ಬಂಟ್ವಾಳ: ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ನಮ್ಮವರ ನೋವಿಗೆ ಸ್ಪಂದಿಸುವುದು ಅಗತ್ಯ. ಅವರಿಗೆ ನೆರವಾಗಲು ದೇವರು ನಮಗೆ ಕೊಟ್ಟ ಅವಕಾಶವೆಂದು ಭಾವಿಸೋಣ ಎಂದು ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಪ್ರದೇಶಕ್ಕೆ ಎಲ್ಲಾ ರಾಜ್ಯಗಳಿಂದ ಜನ ಪ್ರವಾಹದೋಪಾದಿಯಂತೆ ತೆರಳುತ್ತಿದ್ದಾರೆ. ಈ ಲಕ್ಷಾಂತರ ಜನ (ಮಹಾರಾಷ್ಟ್ರವೂ ಸೇರಿ) ಬಂದಾಗಲೆಲ್ಲಾ ಉತ್ತರ ಪ್ರದೇಶದಲ್ಲಿ ಸಂತೋಷದಿಂದ ತನ್ನೆರಡೂ ಕೈಗಳಿಂದ ಅವರನ್ನು ಸ್ವಾಗತಿಸುತ್ತಿದ್ದಾರೆ. ಆದರೆ ನಾವು ಅಲ್ಲಿಂದ ಬರುವವರನ್ನು ಸಂಶಯದಿಂದ ಯಾಕೆ ನೋಡುತ್ತೇವೆ ಎಂದು ಪ್ರಶ್ನಿಸಿದ್ದಾರೆ.
ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ, ಸಹೃದಯಿ, ಕಷ್ಟಕ್ಕೆ ಸ್ಪಂದಿಸುವ ಹಾಗೂ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ. ಕಳೆದ 3 ತಿಂಗಳಿಂದ ನಮ್ಮ ಜನರು ದೇಶ-ವಿದೇಶಗಳಲ್ಲಿ ಸಿಲುಕಿ ತೊಂದರೆಗೊಳಗಾಗಿದ್ದಾರೆ. ಕೆಲವು ಜನ ಕೆಲಸ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಕೊರೊನಾ ವ್ಯಾಪಿಸುತ್ತಿರುವಾಗ ನಮ್ಮ ಊರಲ್ಲಿ ಹೆಚ್ಚಿನ ರಕ್ಷಣೆ ಸಿಗಬಹುದೆಂಬ ಆಶಯದಿಂದ ತಮ್ಮ ಮನೆಗೆ ಮರಳಿದ್ದಾರೆ. ಇನ್ನಷ್ಟು ಜನರು ಬರಲು ತಯಾರಿ ನಡೆಸುತ್ತಿದ್ದಾರೆ.
ಕಳೆದ 3 ತಿಂಗಳಿಂದ ಕೆಲಸವಿಲ್ಲದೆ ಕೈಯಲ್ಲಿ ಇದ್ದ ಹಣವನ್ನು ಕಳೆದುಕೊಂಡು ಸಮಸ್ಯೆಯಲ್ಲಿದ್ದಾರೆ. ಮುಂಬೈಯಲ್ಲಿನ ವ್ಯವಸ್ಥೆ ಮತ್ತೆ ಸಹಜತೆಗೆ ಮರಳಲು ತುಂಬಾ ಸಮಯ ಹಿಡಿಯಬಹುದು. ಈ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿರಬಹುದು. ಊರಿಗೆ ಬರುತ್ತಿರುವ ಆ ನಮ್ಮ ಬಂಧುಗಳನ್ನು ಬರುವುದು ಬೇಡ ಅನ್ನುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಮನೆಗೆ ಮರಳುತ್ತಿರುವವರನ್ನು ಅಸ್ಪೃಶ್ಯ ಭಾವದಿಂದ ನೋಡುವುದು ಸರಿಯಲ್ಲ.
ಮುಂಬೈಗೆ ಹೋಗಿ ಅಲ್ಲಿ ಆ ಮಹಾವಾಣಿಜ್ಯ ನಗರದಲ್ಲಿ ಅಥವಾ ಇಡೀ ಮಹಾರಾಷ್ಟ್ರದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಚಲನಚಿತ್ರರಂಗದಲ್ಲಿ ಅವರು ರಾರಾಜಿಸಿ ನಮ್ಮ ಜಿಲ್ಲೆಗೂ ಗೌರವ ತಂದಿದ್ದಾರೆ. ಇಲ್ಲಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಮ್ಮ ಉಭಯ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಚಟುವಟಿಕೆಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಬ್ರಹ್ಮಕಲಶ, ಜೀರ್ಣೋದ್ಧಾರ, ಗುಡಿ, ಗೋಪುರಗಳ ಕಾರ್ಯಗಳಿಗಾಗಿ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಇದರಿಂದ ಇಲ್ಲಿಯ ನಮ್ಮ ಎಲ್ಲಾ ರೀತಿಯ ಜನಜೀವನ ಚೆನ್ನಾಗಿ ನಡೆದುಕೊಂಡು ಬಂದಿದೆ. ಬಹಳಷ್ಟು ಉದ್ಯೋಗ ಸೃಷ್ಟಿಯಾಗಿದೆ. ಇದರಿಂದ ನಮ್ಮ ಕುಟುಂಬಗಳೂ ಸಶಕ್ತವಾಗಿವೆ ಎಂದು ಭಟ್ ನೆನಪಿಸಿದ್ದಾರೆ.