ದಾಹೋದ್ (ಗುಜರಾತ್): ಪ್ರಿಯಕರನೊಂದಿಗೆ ಓಡಿ ಹೋದ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ತಾಲಿಬಾನ್ ಮಾದರಿಯ ಶಿಕ್ಷೆ ನೀಡಿರುವ ಘಟನೆ ಗುಜರಾತ್ನ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಮತ್ತು ಪ್ರಿಯಕರನ್ನು ಹಿಡಿದು ಆಕೆಯ ಪತಿ ಮತ್ತು ಗ್ರಾಮಸ್ಥರು ಸೇರಿಕೊಂಡು ಮನಸೋ ಇಚ್ಛೆ ತೀವ್ರವಾಗಿ ಥಳಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ: ಫತೇಪುರ ತಾಲೂಕಿನ ಮರ್ಗಾಲ ಗ್ರಾಮದ ಈ ಮಹಿಳೆ ಮತ್ತು ಆಕೆಯ ಪ್ರಿಯಕರ ಕಳೆದ ಒಂದು ವರ್ಷದಿಂದ ಪರಾರಿಯಾಗಿದ್ದರು. ಮೇ 28ರಂದು ಇಬ್ಬರೂ ಕೂಡ ಮದುವೆ ಸಮಾರಂಭಕ್ಕೆ ಬಂದಿದ್ದರು. ಈ ವಿಷಯ ತಿಳಿದ ಗಂಡ ಸಂಸು ಭಭೋರ್ ಮತ್ತು ಆತನ ಮನೆಯವರು ಹಾಗೂ ಗ್ರಾಮಸ್ಥರು ಸೇರಿಕೊಂಡು ಇಬ್ಬರನ್ನು ಹಿಡಿದಿದ್ದಾರೆ. ಗ್ರಾಮದಲ್ಲಿ ಅಟ್ಟಾಡಿಸಿ ಇಬ್ಬರಿಗೂ ಥಳಿಸಿದ್ದಾರೆ. ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ದಾಳಿ ಮಾಡಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲ, ಪ್ರಿಯಕರನ ತಲೆಗೆ ಮಹಿಳೆ ಸೀರೆ ಸುತ್ತಿ ಹೊಡೆದಿದ್ದಾರೆ. ಈ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ದಂಪತಿ: ಹಲ್ಲೆಗೆ ಒಳಗಾದ ಸಂತ್ರಸ್ತ ಮಹಿಳೆ ಹಾಗೂ ಪತಿ ಸಂಸು ಭಭೋರ್ ಇಬ್ಬರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಈಗ ನಾಲ್ಕು ಮಕ್ಕಳಿದ್ದಾರೆ. ಒಂದು ವರ್ಷದಿಂದ ಪತಿಯಿಂದ ದೂರವಾಗಿ ಪಕ್ಕದ ಜವೇಸಿ ಗ್ರಾಮದ ಕಾಂತಿ ಎಂಬಲ್ಲಿ ಮಹಿಳೆ ನೆಲೆಸಿದ್ದರು. ಇದರಿಂದ ಆಕೆಯ ಪತಿ ಮತ್ತು ಆತನ ಸಹೋದರರು ಆಕೆಯ ದ್ವೇಷ ಸಾಧಿಸುತ್ತಿದ್ದರು ಎಂದು ತಿಳಿದು ಬಂದಿದೆ.
ದಾಹೋದ್ ಎಸ್ಪಿ ಹೇಳಿದ್ದೇನು?: ಮೇ 28ರಂದು ಬೆಳಗ್ಗೆ ಮದುವೆ ಸಮಾರಂಭಕ್ಕೆ ಮಹಿಳೆ ಮತ್ತು ಆಕೆಯ ಪ್ರಿಯಕರ ಬಂದ ವಿಷಯವು ಗಂಡನ ಮನೆಯವರೆಗೆ ಗೊತ್ತಾಗಿದೆ. ಅಂತೆಯೇ, ಇಬ್ಬರನ್ನೂ ಗ್ರಾಮಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ದುಷ್ಕೃತ್ಯವು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರ ಆಧಾರದ ಮೇಲೆ ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಾಹೋದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ತಿಳಿಸಿದ್ದಾರೆ.
ದಾಹೋದ್ ಜಿಲ್ಲೆಯಲ್ಲಿ ಇಂತಹ ದುಷ್ಕೃತ್ಯ ಇದೇ ಮೊದಲಲ್ಲ: ಈ ಹಿಂದೆ ದಾಹೋದ್ ಜಿಲ್ಲೆಯಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಇದಕ್ಕೂ ಮುಂಚೆಯೇ ಮಹಿಳೆಯರ ಕೂದಲು ಕತ್ತರಿಸುವುದು, ಊರವರ ಸಮ್ಮುಖದಲ್ಲಿಯೇ ಪತಿಯನ್ನು ಹೆಗಲ ಮೇಲೆ ಕೂರಿಸಿ ಮಹಿಳೆಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆಗಳು ವರದಿಯಾಗಿದ್ದವು. ಇದೀಗ ಮಹಿಳೆಯ ತನ್ನ ಪ್ರಿಯಕರನೊಂದಿಗೆ ಓಡಿ ಹೋದ ಕಾರಣಕ್ಕೆ ತಾಲಿಬಾನ್ ರೀತಿಯ ಶಿಕ್ಷೆ ನೀಡಿರುವ ಹಲವಾರು ವಿಡಿಯೋಗಳು ಮುನ್ನೆಲೆಗೆ ಬಂದಿದ್ದು, ದುಷ್ಕೃತ್ಯ ಸಾಕಷ್ಟು ಸಂಚಲನ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಸಿಹಿ ತಿಂಡಿ ಕದ್ದ ಆರೋಪ: ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಕಂಬಕ್ಕೆ ಥಳಿತ