ETV Bharat / bharat

ಅರಣ್ಯದಲ್ಲಿ ಇಬ್ಬರು ನಕ್ಸಲ್​ ನಾಯಕರ ಸೆರೆ: ಟಿಫಿನ್ ಬಾಂಬ್ ಸೇರಿ ಸ್ಫೋಟಕಗಳ ಜಪ್ತಿ

author img

By

Published : Apr 8, 2023, 6:07 PM IST

two-top-naxals-arrested-with-explosive-material-in-chhattisgarh
ಅರಣ್ಯದಲ್ಲಿ ಇಬ್ಬರು ನಕ್ಸಲ್​ ನಾಯಕರ ಸೆರೆ: ಟಿಫಿನ್ ಬಾಂಬ್ ಸೇರಿ ಸ್ಫೋಟಕಗಳ ಜಪ್ತಿ

ಛತ್ತೀಸ್‌ಗಢದ ಸುಕ್ಮಾ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿ ಇಬ್ಬರು ನಕ್ಸಲ್​ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ದೊಡ್ಡ ಯಶಸ್ಸು ದೊರೆತಿದೆ. ತಲಾ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಹೊತ್ತಿದ್ದ ಇಬ್ಬರು ಉನ್ನತ ನಕ್ಸಲ್​​ ನಾಯಕರನ್ನು ಶುಕ್ರವಾರ ಬಂಧಿಸಲಾಗಿದೆ. ಅಲ್ಲದೇ, ಬಂಧಿತರಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕುಕನಾರ್ ಅರಣ್ಯದಲ್ಲಿ ನಕ್ಸಲೀಯರು ಸ್ಫೋಟಕ ವಸ್ತುಗಳನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದರ ಮೇರೆಗೆ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ನಕ್ಸಲ್​​ ನಾಯಕರಾದ ಮುಚಾಕಿ ಸುಖರಾಮ್ ಮತ್ತು ಮದ್ವಿ ಕೋಸಾ ಎಂಬುವವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಡಿಪಿಒ ತೊಮೇಶ್ ವರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ನಕ್ಸಲ್​ ಪೀಡಿತ ಗ್ರಾಮದ Inspiring story.. ನಕ್ಸಲ್​ 'ಮಾವ' ಸ್ಫೋಟಿಸಿದ ಶಾಲೆಯಲ್ಲಿ ಸೊಸೆ ಶಿಕ್ಷಕಿ!

ಸುಕ್ಮಾ ಮತ್ತು ದಾಂತೇವಾಡ ಜಿಲ್ಲೆಯ ಕುನ್ನಾ ಗಡಿ ಗ್ರಾಮಗಳಾದ ಕಣ್ವಡ್‌ಪಾರಾ ಮತ್ತು ಪೆಡಪಾರಾ ಪ್ರದೇಶದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಕುಕನಾರ್ ಪೊಲೀಸ್ ಠಾಣೆಯ ಜಿಲ್ಲಾ ಸಶಸ್ತ್ರ ಪಡೆ ಮತ್ತು ಡಿಆರ್‌ಜಿ ಪಡೆಯು ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಪೊಲೀಸ್​ ಶೋಧ ಕಾರ್ಯ ನಡೆಯುತ್ತಿದ್ದಂತೆಯೇ ಕೆಲ ಅನುಮಾನಾಸ್ಪದ ವ್ಯಕ್ತಿಗಳು ಪೊಲೀಸರನ್ನು ಕಂಡ ನಂತರ ಅಡಗಿಕೊಳ್ಳಲು ಯತ್ನಿಸಿದರು. ಎಸ್‌ಡಿಪಿಒ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತರಾಗಿ ನಕ್ಸಲರು ಅಡಗಿಕೊಂಡಿದ್ದ ಮನೆಗೆ ಮುತ್ತಿಗೆ ಹಾಕಿದರು. ಈ ಮೂಲಕ ಮುಚಾಕಿ ಸುಖರಾಮ್ ಮತ್ತು ಮದ್ವಿ ಕೋಸಾನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಸ್ಫೋಟಕ ವಸ್ತುಗಳು ಜಪ್ತಿ: ಬಂಧಿತ ನಕ್ಸಲರಿಂದ ಹಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 8-10 ಕೆಜಿಯ ಒಂದು ಟಿಫಿನ್ ಬಾಂಬ್ (ಸುಧಾರಿತ ಸ್ಫೋಟಕ ಸಾಧನ - ಐಇಡಿ), 12 ಎಲೆಕ್ಟ್ರಿಕ್ ಡಿಟೋನೇಟರ್, ಒಂದು ಎಲೆಕ್ಟ್ರಿಕ್ ಮಲ್ಟಿಮೀಟರ್, ಸುಮಾರು 60 ಕೆಜಿ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಜೊತೆಗೆ ಬ್ಯಾಟರಿ, ವಿದ್ಯುತ್ ತಂತಿ, ಸ್ವಿಚ್, ಡಿಟೋನೇಟರ್, ಒಂದು ಕಪ್ಪು ಪಿಟ್ಟು ಬ್ಯಾಗ್, ಮೂರು ಚುಚ್ಚುಮದ್ದುಗಳು, ಔಷಧಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ವರ್ಮಾ ಮಾಹಿತಿ ನೀಡಿದರು.

ನಕ್ಸಲ್​​ ಸಾಹಿತ್ಯ ಪುಸ್ತಕಗಳ ಪತ್ತೆ: ಇದೇ ವೇಳೆ ನಕ್ಸಲವಾದಕ್ಕೆ ಪ್ರೇರಿಸುವ ಸಾಹಿತ್ಯ ಪುಸ್ತಕಗಳು ಮತ್ತು ದಿನಬಳಕೆಯ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕ ವಸ್ತುಗಳು ಬಗ್ಗೆ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಬಂಧಿತರು, ತಮ್ಮ ದೊಡ್ಡ ಮುಖಂಡರಾದ ಜಗದೀಶ್, ಮಡ್ಕಂ ಸೋಮದು, ಹೇಮಲ ಭೀಮ, ಜಯಲಾಲ್, ಪ್ರದೀಪ್ ಎಂಬುವವರ ಆಜ್ಞೆಯ ಮೇರೆಗೆ ಪೊಲೀಸರ ಮೇಲೆ ದಾಳಿ ಮಾಡಲು ಈ ಸ್ಫೋಟಕಗಳನ್ನು ಬಳಕೆ ಮಾಡುತ್ತಿದ್ದರು ಎಂಬುದಾಗಿ ಬಾಯ್ಬಿಟ್ಟಿದ್ದಾರೆ ಎಂದೂ ಪೊಲೀಸರು ಬಹಿರಂಗ ಪಡಿಸಿದರು.

ಅಲ್ಲದೇ, ವಿಚಾರಣೆ ವೇಳೆ ಆರೋಪಿಗಳು ನಕ್ಸಲ್​​ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದನ್ನೂ ಒಪ್ಪಿಕೊಂಡಿದ್ದಾರೆ. ಈ ಬಂಧಿತ ನಾಯಕರ ತಲೆಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸದ್ಯ ಇಬ್ಬರ ವಿರುದ್ಧವೂ ಕುಕನಾರ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್​​: ಈತನ ತಲೆಗೆ ಘೋಷಿಸಲಾಗಿತ್ತು 15 ಲಕ್ಷ ರೂ. ಬಹುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.