ETV Bharat / city

ಗ್ರಾಮ ಪಂಚಾಯತ್ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಸಂಸ್ಥೆಗೆ ₹1 ಲಕ್ಷ ದಂಡ: ಹೈಕೋರ್ಟ್ ಆದೇಶ

author img

By

Published : Dec 27, 2021, 3:46 PM IST

ಸುಳ್ಳು ಆರೋಪ ಮಾಡಿದ್ದ ಸಂಸ್ಥೆಗೆ 1 ಲಕ್ಷ ರೂ ದಂಡ,High court slaps 1 lakh fine to skf company
ಸುಳ್ಳು ಆರೋಪ ಮಾಡಿದ್ದ ಸಂಸ್ಥೆಗೆ 1 ಲಕ್ಷ ರೂ ದಂಡ

ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್ ಗ್ರಾಮ ಪಂಚಾಯತ್​ ವಿರುದ್ಧ ಅರ್ಜಿ ಸಲ್ಲಿಸಿದ್ದ ಎಸ್.ಕೆ.ಎಫ್ ಬಾಯ್ಲರ್ ಅಂಡ್ ಡ್ರೈಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.

ಬೆಂಗಳೂರು: ನ್ಯಾಯಾಲಯಕ್ಕೆ ಸತ್ಯ ಸಂಗತಿಗಳನ್ನು ಮರೆಮಾಚಿ ಗ್ರಾಮ ಪಂಚಾಯತ್​ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅರ್ಜಿ ಸಲ್ಲಿಸಿದ್ದ ಸಂಸ್ಥೆಗೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್ ಗ್ರಾಮ ಪಂಚಾಯತ್​ ವಿರುದ್ಧ ಎಸ್.ಕೆ.ಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತನ್ನ ಲೋಪಗಳು ಹಾಗೂ ಸತ್ಯಾಂಶಗಳನ್ನು ಮುಚ್ಚಿಟ್ಟಿದೆ. ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದೆ. ನ್ಯಾಯಾಂಗವನ್ನು ಕಲುಷಿತಗೊಳಿಸಲು ನಡೆಸುವ ಪ್ರಯತ್ನಗಳನ್ನು ಅತ್ಯಂತ ಕಠಿಣವಾಗಿ ಹತ್ತಿಕ್ಕಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಭತ್ತ ಸಂಸ್ಕರಣೆಗೆ ಪರವಾನಿಗೆ ಪಡೆದು ಸ್ಪ್ರೇ ಪೇಂಟ್ ತಯಾರಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಪರಿಸರ ಕಲ್ಮಶಗೊಳಿಸುತ್ತಿರುವ ಸಂಸ್ಥೆಯನ್ನು ಮುಚ್ಚುವಂತೆ ಗ್ರಾ.ಪಂ. ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ನ್ಯಾಯಾಲಯಕ್ಕೆ ಸತ್ಯ ಮರೆಮಾಚಿದ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ ಸಂಸ್ಥೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ. ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ 4 ವಾರಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.

(ಇದನ್ನೂ ಓದಿ: ಅಂತ್ಯಕ್ರಿಯೆ ಮಾಡುವಾಗ ಅಚ್ಚರಿ.. ಕಣ್ತೆರೆದು ಮಾತಾಡಿದ 'ಮೃತ ತಾತ'..!)

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರಿ ತಾಲೂಕಿನ ಪಡುಮಾರ್ನಾಡ್ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಭತ್ತದ ಸಂಸ್ಕರಣಾ ಘಟಕ ನಡೆಸುವುದಾಗಿ ಲೈಸೆನ್ಸ್ ಪಡೆದಿದ್ದ ಎಸ್.ಕೆ.ಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ ಸಂಸ್ಥೆ ಸ್ಪ್ರೇ ಪೇಂಟ್ ತಯಾರಿಕಾ ಘಟಕ ನಡೆಸುತ್ತಿತ್ತು. ಘಟಕದಿಂದ ವಾಯು ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟಕಕ್ಕೆ ಗ್ರಾ.ಪಂ. ಪಿಡಿಒ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ, ಸಂಸ್ಥೆಯು ಈ ನೋಟಿಸ್​ಗೆ ಸೊಪ್ಪು ಹಾಕಿರಲಿಲ್ಲ. ಅಂತಿಮವಾಗಿ ನಿಯಮಬಾಹಿರವಾಗಿ ನಡೆಸುತ್ತಿರುವ ಘಟಕವನ್ನು 7 ದಿನಗಳಲ್ಲಿ ಮುಚ್ಚುವಂತೆ ಪಡುಮಾರ್ನಾಡ್ ಗ್ರಾ.ಪಂ. 2021ರ ಅಕ್ಟೋಬರ್30 ರಂದು ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ವೇಳೆ ಎಸ್.ಕೆ.ಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ ಲಿಮಿಟೆಡ್​​ನ ಅಸಲಿಯತ್ತು ಬಯಲಾಗಿತ್ತು. ಸರ್ಕಾರದ ಪರ ವಕೀಲರಾದ ಪ್ರತಿಮಾ ಹೊನ್ನಾಪುರ ವಾದ ಮಂಡಿಸಿದ್ದರು.

(ಇದನ್ನೂ ಓದಿ: ಕ್ರಿಸ್ಮಮಸ್‌ಗೂ ಮುನ್ನ ದಿನ ಕೇರಳದಲ್ಲಿ ಎಣ್ಣೆ ಕಿಕ್‌ ; ಡಿ.24 ರಂದು ದಾಖಲೆಯ ₹65 ಕೋಟಿ ಮೌಲ್ಯದ ಮದ್ಯ ಮಾರಾಟ)

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.