ನೆಲಮಂಗಲ (ಬೆಂಗಳೂರು) : ಮಹಿಳೆಯೋರ್ವಳು ಆಣೆ ಪ್ರಮಾಣ ಮಾಡಿಸುವ ನೆಪದಲ್ಲಿ ಮತ್ತೋರ್ವ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದುಕೊಂಡು ಮುಖಕ್ಕೆ ನಿವಾಳಿಸಿ ಸೀರೆಯ ಸೆರಗಿಗೆ ಅಡಿಕೆಯನ್ನು ಕಟ್ಟಿ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾಳೆ.
ಸೊಂಡೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಅನುಸೂಯಮ್ಮ(54) ಎಂಬುವರ ಮನೆಗೆ ದಿನಸಿ ಸಾಮಗ್ರಿ ತರಲು ಅಂಗಡಿಗೆ ಹೋಗುವ ಸಮಯದಲ್ಲಿ, ಮಹಿಳೆಯೋರ್ವಳು ಕೂಗಿ ಕರೆದು ಆಟೋದಲ್ಲಿ ಹೋಗೋಣವೆಂದು ಅನುಸೂಯಮ್ಮನವರನ್ನು ಮಾತನಾಡಿಸಿಕೊಂಡು ಬಂದಿದ್ದಾಳೆ. ಇದೇ ಸಮಯಕ್ಕೆ ಬಂದ ಬೈಕ್ ಸವಾರ ನನ್ನ ಪರ್ಸ್ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದು, ನೀವು ತೆಗೆದುಕೊಂಡಿದ್ದೀರಾ ಎಂದು ಕೇಳಿದ್ದಾನೆ.
ಇದನ್ನೂ ಓದಿ: 73ನೇ ಗಣರಾಜ್ಯೋತ್ಸವ ಪರೇಡ್: ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ
ಆಗ ಅನುಸೂಯಮ್ಮ ಪರ್ಸ್ ತೆಗೆದುಕೊಂಡಿಲ್ಲವೆಂದು ಹೇಳಿದಾಗ ಪ್ರಮಾಣ ಮಾಡಿ ಹೇಳಿ ಎಂದಿದ್ದು, ಈ ಸಮಯದಲ್ಲಿ ಜೊತೆಯಲ್ಲಿದ್ದ ಮಹಿಳೆ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದುಕೊಂಡು ಮುಖಕ್ಕೆ ನಿವಾಳಿಸಿ ಸೀರೆಯ ಸೆರಗಿಗೆ ಕಟ್ಟಿ ಅಲ್ಲಿಂದ ಹೋಗಿದ್ದಾಳೆ.
ಅನುಮಾನಗೊಂಡ ಅನುಸೂಯಮ್ಮ ಸೀರೆಯ ಸೆರಗಿನ ಗಂಟು ಬಿಚ್ಚಿದಾಗ ಅಡಿಕೆ ಮಾತ್ರ ಸಿಕ್ಕಿದೆ. 50 ಗ್ರಾಂ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.