ETV Bharat / city

ರೈತರ ನ್ಯಾಯಕ್ಕಾಗಿ ಸದನದ ಬಾವಿಗಿಳಿದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಧರಣಿ ; ಪೀಠಕ್ಕೆ ಸವಾಲಿನ ಆರೋಪ

author img

By

Published : Sep 21, 2021, 7:38 PM IST

JDS Member Maritibbe gowda protest in Council Session
ರೈತರ ನ್ಯಾಯಕ್ಕಾಗಿ ಸದನದ ಬಾವಿಗಿಳಿದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಧರಣಿ; ಪೀಠಕ್ಕೆ ಸವಾಲಿನ ಆರೋಪ

ಸದನವನ್ನೇ ಪ್ರಶ್ನಿಸುತ್ತೀರಾ ಎಂದಿದ್ದಕ್ಕೆ ಗೌಡರು ಹೌದು ಎಂದು ಸವಾಲು ಹಾಕಿದರು. ರೈತ ವಿರೋಧಿ ಸರ್ಕಾರ ಬಂದ ಸಂದರ್ಭದಿಂದಲೂ ಅವರಿಗೆ ಕಿರುಕುಳ ನೀಡುತ್ತಿದೆ. ಸಮರ್ಪಕ ಉತ್ತರ ಸಿಗದೇ ನಾನು ಸ್ಥಾನಕ್ಕೆ ಮರಳಲ್ಲ ಎಂದರು. ಸಚಿವ ಬಸವರಾಜ್ ಮಾತನಾಡಿ, ನಾನು ಮೈಸೂರಿಗೆ ತೆರಳಿ ಸಭೆ ನಡೆಸುತ್ತೇನೆ. ಸಮಸ್ಯೆ ಪರಿಹರಿಸುತ್ತೇನೆ ಎಂದರು..

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗಾಗಿ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಿಧಾನ ಪರಿಷತ್‌ಗೆ ತಿಳಿಸಿದರು.

ರೈತರ ನ್ಯಾಯಕ್ಕಾಗಿ ಸದನದ ಬಾವಿಗಿಳಿದು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಧರಣಿ ; ಪೀಠಕ್ಕೆ ಸವಾಲಿನ ಆರೋಪ

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ನಿಯಮ 72ರ ಅಡಿ ಮಂಡಿಸಿರುವ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿ, ಕೆಲ ಪ್ರಕರಣಗಳಲ್ಲಿ ಭೂಮಾಲೀಕರು ಮತ್ತು ಮೈಸೂರು ನಗರಾಭಿವೃದ್ಧಿ ಪಾಧಿಕಾರದ ಮಧ್ಯೆ ಪರಸ್ಪರ ಒಪ್ಪಂದದ ಮುಖಾಂತರ ಭೂಮಿ ವಶಪಡಿಸಿಕೊಂಡು ಬಡಾವಣೆ ರಚಿಸಲಾಗಿರುತ್ತದೆ.

ಈ ಹಿಂದೆ ಮೈಸೂರು ನಗರದಲ್ಲಿ ಸಿಐಟಿಬಿ ಇದ್ದಂತಹ ಸಂದರ್ಭದಲ್ಲಿ ಸುಮಾರು 30 ರಿಂದ 50 ವರ್ಷಗಳ ಹಿಂದೆ ಪರಸ್ಪರ ಒಪ್ಪಿಗೆ ಮೇಲೆ ಸ್ಥಳದಲ್ಲಿಯೇ ಭೂಮಾಲೀಕರನ್ನು ಒಪ್ಪಿಸಿ ಕರಾರಿನ ಮುಖಾಂತರ ಬಡಾವಣೆ ರಚಿಸಲಾಗಿತ್ತು.

ಅಂತಹ ಭೂಮಿಯನ್ನು ಭೂಸ್ವಾಧೀನ ಪಡಿಸಿಲ್ಲ ಅಥವಾ ಅಧಿಸೂಚನೆ ಹೊರಡಿಸಿಲ್ಲವೆಂದು ಈಗ ಭೂಮಾಲೀಕರಿಂದ ಮೇಲಿಂದ ಮೇಲೆ ಅರ್ಜಿಗಳು ಪ್ರಾಧಿಕಾರಕ್ಕೆ ಸ್ವೀಕೃತವಾಗುತ್ತಿವೆ. ಅಂತಹ ಕೆಲ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದ ದಾಖಲೆ ಪ್ರತಿಗಳು ಶಿಥಿಲವಾಗಿವೆ. ಈ ಕುರಿತು ಸೂಕ್ತ ತನಿಖೆ ಮಾಡಿ ಭೂಸ್ವಾಧೀನಕ್ಕೆ ಒಳಪಡದೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ಭೂಮಾಲೀಕರು ಒಪ್ಪಿದಂತಹ ಪ್ರಕರಣಗಳಲ್ಲಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದರು.

'ಸದರಿ ನಿವೇಶನದ ಮೌಲ್ಯವು ಕೃಷಿ ಜಮೀನಿನ ಮೌಲ್ಯಕಿಂತ ಅಧಿಕ'

ಭೂಮಾಲೀಕರು ಒಪ್ಪಂದಂತಹ ಪ್ರಕರಣಗಳಲ್ಲಿ ಭೂಸ್ವಾಧೀನ ಕಾಯ್ದೆ 2013ರಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಜರುಗಿಸಿ ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನಗಳನ್ನು ನೀಡುವುದರಿಂದ ಸದರಿ ನಿವೇಶನದ ಮೌಲ್ಯವು ಕೃಷಿ ಜಮೀನಿನ ಮೌಲ್ಯಕಿಂತ ಅಧಿಕವಾಗಿರುವುದರಿಂದ ಭೂಮಾಲೀಕರಿಗೆ ಲಾಭದಾಯಕವಾಗಿರುತ್ತದೆ ಎಂದರು.

ಈ ಉತ್ತರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮರಿತಿಬ್ಬೇಗೌಡರು, ನನಗೆ ಸಮರ್ಪಕ ಉತ್ತರ ಸಿಕ್ಕಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಬಡಾವಣೆ ರಚನೆ ಮಾಡುವಾಗ, ಸದರಿ ಸ್ಥಳದಲ್ಲಿ ಹೆಚ್ಚುವರಿಯಾಗಿ ಭೂಸ್ವಾಧೀನ ಪಡಿಸಿಕೊಳ್ಳದೆ ಇರುವ ಪ್ರದೇಶವನ್ನು ಬಳಕೆ ಮಾಡಿಕೊಂಡು, ಬಡಾವಣೆ ರಚನೆ ಮಾಡಲಾಗಿರುತ್ತದೆ.

ಭೂಸ್ವಾಧೀನಪಡಿಸಿಕೊಳ್ಳದೆ ಉಪಯೋಗಿಸಿಕೊಂಡಿರುವ ಅಷ್ಟೇ ಪ್ರಮಾಣದ ಭೂಮಿಯನ್ನು ಭೂ ಮಾಲೀಕರಿಗೆ ಬದಲಿಯಾಗಿ ಕೊಡಲು ಪ್ರಾಧಿಕಾರದ ಸಭೆಯಲ್ಲಿ ಒಪ್ಪುತ್ತಿಲ್ಲ ಎಂದು ಹೇಳಿದರು. 50-50 ಅನುಪಾತದಲ್ಲಿ ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗುತ್ತಿದೆ. ಈ ಸಂಬಂಧ ಪ್ರಾಧಿಕಾರದ ಆಯುಕ್ತರು ಸಭೆಗೆ ನಿಯಮಾವಳಿಗಳನ್ನು ಸರಿಯಾಗಿ ತಿಳಿಸದೆ ಇರುವುದರಿಂದ ಸದರಿ ಭೂ ಮಾಲೀಕರಿಗಷ್ಟೇ ಪ್ರಮಾಣದ ಬದಲಿ ಭೂಮಿಯನ್ನು ನೀಡದೆ ಇರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆಯ ಬಗ್ಗೆ ನಾನು ಗಮನ ಸೆಳೆದಿದ್ದೆ.

ಈಗಲಾದರೂ ಕ್ರಮದ ಭರವಸೆ ನೀಡಬೇಕು. ಅಕ್ರಮವಾಗಿ ನಿರ್ಮಾಣವಾಗಿರುವ ಬಡಾವಣೆಗೆ ಕಾನೂನಿನಲ್ಲಿ ಪರವಾನಗಿ ನೀಡುವ ಅವಕಾಶ ಇಲ್ಲ ಎಂದರು. 2000ನೇ ಇಸವಿಯ ಪ್ರಕರಣ ಇದಾಗಿದೆ. ಇಲ್ಲಿ ಪ್ರಾಮಾಣಿಕ ರೈತರಿಗೆ ಅನ್ಯಾಯ ಆಗುವುದಿಲ್ಲ. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು. ಮರಿತಿಬ್ಬೇಗೌಡರು ಸರ್ಕಾರದಿಂದ ಎಂಡಾಸ್ಮೆಂಟ್ ಕೊಡಿ, ಬೇಕಾದರೆ ಕೋರ್ಟ್‌ಗೆ ಹೋಗಲಿ ಎಂದು ಸಲಹೆ ಇತ್ತರು. ಈ ವಿಚಾರವನ್ನು ಮರುಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

'ಹೊಸ ಭೂ ಸುಧಾರಣೆ ಕಾಯ್ದೆ ಅಡಿ 1/4 ಪರಿಹಾರ ನೀಡಿದರೆ ಸಮಸ್ಯೆ ಬಗೆಹರಿಯುತ್ತೆ'

ಉತ್ತರದಿಂದ ಅಸಮಾಧಾನಗೊಂಡ ಮರಿತಿಬ್ಬೇಗೌಡರು ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಸರ್ಕಾರದ ಕಡೆಯಿಂದ ಮನವೊಲಿಸುವ ಕಾರ್ಯ ನಡೆಯಿತು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಧ್ಯಪ್ರವೇಶ ಮಾಡಿ, ಹೊಸ ಭೂ ಸುಧಾರಣೆ ಕಾಯ್ದೆ ಅಡಿ 1/4 ಪರಿಹಾರ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ಸಮಸ್ಯೆ ಕೊನೆಯಾಗುತ್ತದೆ ಎಂದರು.

ಮತ್ತೆ ಎದ್ದು ನಿಂತ ಸಚಿವ ಬಸವರಾಜ್, ತುಂಬಾ ಹಳೆಯ ಪ್ರಕರಣ ಇದಾಗಿದೆ. ವಿಚಾರಣೆ ನಡೆಸುತ್ತೇವೆ. ಈಗಲೇ ಕ್ರಮದ ಬಗ್ಗೆ ತಿಳಿಸಲಾಗದು. ಪ್ರಾಮಾಣಿಕರಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಸಭಾಪತಿ ಪೀಠಕ್ಕೆ ಸವಾಲು?

ಸದನದ ಬಾವಿಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ ಮರಿತಿಬ್ಬೇಗೌಡರಿಗೆ ನೀವು ಮಾತನ್ನು ವಿರೋಧಿಸುತ್ತೀರಿ ಎಂದಾಗ, ಹೌದು ವಿರೋಧಿಸುತ್ತೇನೆ ಎಂದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ಸಭಾಪತಿ ಪೀಠಕ್ಕೆ ಸವಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ಗಮನ ಸೆಳೆಯುವ ಸೂಚನೆಯತ್ತ ಮುಂದಾದಾಗ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಸಭಾಪತಿಗಳು ಸಮಜಾಯಿಷಿ ನೀಡಲು ಮುಂದಾದರೂ, ಕ್ರಮದ ಭರವಸೆ ಸಿಗಬೇಕು ಎಂದು ಮರಿತಿಬ್ಬೇಗೌಡ ಪಟ್ಟು ಹಿಡಿದರು.

ನಿಮ್ಮೊಂದಿಗೆ ಸರ್ಕಾರ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮನವೊಲಿಸಲು ಯತ್ನಿಸಿದರೂ, ಪ್ರಯತ್ನ ಫಲ ಕೊಡಲಿಲ್ಲ. ಮರಿತಿಬ್ಬೇಗೌಡ ಧರಣಿ ಮುಂದುವರಿಸಿದರು. ಸಭಾಪತಿಗಳು ಮತ್ತಷ್ಟು ಮನವೊಲಿಸುವ ಕಾರ್ಯ ಮಾಡಿದರು. ಮರಿತಿಬ್ಬೇಗೌಡ ಮಾತನಾಡಿ, ಸಮಯ ಮಿತಿ ಬೇಕು ಎಂದರು.

ಸದನವನ್ನೇ ಪ್ರಶ್ನಿಸುತ್ತೀರಾ ಎಂದಿದ್ದಕ್ಕೆ ಗೌಡರು ಹೌದು ಎಂದು ಸವಾಲು ಹಾಕಿದರು. ರೈತ ವಿರೋಧಿ ಸರ್ಕಾರ ಬಂದ ಸಂದರ್ಭದಿಂದಲೂ ಅವರಿಗೆ ಕಿರುಕುಳ ನೀಡುತ್ತಿದೆ. ಸಮರ್ಪಕ ಉತ್ತರ ಸಿಗದೇ ನಾನು ಸ್ಥಾನಕ್ಕೆ ಮರಳಲ್ಲ ಎಂದರು. ಸಚಿವ ಬಸವರಾಜ್ ಮಾತನಾಡಿ, ನಾನು ಮೈಸೂರಿಗೆ ತೆರಳಿ ಸಭೆ ನಡೆಸುತ್ತೇನೆ. ಸಮಸ್ಯೆ ಪರಿಹರಿಸುತ್ತೇನೆ ಎಂದರು. ಮುಂದಿನ ಮೂಡಾ ಸಭೆಗೆ ಬರುತ್ತೇನೆ ಎಂದು ಸಚಿವರು ಭರವಸೆ ಕೊಡಬೇಕೆಂದು ಒತ್ತಾಯಿಸಿದರು. ಆಡಳಿತ- ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಹೆಚ್ಚಿದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು 10 ನಿಮಿಷ ಮುಂದೂಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.