಪ್ರಾಪರ್ಟಿ ಮಾರಿ ಚಿನ್ನ ಖರೀದಿಸಿದ್ದರೆ ಅದಕ್ಕೂ ಪ್ರತ್ಯೇಕ ದಾಖಲೆ ನೀಡಬೇಕು. ಪಿತ್ರಾರ್ಜಿತ ಆಸ್ತಿಯಿಂದ ಖರೀದಿಸಿದ್ದರೆ ಅದಕ್ಕೂ‌ ನಂಬಲಾರ್ಹ ಪುರಾವೆ ಒದಗಿಸಬೇಕು. ಒಂದು ವೇಳೆ ಅಕ್ರಮ ಹಣದಿಂದ ಖರೀದಿಸಿದ್ದು ಗೊತ್ತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ.

ಇದನ್ನೂ ಓದಿ: ಅಲಬಾಮ ಚರ್ಚ್​ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.