ETV Bharat / city

ಪಾರ್ಟಿಗೆ ಬಂದಿದ್ದ ಯುವಕನನ್ನು ಸ್ನೇಹಿತರೇ ಬಿಯರ್ ಬಾಟಲಿಯಿಂದ ಹೊಡೆದು ಕೊಂದರು!

author img

By

Published : Oct 17, 2021, 10:39 AM IST

Updated : Oct 17, 2021, 1:09 PM IST

murder
murder

ಬೆಳಗಾವಿ ಹೊರವಲಯದಲ್ಲಿ ಯುವಕನೋರ್ವನಿಗೆ ಬಿಯರ್ ಬಾಟಲಿಯಿಂದ ಹೊಡೆದು ಆತನ ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬೆಳಗಾವಿ: ಸ್ನೇಹಿತರು ಕರೆದಿದ್ದಾರೆಂದು ಪಾರ್ಟಿಗೆ ತೆರಳಿದ್ದ ಯುವಕನನ್ನು ಬಿಯರ್ ಬಾಟಲ್​ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಹೊರವಲಯದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದ ರಾಮಚಂದ್ರ ಕಣಬರಕರ್ (30) ಹತ್ಯೆಯಾದ ಯುವಕ. ಎರಡು ದಿನಗಳ ಹಿಂದೆ ರಾಮಚಂದ್ರನಿಗೆ ಸ್ನೇಹಿತರು ಫೋನ್ ಮಾಡಿ, ಪಾರ್ಟಿಗೆ ಬಾ ಎಂದು ಕರೆದಿದ್ದಾರೆ. ಊಟಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ರಾಮಚಂದ್ರ ಹೊರಬಂದಿದ್ದಾನೆ. ತಡರಾತ್ರಿಯಾದರೂ ಯುವಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಫೋನ್ ಮಾಡಿದ್ದಾರೆ. ಈ ವೇಳೆ ದಾಂಡಿಯಾ ಆಡುತ್ತಿರುವುದಾಗಿ ರಾಮಚಂದ್ರನ ಸ್ನೇಹಿತರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ನಂತರ ಮತ್ತೆ ಫೋನ್ ಮಾಡಿದಾಗ ರಾಮಚಂದ್ರ ಪಿಕ್ ಮಾಡಿಲ್ಲ. ಮರುದಿನ ಬರಬಹುದು ಎಂದು ತಿಳಿದು ಕುಟುಂಬಸ್ಥರು ನಿದ್ರೆಗೆ ಜಾರಿದ್ದಾರೆ.

ಬಿಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ

ರಾಮಚಂದ್ರ ಬಾರ್​ನಲ್ಲಿ ಕುಳಿತು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಾರ್ಟಿ ಮುಗಿದ ನಂತರ ಅ.14ರ ಮಧ್ಯರಾತ್ರಿ ಸ್ನೇಹಿತರು ಜಗಳವಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಬಿಯರ್ ಬಾಟಲಿಯಿಂದ ಹೊಡೆದಾಡಿದ್ದಾರೆ. ಪರಿಣಾಮ, ರಾಮಚಂದ್ರನ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದು, ಮರುದಿನ ಬೆಳಗ್ಗೆ ರಸ್ತೆ ಬದಿ ಬಿದ್ದಿದ್ದ ಯುವಕನನ್ನು ಗಮನಿಸಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳೀಯರ ಸಹಾಯ ಪಡೆದು ರಾಮಚಂದ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಆತ ‌ಮೃತಪಟ್ಟಿದ್ದು, ಈ ಕುರಿತು ಕಾಕತಿ ಠಾಣೆಯಲ್ಲಿ ‌ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ:

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ವಿಕ್ರಂ ಆಮಟೆ,ಆರೋಪಿಗಳ ಪತ್ತೆಗೆ ಬೆಳಗಾವಿ ‌ಗ್ರಾಮೀಣ ಎಸಿಪಿ ಹಾಗೂ ಕಾಕತಿ ಠಾಣೆ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚಿಸಿದ್ದಾರೆ. ಫೋನ್ ಕಾಲ್ ಹಾಗೂ ಟಾವರ್ ಲೋಕೇಶನ್‌ ಆಧರಿಸಿ ಹಂತಕರಿಗೆ ಶೋಧ ನಡೆಸಲಾಗುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿಠ್ಠಲನ ಭಕ್ತನಾಗಿದ್ದ ರಾಮಚಂದ್ರ:

ವಿಪರೀತ ಕುಡಿಯುತ್ತಿದ್ದ ರಾಮಚಂದ್ರನಿಗೆ ಕುಟುಂಬಸ್ಥರು ಪಂಡರಪುರ ವಿಠ್ಠಲನ‌ ಮಾಲೆ ಹಾಕಿಸಿ ಕುಡಿತದ ಚಟ ಬಿಡಿಸಿದ್ದರು. ಆದರೆ ಸ್ನೇಹಿತರ ಸಹವಾಸದಿಂದ ಕಳೆದೆರಡು ತಿಂಗಳಿಂದ ಮತ್ತೆ ರಾಮಚಂದ್ರ ‌ಕುಡಿಯಲು ಆರಂಭಿಸಿದ್ದನು. ಜೊತೆಗೆ ಈತನಿಗೆ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆಯಲ್ಲಿ ತೊಡಗಿದ್ದರು.

Last Updated :Oct 17, 2021, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.