ETV Bharat / city

ರಾಜ್ಯದಲ್ಲಿ ಈವರೆಗೆ ಸಂಭವಿಸಿದ ಪ್ರಮುಖ ಬಸ್​ ಅಪಘಾತಗಳು ಮತ್ತು ಸಾವು..

author img

By

Published : Mar 19, 2022, 6:12 PM IST

accidents
ಅಪಘಾತಗಳ

ತುಮಕೂರಿನ ಪಾಗವಡದಲ್ಲಿ ಇಂದು ನಡೆದ ಖಾಸಗಿ ಬಸ್​ ಅಪಘಾತದಲ್ಲಿ 5 ಜನರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಈವರೆಗೆ ಸಂಭವಿಸಿದ ಪ್ರಮುಖ ಬಸ್​ ಅಪಘಾತಗಳ ಬಗ್ಗೆ ತಿಳಿಯೋಣ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಳಿ ಇಂದು ನಡೆದ ಖಾಸಗಿ ಬಸ್ ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಹಲವಾರು ಜನರಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನಡೆದ ಅಪಘಾತಗಳಲ್ಲಿ ಹಲವು ಜನರು ಬಲಿಯಾದ ದುರಂತಗಳ ಪಟ್ಟಿ ಇಲ್ಲಿದೆ.

ಕೋಲಾರ- 09 ಸೆಪ್ಟೆಂಬರ್ 2014.. ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಶ್ರೀರಂಗಾಪುರ ಎಂಬಲ್ಲಿ ಕೆಎಸ್​ಆರ್​ಟಿಸಿ ಮತ್ತು ಮರಳು ತುಂಬಿದ್ದ ಲಾರಿ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದವರು ಆರ್​ ಎಲ್​ ಜಾಲಪ್ಪ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

ಉತ್ತರಕನ್ನಡ- 25 ಮೇ 2017.. ಉತ್ತರ ಕನ್ನಡ ಜಿಲ್ಲೆಯ ಅನ್ನಬೀಲು ಕ್ರಾಸ್​ ಬಳಿ ವೇಗವಾಗಿ ಬಂದ ಖಾಸಗಿ ಬಸ್​ ಮತ್ತು ವ್ಯಾನ್​ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ 8 ಜನರು ಸಾವನ್ನಪ್ಪಿದ್ದರು. ಅಲ್ಲದೇ ಇದರಲ್ಲಿ 22 ಜನರು ಗಾಯಗೊಂಡಿದ್ದರು.

ಮೈಸೂರು-14 ಮಾರ್ಚ್ 2018.. ಬಸ್​ ಓವರ್​ಟೇಕ್​ ಮಾಡಲು ಹೋಗಿ ಎದುರಿಗೆ ಬಂದ ಇನ್ನೊಂದು ಬಸ್​ಗೆ ಗುದ್ದಿದ ಪರಿಣಾಮ 4 ಮಂದಿ ಸಾವನ್ನಪ್ಪಿ 45 ಮಂದಿ ಗಾಯಗೊಂಡ ಘಟನೆ ಜಿಲ್ಲೆಯ ಚಿಕ್ಕಹಳ್ಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 766ರಲ್ಲಿ ನಡೆದಿತ್ತು. ಈ ವೇಳೆ 2 ಬಸ್​ಗಳ ಮಧ್ಯೆ ಕಾರು ಸಿಲುಕಿಕೊಂಡು ಅದರಲ್ಲಿದ್ದವರೆಲ್ಲರ ಪ್ರಾಣಪಕ್ಷಿ ಹಾರಿಹೊಗಿತ್ತು.

ತುಮಕೂರು- 21 ಮೇ 2018.. ಈ ಹಿಂದೆಯೂ ಕೂಡ ತುಮಕೂರು ಜಿಲ್ಲೆಯಲ್ಲಿ ನಿಂತಿದ್ದ ವಾಹನಕ್ಕೆ ಬಸ್​ ಡಿಕ್ಕಿಯಾಗಿ ಪಲ್ಟಿಯಾದ ಕಾರಣ ಅದರಲ್ಲಿದ್ದ 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.

ಕಲಬುರ್ಗಿ- 2 ಜೂನ್ 2018.. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಭಾರಿ ಮಳೆಯಿಂದಾಗಿ ಎರಡು ಬಸ್​ಗಳ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದರು.

ತುಮಕೂರು-27 ಆಗಸ್ಟ್ 2018.. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಎಂಬಲ್ಲಿ ಎನ್‌ಎಚ್ 48 ರಲ್ಲಿ ಖಾಸಗಿ ಬಸ್ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಮಧ್ಯೆ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು.

ಬೆಂಗಳೂರು-12 ಸೆಪ್ಟೆಂಬರ್ 2018.. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಯಮಲೂರು-ದೊಡ್ಡನೆಕುಂದಿ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗೆ ಕಾರು ಡಿಕ್ಕಿಯಾಗಿ 4 ಮಂದಿ ಸಾವನ್ನಪ್ಪಿ, ಒಬ್ಬರು ಗಾಯಗೊಂಡಿದ್ದರು.

ಧಾರವಾಡ-17 ನವೆಂಬರ್ 2018.. ಧಾರವಾಡ ಜಿಲ್ಲೆಯ ಭದ್ರಾಪುರ ಮತ್ತು ನಲವಡಿ ಎಂಬಲ್ಲಿ ರಸ್ತೆಯಲ್ಲಿ ನಿಂತಿದ್ದ ವಾಹನವನ್ನು ತಪ್ಪಿಸಲು ಹೋಗಿ ಎದುರಿಗೆ ಬಂದ ಟ್ರಕ್‌ಗೆ ಗುದ್ದಿದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೇ ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದರು.

ಬೆಂಗಳೂರು-17 ಜೂನ್ 2019.. ಬೆಂಗಳೂರಿನ ದೇವನಹಳ್ಳಿಯ ವಿಶ್ವನಾಥಪುರದ ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಹೋದ ಆಟೋವೊಂದು ಖಾಸಗಿ ಬಸ್​ಗೆ ಗುದ್ದಿ ನಾಲ್ವರು ಹತರಾಗಿದ್ದರು.

ಉಡುಪಿ-15 ಫೆಬ್ರವರಿ 2020.. ಉಡುಪಿ ಜಿಲ್ಲೆಯ ಕಾರ್ಕಳದ ಎಸ್‌ಕೆ ಬಾರ್ಡರ್ ಬಳಿಯ ಮಾಳ ಎಂಬಲ್ಲಿ ರಸ್ತೆ ತಿರುವನ್ನು ಗುರುತಿಸುವಲ್ಲಿ ವಿಫಲವಾದ ಬಸ್​ ಚಾಲಕ ರಸ್ತೆ ಬದಿ ಇದ್ದ ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದರು. ಅಲ್ಲದೇ, 27 ಮಂದಿ ಈ ವೇಳೆ ಗಾಯಗೊಂಡಿದ್ದರು.

ಚಿತ್ರದುರ್ಗ-27 ಡಿಸೆಂಬರ್ 2020.. ರಾಯಚೂರಿನಿಂದ ಬೆಂಗಳೂರಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಕ್ರೂಸರ್​ ವಾಹನ, ಬೆಂಗಳೂರಿನಿಂದ ಲಿಂಗಸೂಗೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​​ಗೆ ಡಿಕ್ಕಿಯಾಗಿ 5 ಮಂದಿ ಕಾರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟು, 17 ಮಂದಿ ಗಾಯಗೊಂಡಿದ್ದರು. ಈ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿತ್ತು. ಘಟನೆಯಲ್ಲಿ ಕ್ರೂಸರ್​ ವಾಹನದ ಟಾಪ್​ ಕಿತ್ತುಹೋಗಿತ್ತು.

ಧಾರವಾಡ-15 ಜನವರಿ 2021.. ಧಾರವಾಡದ ಇಟ್ಟಿಗಟ್ಟಿ ಕ್ರಾಸ್​ ಬಳಿ ಮಿನಿ ಬಸ್​ನಲ್ಲಿ ಅಪಘಾತಕ್ಕೀಡಾಗಿ ಮಹಿಳೆಯರು ಸೇರಿದಂತೆ 13 ಮಂದಿ ಮಹಿಳೆಯರು ಸಾವನ್ನಪ್ಪಿದರು. ಇವರೆಲ್ಲರೂ ದಾವಣಗೆರೆಯರಾಗಿದ್ದು, ಒಂದೇ ಶಾಲೆಯಲ್ಲಿ ಓದಿದ್ದ ಸ್ನೇಹಿತರಾಗಿದ್ದರು.

ಬೆಳಗಾವಿ-24 ಜನವರಿ 2021.. ಬೆಳಗಾವಿಯ ಸವದತ್ತಿ ತಾಲೂಕಿನಲ್ಲಿ KSRTC ಬಸ್‌ಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ದೊಡ್ಡಬಳ್ಳಾಪುರ-23 ಅಕ್ಟೋಬರ್ 2021.. ಬೆಂಗಳೂರಿನಿಂದ 50 ಕಿ.ಮೀ. ದೂರವಿರುವ ದೊಡ್ಡಬಳ್ಳಾಪುರ ಬಳಿಯ ಮಾಕಳಿ-ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಾಲಕನ ಅಜಾಗರೂಕತೆಯಿಂದಾಗಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 29 ಮಂದಿ ಗಾಯಗೊಂಡಿದ್ದರು.

ಓದಿ: ಪಾವಗಡ ಬಸ್ ಅಪಘಾತ: ಕಾರ್ಮಿಕನ ಎಡಗೈ ಕಟ್​.. ಮರುಜೋಡಣೆಗೆ ಬೆಂಗಳೂರಿಗೆ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.