ಬೆಳಗಾವಿ: ಬೆಳಗಾವಿ ಹೊರವಲಯದ ಹಲಗಾ - ಮಚ್ಛೆ ಬೈಪಾಸ್ ರಸ್ತೆ ( Halaga-Macche Bypass) ಕಾಮಗಾರಿಗೆ ಮತ್ತೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಬೆಳಗಾವಿ ತಾಲೂಕಿನ ಹಲಗಾ ಬಳಿ ಕಾಮಗಾರಿ ಆರಂಭಿಸಿರುವ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ (Farmers Protest) ವ್ಯಕ್ತಪಡಿಸಿದ್ದಾರೆ.
ಹಲಗಾ ಗ್ರಾಮದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ರೈತ ಮುಖಂಡರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ರೈತ ಮುಖಂಡ ರವಿ ಪಾಟೀಲ್ ಗುತ್ತಿಗೆದಾರರನ್ನು ತರಾಟೆ ತಗೆದುಕೊಂಡರು. ಹೈಕೋರ್ಟ್ (Karnataka High Court) ತಡೆಯಾಜ್ಞೆ ತೆರವುಗೊಳಿಸಿದ ಪ್ರತಿ, ವರ್ಕ್ ಆರ್ಡರ್ ತೋರಿಸುವಂತೆ ಪಟ್ಟು ಹಿಡಿದರು.
ಫಲವತ್ತಾದ ಜಮೀನಿನಲ್ಲಿ ಕಾಮಗಾರಿ ಮಾಡುತ್ತಿದ್ದೀರಿ, ಹೊಟ್ಟೆಗೆ ಏನ್ ತಿಂತೀರಿ?. 2006ರಲ್ಲಿ ಬರಗಾಲ ಬಿದ್ದಾಗ ಇಲ್ಲಿ ಬೆಳೆದ ಅಕ್ಕಿಯನ್ನೇ ರಾಜ್ಯಾದ್ಯಂತ ಸರಬರಾಜು ಮಾಡಲಾಗಿದೆ. ಇದು ಒಂದೇ ಒಂದು ಕಲ್ಲು ಇಲ್ಲದಂತ ಫಲವತ್ತಾದ ಜಮೀನು. ಫಲವತ್ತಾದ ಜಮೀನನ್ನು ಬಂಜರು ಭೂಮಿ ಎಂದು ತೋರಿಸಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್ ಜೊತೆಗೂ ರೈತರು ವಾಗ್ವಾದ ನಡೆಸಿದ್ದಾರೆ. ರೈತರ ವಿರೋಧದ ನಡುವೆಯೂ 6ನೇ ದಿನದ ಕಾಮಗಾರಿ ಮುಂದುವರೆದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಜಮೀನಿಗೆ ಗುಂಟೆಗೆ 85 ಸಾವಿರ ರೂ. ಪರಿಹಾರ ನೀಡಲಾಗಿದೆ. ಇಲ್ಲಿ ಸದ್ಯ ಪ್ರತಿ ಗುಂಟೆ ಜಮೀನಿಗೆ 10 ಲಕ್ಷ ರೂಪಾಯಿ ಇದೆ. ಪರಿಹಾರ ಹೆಚ್ಚಳ ಮಾಡುವಂತೆ ರೈತರು ಒತ್ತಾಯಿಸಿದ್ದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಇದೆ.
ಇದನ್ನೂ ಓದಿ:ಯುವತಿ ವಿಚಾರ: ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಸಾಮೂಹಿಕ ಹಲ್ಲೆ..VIDEO