ETV Bharat / city

'ಮೇಕೆದಾಟು ಅನ್ಯಾಯಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ': ಬಿಜೆಪಿ ಟ್ವೀಟ್​

author img

By

Published : Jan 8, 2022, 1:06 PM IST

Karnataka bjp tweet on siddaramaiah and mekedatu
'ಮೇಕೆದಾಟು ಅನ್ಯಾಯವಾಗಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇರ ಕಾರಣ': ಬಿಜೆಪಿ ಟ್ವೀಟ್​

ಮೇಕೆದಾಟು ಬಗ್ಗೆ ರಾಜ್ಯಕ್ಕೆ ಐತಿಹಾಸಿಕ ಅನ್ಯಾಯವಾಗಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಟ್ವಿಟರ್​ನಲ್ಲಿ ರಾಜ್ಯ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಲು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, 2014ರಲ್ಲಿ ಡಿಪಿಆರ್ ರಚನೆಗೆ ಜಾಗತಿಕ ಪ್ರಸ್ತಾವನೆ ಕರೆದು 2018ರವರೆಗೂ ಕಣ್ಣುಮುಚ್ಚಿ ಕುಳಿತುಕೊಂಡಿದ್ದೇ ಕಾಂಗ್ರೆಸ್ ಸಾಧನೆಯಾಗಿದೆ. ಕಾಂಗ್ರೆಸಿಗರು ಅಂದು ಕಾಲಹರಣ ಮಾಡಿ, ಇಂದು ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ.

2014ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇಕೆದಾಟು ವಿಚಾರದಲ್ಲಿ ಎಸಗಿದ ಐತಿಹಾಸಿಕ ಪ್ರಮಾದದಿಂದ ಈಗ ಕಾವೇರಿ ಕಣ್ಣೀರು ಸುರಿಸುವಂತಾಗಿದೆ. ಕೇಂದ್ರದಿಂದ ಒಪ್ಪಿಗೆ ಹಾಗೂ ಅನುದಾನ ಪಡೆಯುವಾಗ ನಿದ್ದೆಗೆ ಜಾರಿ ಈಗ ಪಾದಯಾತ್ರೆಯ ನಾಟಕವಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದು ಟ್ವೀಟ್​​ನಲ್ಲಿ ಪ್ರಶ್ನಿಸಲಾಗಿದೆ.

  • ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ.

    2014 ರಲ್ಲಿ ಡಿಪಿಆರ್ ರಚನೆಗೆ ಜಾಗತಿಕ ಪ್ರಸ್ತಾವನೆ ಕರೆದು 2018 ರ ವರೆಗೂ ಕಣ್ಣುಮುಚ್ಚಿ ಕುಳಿತುಕೊಂಡಿದ್ದೇ ಕಾಂಗ್ರೆಸ್ ಸಾಧನೆ.

    ಕಾಂಗ್ರೆಸ್ಸಿಗರು ಅಂದು ಕಾಲಹರಣ ಮಾಡಿ ಇಂದು #ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ.

    — BJP Karnataka (@BJP4Karnataka) January 8, 2022 " class="align-text-top noRightClick twitterSection" data=" ">

ಅಂತಾರಾಜ್ಯ ಜಲ ವಿವಾದ ಸಂದರ್ಭದಲ್ಲಿ ವಿವೇಕಯುತ ಹೋರಾಟ ಅಗತ್ಯವಿದೆ ಎಂಬ ಪಾಠವನ್ನು ಇತಿಹಾಸದಿಂದಲೂ ಕಲಿತಿಲ್ಲವೇ?. ಈ‌ ಹಿಂದೆ ಕಾವೇರಿ ಪಾದಯಾತ್ರೆ ನಡೆಸಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಘಟನೆ ನೆನಪಿರಬೇಕಲ್ಲವೇ?, ರಾಜಕೀಯಕ್ಕಾಗಿ ರಾಜ್ಯದ ಮರ್ಯಾದೆಯನ್ನೇಕೆ ಹರಾಜು ಹಾಕುತ್ತಿದ್ದೀರಿ?, ಮೇಕೆದಾಟು ಯೋಜನೆಗೆ ನಾಳೆಯೇ ಭೂಮಿಪೂಜೆ ನಡೆಸಿ ಎಂದು ಅಬ್ಬರಿಸುತ್ತಿರುವ ಕಾಂಗ್ರೆಸ್ ನಾಯಕರೇ ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಆಗ್ರಹಿಸಿದೆ.

ಮೇಕೆದಾಟು ಯೋಜನೆ ಸಂಬಂಧ ಅನಗತ್ಯ ಕಾಲಹರಣ ಮಾಡಿದ್ದು ಯಾರು?, ಅಧಿಕಾರದಲ್ಲಿದ್ದಾಗ ಕಡತಯಜ್ಞ ಮಾಡದೇ, ವಿರೋಧ ಪಕ್ಷವಾದಾಗ ಆಂದೋಲನ ನಡೆಸುವುದು ಎಷ್ಟು ಸರಿ?, ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಾಕಿ ಇದೆ. ಈ ಹಂತದಲ್ಲಿ ಯೋಜನೆ ಜಾರಿಗೆ ಮುಂದಾಗುವುದು, ಜಾರಿಗಾಗಿ ಒತ್ತಡ ಹೇರುವುದು ನ್ಯಾಯಾಂಗ ನಿಂದನೆಯಲ್ಲವೇ?, ಈ ಕನಿಷ್ಠ ಪ್ರಜ್ಞೆಯೂ ಕಾಂಗ್ರೆಸ್ ನಾಯಕರಿಗಿಲ್ಲವೇ?, ಸೆಕ್ಷನ್ ಸಿದ್ದರಾಮಯ್ಯ ಈ ವಿಚಾರದಲ್ಲೂ ಬುರುಡೆ ಬಿಡುತ್ತಾರಾ? ಎಂದು ಪ್ರಶ್ನಿಸಲಾಗಿದೆ.

ಇದರೊಂದಿಗೆ ಅಂತಾರಾಜ್ಯ ಜಲ ವಿವಾದ ಒಂದು ಸೂಕ್ಷ್ಮ ವಿಚಾರ. ಕರ್ನಾಟಕ ಸರ್ಕಾರ ಈ ಸಂಬಂಧ ಎಚ್ಚರಿಕೆ ಹಾಗೂ ವಿವೇಕದ ಹೆಜ್ಜೆ ಇಡುತ್ತಲೇ ಬಂದಿದೆ. ಸಂಘರ್ಷದಿಂದ ವ್ಯಾಜ್ಯ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಸುಳ್ಳಿನಜಾತ್ರೆ ಮಾಡುವ ಬದಲು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ತಮ್ಮ ಮಿತ್ರಪಕ್ಷವು ಹಸಿರು ಪೀಠದಲ್ಲಿ ಹೂಡಿದ ದಾವೆ ವಾಪಾಸ್ ತೆಗೆಸಲಿ ಎಂದು ಸವಾಲು ಹಾಕಿದೆ.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ನಾಯಕರು ಸಹಕಾರ ನೀಡಲಿ : ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.