ETV Bharat / city

ದುರ್ಗೆ ಎಂದರೆ ದುಃಖವನ್ನು ದೂರ ಮಾಡುವ ದೇವಿ.. ಇಂದಿರಾಗಾಂಧಿ ಅಂತಹ ದುರ್ಗೆಯಾಗಿದ್ದರು : ಡಿಕೆಶಿ

author img

By

Published : Oct 31, 2021, 3:05 PM IST

Updated : Oct 31, 2021, 5:02 PM IST

ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗು ಸರ್ದಾರ್ ವಲ್ಲಭಭಾಯಿ ಪಟೇಲ್​​ ಅವರ ಜನ್ಮದಿನ ಕಾರ್ಯಕ್ರಮ
ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗು ಸರ್ದಾರ್ ವಲ್ಲಭಭಾಯಿ ಪಟೇಲ್​​ ಅವರ ಜನ್ಮದಿನ ಕಾರ್ಯಕ್ರಮ

ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆ, ಎಲ್ಲ ವರ್ಗದ ಜನರ ಕಲ್ಯಾಣದ ಬಗ್ಗೆ ಆಲೋಚಿಸಿದ್ದರು. ಪಿಂಚಣಿ, ಸೇನೆ, ಮನೆ ನಿರ್ಮಾಣ, ಬ್ಯಾಂಕ್ ರಾಷ್ಟ್ರೀಕರಣ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ, ವಸತಿ, ಕ್ರೀಡೆ, ಕೃಷಿ-ಹೀಗೆ ಎಲ್ಲವನ್ನೂ ಉತ್ತೇಜಿಸುವ ಕಾರ್ಯಕ್ರಮಗಳನ್ನು ಕೊಟ್ಟರು. ಹೀಗಾಗಿ, ವಾಜಪೇಯಿ ಅವರು ಪಕ್ಷಬೇಧ ಮರೆತು ದುರ್ಗೆಗೆ ಹೋಲಿಸಿದ್ದಾರೆ ಎಂದರು..

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದರು. ದುರ್ಗೆ ಎಂದರೆ 'ದುಃಖವನ್ನು ದೂರ ಮಾಡುವ ದೇವಿ' ಎಂದು ಅವರನ್ನು ಆ ರೀತಿ ಕರೆದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇಂದಿರಾ-ಪಟೇಲ್‌ ಸ್ಮರಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್​​ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷಬೇಧ ಮರೆತು ದುರ್ಗೆಗೆ ಹೋಲಿಸಿದ್ದಾರೆ : ಇಂದಿರಾಗಾಂಧಿ ಅವರು ಬಡತನ ನಿರ್ಮೂಲನೆ, ಎಲ್ಲ ವರ್ಗದ ಜನರ ಕಲ್ಯಾಣದ ಬಗ್ಗೆ ಆಲೋಚಿಸಿದ್ದರು. ಪಿಂಚಣಿ, ಸೇನೆ, ಮನೆ ನಿರ್ಮಾಣ, ಬ್ಯಾಂಕ್ ರಾಷ್ಟ್ರೀಕರಣ, ಅಂಗನವಾಡಿ, ಮಕ್ಕಳಿಗೆ ಬಿಸಿಯೂಟ, ವಸತಿ, ಕ್ರೀಡೆ, ಕೃಷಿ-ಹೀಗೆ ಎಲ್ಲವನ್ನೂ ಉತ್ತೇಜಿಸುವ ಕಾರ್ಯಕ್ರಮಗಳನ್ನು ಕೊಟ್ಟರು. ಹೀಗಾಗಿ, ವಾಜಪೇಯಿ ಅವರು ಪಕ್ಷಬೇಧ ಮರೆತು ದುರ್ಗೆಗೆ ಹೋಲಿಸಿದ್ದಾರೆ ಎಂದರು.

ಸವಾಲು ಮನೆ ಬಾಗಿಲಲ್ಲಿ ಇರುವುದಿಲ್ಲ. ನಾವು ಪರ್ವತ ಏರಬೇಕಿಲ್ಲ, ಸಮುದ್ರ ದಾಟಬೇಕಿಲ್ಲ. ನಮ್ಮ ಸವಾಲು ಹಳ್ಳಿಗಳಲ್ಲಿನ ಬಡತನ, ಪ್ರತಿ ಮನೆಯಲ್ಲಿರುವ ಜಾತಿ ವ್ಯವಸ್ಥೆ ಸರಿಪಡಿಸುವುದರಲ್ಲಿ ಇರುತ್ತದೆ. ಅವುಗಳ ನಿರ್ಮೂಲನೆಗೆ ಆದ್ಯತೆ ಕೊಟ್ಟಾಗ ದೇಶದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಿದ್ದರು ಎಂದರು.

ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು : ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಮೇಲೆ ಪ್ರೀತಿ ಇದ್ದರೆ ಸಾಲದು. ಪ್ರೀತಿ ಜತೆಗೆ ಸಾಮಾಜಿಕ ಕಳಕಳಿ, ಬದ್ಧತೆ ಇರಬೇಕು. ಇತಿಹಾಸ, ನಮ್ಮ ನಾಯಕರ ತ್ಯಾಗ, ಬಲಿದಾನವನ್ನು ಯುವ ಸಮುದಾಯಕ್ಕೆ ತಿಳಿಸಬೇಕು. ಯೂತ್ ಕಾಂಗ್ರೆಸ್ ಸಮಾವೇಶಕ್ಕಾಗಿ ನಾವು ರೈಲು ಹತ್ತಿದಾಗ, ಮಧ್ಯೆ ಇಂದಿರಾಗಾಂಧಿ ಅವರ ನಿಧನ ಸುದ್ದಿ ಬಂತು. ಗಲಾಟೆ ಹೆಚ್ಚಾಗಿತ್ತು. ನಮ್ಮನ್ನು ಬಂಧಿಸಿದ್ದರು.

ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದೆವು: ನಂತರ ನಾನು ಚಿತ್ರ ಮಂದಿರಕ್ಕೆ ಪರವಾನಿಗೆ ಅರ್ಜಿ ಕೇಳಿದ್ದೆ. ಆಗ ಜಿಲ್ಲಾಧಿಕಾರಿಗಳು ಯಾರ ಹೆಸರು ಇಡುತ್ತೀಯಾ ಎಂದು ಕೇಳಿದರು. ನಾನು ಇಂದಿರಾಗಾಂಧಿ ಅವರ ಹೆಸರು ಎಂದೆ. ಆಗ ಕೇವಲ 5 ನಿಮಿಷದಲ್ಲಿ ಸಹಿ ಹಾಕಿಕೊಟ್ಟರು. ಇಂದಿರಾಗಾಂಧಿ ಅವರ ಹುಟ್ಟುಹಬ್ಬ ಎಂದರೆ ನಾವು ರಕ್ತದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದೆವು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಎಂತಹ ಕ್ರೂರಿಗಳು?: ಬ್ಯಾಂಕ್ ರಾಷ್ಟ್ರೀಕರಣದ ಬೆಲೆ ಈಗ ಯಾರಿಗೂ ಗೊತ್ತಾಗುವುದಿಲ್ಲ. ಆಗಿನ ಪರಿಸ್ಥಿತಿಯಲ್ಲಿ ಬಡವರನ್ನು ಬ್ಯಾಂಕ್ ಒಳಗೆ ಬಿಡುತ್ತಿರಲಿಲ್ಲ. ಅವರಿಗೆ ಬ್ಯಾಂಕ್ ಸೇವೆ ಸಿಗುತ್ತಿರಲಿಲ್ಲ. ಇದನ್ನು ಕಲ್ಪಿಸಲು ರಾಷ್ಟ್ರೀಕರಣ ಮಾಡಿದರು. ಅದೇ ರೀತಿ ಉಳುವವನಿಗೆ ಭೂಮಿ ಕೊಟ್ಟಿದ್ದು ಇಂದಿರಾಗಾಂಧಿ. ಅವರ ಹೆಸರಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ತೆರೆದರೆ ಅದರ ಹೆಸರು ಬದಲಿಸಲು ಮುಂದಾಗುತ್ತಾರಲ್ಲ ಇವರು ಎಂತಹ ಕ್ರೂರಿಗಳು?.

ಅವರು ಕೇವಲ ಹೆಸರು ಬದಲಿಸಲು ಮುಂದಾಗಿದ್ದರೆ, ನಮ್ಮ ಶಕ್ತಿ ಏನು ಎಂದು ತೋರಿಸುತ್ತಿದ್ದೆವು. ಆದರೆ, ಯೋಜನೆಯನ್ನೇ ನಿಲ್ಲಿಸಿ ಬಡವರ ಹೊಟ್ಟೆ ಮೇಲೆ ಕಲ್ಲು ಹಾಕಿದ್ದಾರೆ. ಅಂದು ಈ ಯೋಜನೆಗೆ ಇಂದಿರಾ ಗಾಂಧಿ ಅವರ ಹೆಸರು ಇಡಲು ಅರ್ಜಿ ಕೊಟ್ಟಿದ್ದು, ಈಗ ಬಿಜೆಪಿಗೆ ಹೋಗಿರುವ ಗಿರಾಕಿಗಳೇ. ಇದೇ ಸೋಮಶೇಖರ್, ಮುನಿರತ್ನ ಅವರು ಅರ್ಜಿ ಕೊಟ್ಟಿದ್ದರು. ಆದರೆ, ಈಗ ಬೀಗುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕೆ ಹೋದರೆ ಬಿಜೆಪಿಯವರೆ ಇಲ್ಲ, ಬರೀ ಇವರೇ ಇದ್ದಾರೆ. ರಾಜಕೀಯ ಏನೇ ಇರಲಿ ಸೇವೆ ಮನೋಭಾವ, ಆಸಕ್ತಿ ಹೃದಯದಿಂದ ಬರಬೇಕು ಎಂದು ವಿವರಿಸಿದರು.

ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಬೇಕು : ಇಂದಿರಾಗಾಂಧಿ ಅವರು ಜನ ಜವಾಬ್ದಾರಿಯನ್ನು ಮರೆಯುತ್ತಾರೆ. ಆದರೆ, ಹಕ್ಕನ್ನು ಚಲಾಯಿಸಲು ಪ್ರಯತ್ನಿಸುತ್ತಾರೆ ಎಂದಿದ್ದರು. ನಾವು ಕಾಂಗ್ರೆಸಿಗರಾಗಿ ನಮ್ಮ ಜವಾಬ್ದಾರಿ ಏನು ಎಂದು ಅರಿತು ಕೆಲಸ ಮಾಡಬೇಕು. ಅವಕಾಶಗಳು ಮನೆ ಬಾಗಿಲಿಗೆ ಬರುವುದಿಲ್ಲ. ಅವಕಾಶಗಳನ್ನು ನೀವೇ ಸೃಷ್ಟಿಸಿ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಬೇಕು.

ನೆಹರು ಮನೆತನಕ್ಕೆ ಇತಿಹಾಸವಿದ್ದು, ಅವರ ಮನೆಯವರಂತೆ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಅವರ ಕುಟುಂಬದವರು ಹಾಗೂ ಸರ್ದಾರ್ ಪಟೇಲರು ಕೂಡ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಇಂದಿರಾಗಾಂಧಿ ಅವರು ದೇಶದ ಸಮಗ್ರತೆ, ಐಕ್ಯತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದರು. ಸರ್ದಾರ್ ಪಟೇಲರು ದೇಶ ಒಗ್ಗೂಡಿಸಿ ಅಖಂಡ ಭಾರತ ನಿರ್ಮಿಸಿ, ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ಒಬ್ಬರು ಉಕ್ಕಿನ ಮಹಿಳೆ, ಮತ್ತೊಬ್ಬರು ಉಕ್ಕಿನ ಮನುಷ್ಯ. ಅವರನ್ನು ಸ್ಮರಿಸುತ್ತಾ, ಈ ಪವಿತ್ರ ದಿನ ಅವರ ಆದರ್ಶವನ್ನು ಅಳವಡಿಸಿಕೊಳ್ಳೋಣ. ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ನಾವು ಮುಂದುವರಿಯಬೇಕು ಎಂದು ಇಂದಿರಾಗಾಂಧಿ ಅವರು ಹೇಳಿದ್ದರು ಎಂದು ವಿವರಿಸಿದರು.

ಪುನೀತ್ ರಾಜಕುಮಾರ್​​ ನಿಧನಕ್ಕೆ ಸಂತಾಪ: ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪುನೀತ್ ಅವರ ಜತೆಗಿನ ಒಡನಾಟ ಮೆಲುಕು ಹಾಕಿದ ಡಿ.ಕೆ. ಶಿವಕುಮಾರ್ ಅವರು, ಪುನೀತ್ ರಾಜ್​​ಕುಮಾರ್ ಅವರಿಗೆ ಈ ರೀತಿ ಆಗುತ್ತದೆ ಎಂದು ನಾವು ಭಾವಿಸಿರಲಿಲ್ಲ.

ಅವರಿಗೆ ನಮ್ಮ ಗೌರವ ಸಲ್ಲಿಸಿದ್ದೇವೆ. ಅವರ ಕುಟುಂಬದವರು ಅಜಾತ ಶತ್ರುಗಳು. ಅವರಲ್ಲಿ ಸಾಮಾಜಿಕ ಕಳಕಳಿ, ಬದ್ಧತೆ ಇತ್ತು. ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಯಾವುದೇ ಹಣ ಪಡೆಯದೆ ರಾಯಭಾರಿಯಾಗಿ ಕೆಲಸ ಮಾಡಿದ್ದರು ಎಂದರು. ನನ್ನ ಚಿತ್ರಮಂದಿರಗಳ ಸಮೂಹ ಅನಾವರಣಕ್ಕೆ ಆಗಮಿಸಬೇಕು ಎಂದು ಇತ್ತೀಚೆಗೆ ಅವರನ್ನು ಆಹ್ವಾನಿಸಿದ್ದೆ.

ಅವರ ಜತೆಗಿನ ಒಡನಾಟ ನೆನೆಸಿಕೊಂಡರೆ, ಅವರ ಅಗಲಿಕೆ ಮನಸ್ಸಿಗೆ ತೀವ್ರ ನೋವಾಗುತ್ತದೆ. ಭಗವಂತ ಎಷ್ಟು ಕ್ರೂರಿ ಎಂಬುದಕ್ಕೆ ಇದು ಸಾಕ್ಷಿ. ಮನಸ್ಸು, ಯೌವ್ವನ, ಜೀವ ಕ್ಷಣ ಮಾತ್ರ ಎಂದು ಸಂಸ್ಕೃತದಲ್ಲಿ ಮಾತಿದೆ. ಯಮ ಯಾರಿಗೂ ಸಮಯ ಕೊಡುವುದಿಲ್ಲ. ಆತ ಪ್ರಾಣ ತೆಗೆದುಕೊಳ್ಳಬೇಕು ಎಂದರೆ ತೆಗೆದುಕೊಳ್ಳುತ್ತಾನೆ. ನೀನು ಮನುಷ್ಯನಾಗಿ ಏನೇ ಮಾಡಿದರೂ ಜಾಗೃತನಾಗಿ ಮಾಡು ಎಂದು ಹೇಳುತ್ತಾರೆ.

ಪುನೀತ್ ತಮ್ಮ‌ ಜೀವನದಲ್ಲಿ ಜನರಿಗೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಅವರು ಆತನನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ಒಪ್ಪಲಿಲ್ಲ. ನಾನು ತಂದೆ ಹಾದಿ ಬಿಡುವುದಿಲ್ಲ ಎಂದು ಹೇಳಿ ರಾಜಕೀಯದಿಂದ ದೂರ ಉಳಿದರು.

ಅವರ ಅತ್ತಿಗೆ ಚುನಾವಣೆಗೆ ಸ್ಪರ್ಧಿಸಿದಾಗಲೂ, ತಂದೆ ದಾರಿ ಬಿಡಲ್ಲ ಎಂಬ ಬದ್ಧತೆಗಾಗಿ ಪ್ರಚಾರಕ್ಕೆ ಹೋಗಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯ ಪುನೀತ್ ಅವರಲ್ಲಿತ್ತು. ಹೀಗಾಗಿ, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಪುನೀತ್ ಅವರನ್ನೇ ಆಯ್ಕೆ ಮಾಡಲಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮಾಜಿ ಸಚಿವೆ ಉಮಾಶ್ರೀ, ರಾಣಿ ಸತೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

Last Updated :Oct 31, 2021, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.