ETV Bharat / bharat

ರೈಲು ಹಳಿ ಮೇಲೆಯೇ ನಿದ್ದೆಗೆ ಜಾರಿದ್ದ ಮೂವರು ಯುವಕರು ಸಾವು..!

author img

By

Published : Jul 17, 2023, 5:12 PM IST

ಬಂಕಾ ಜಿಲ್ಲೆಯ ಬಂಕಾ-ಜಸಿದಿಹ್ ರೈಲ್ವೆ ವಿಭಾಗದಲ್ಲಿ ಮೂವರು ಯುವಕರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Three youths died In Banka
ರೈಲು ಹಳಿ ಮೇಲೆಯೇ ನಿದ್ದೆಗೆ ಜಾರಿದ್ದ ಮೂವರು ಯುವಕರು ಸಾವು

ಬಂಕಾ (ಬಿಹಾರ): ರೈಲು ಹಳಿ ದಾಟುವಾಗ ನಾವು ಅತ್ತಿತ್ತ ನೋಡಿ ಜಾಗರೂಕತೆಯಿಂದ ಸುರಕ್ಷಿತವಾಗಿ ದಾಟುತ್ತೇವೆ. ಆದ್ರೆ ಬಂಕಾ ಜಿಲ್ಲೆಯಲ್ಲಿ ಯುವಕರು ತಮ್ಮ ನಿರ್ಲಕ್ಷ್ಯದಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ. ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕಾ-ಜಸಿದಿಹ್ ರೈಲು ಮಾರ್ಗದ ಪಾಪರೆವಾ ಅರಣ್ಯದಲ್ಲಿ ಈ ಘಟನೆ ನಡೆದಿದೆ. ದಿಯೋಘರ್-ಅಗರ್ತಲಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸುಸ್ತಾಗಿದ್ದ ಕಾರಣ ಮೂವರು ಯುವಕರು ಮನೆಗೆ ತೆರಳದೇ ರೈಲ್ವೇ ಹಳಿ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ರೈಲು ಬಂದಿರುವುದನ್ನು ಗಮನಿಸದೇ ಇರುವುದರಿಂದ ಈ ಅವಘಡ ಸಂಭವಿಸಿದೆ.

ರೈಲಿಗೆ ಸಿಲುಕಿ ಮೂವರು ಯುವಕರು ಸಾವು: ಮೃತ ಮೂವರೂ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೀಲಾಸ್ಥಾನ, ಉದಯಪುರ ಮತ್ತು ಪಾಪರೆವಾ ಪ್ರದೇಶದ ನಿವಾಸಿಗಳು ಆಗಿದ್ದಾರೆ. ಅವರನ್ನು ಮಾಣಿಕ್ಲಾಲ್ ಮುರ್ಮು, ಅರವಿಂದ ಮುರ್ಮು ಮತ್ತು ಸೀತಾರಾಮ್ ಮುರ್ಮು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಯುವಕರು ತಮ್ಮ ಸಂಬಂಧಿಕರನ್ನು ಕಳುಹಿಸಲು ಮತ್ತೊಂದು ಊರಿಗೆ ಹೋಗಿದ್ದರು. ನಂತರ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ತುಂಬಾ ಸುಸ್ತಾಗಿ ಮೂವರು ಯುವಕರು ರೈಲ್ವೆ ಟ್ರ್ಯಾಕ್​ನಲ್ಲೇ ನಿದ್ದೆಗೆ ಜಾರಿದ್ದಾರೆ. ಅಷ್ಟರಲ್ಲಿ ರೈಲು ಹಾದು ಹೋಗಿ ಅವಘಡ ಸಂಭವಿಸಿದೆ. "ಮೂವರು ಯುವಕರು ಆ ಕಡೆಯಿಂದ ಬರುತ್ತಿದ್ದರು. ಮನೆಗೆ ಹೋಗುವುದಾಗಿ ಹೇಳಿದ್ದರು. ಸ್ವಲ್ಪ ಸಮಯದ ಹಿಂದೆ ರೈಲಿಗೆ ಸಿಲುಕಿ ಸಾವೀಗಿಡಾಗಿರುವುದು ತಿಳಿದಿದೆ'' ಎಂದು ಹೇಳುತ್ತಾರೆ ಗ್ರಾಮಸ್ಥ ಉದಯ್ ಕುಮಾರ್.

ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು: ಅಪಘಾತದ ಬಳಿಕ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಘಟನೆಯ ಬಗ್ಗೆ ಜನರು ತರಾತುರಿಯಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಕಟೋರಿಯಾ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೂವರು ಯುವಕರ ಜೇಬಿನಿಂದ ಮೊಬೈಲ್, ಕೇಸರಿ ಬಟ್ಟೆ, ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಲ್ಹಾರ ಎಸ್‌ಡಿಪಿಒ ಪ್ರೇಮಚಂದ್ರ ಸಿಂಗ್ ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ್ದ ಇಬ್ಬರು ಯುವಕರು: ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯ ಫ್ಲೈ ಓವರ್ ಹತ್ತಿರ ಇತ್ತೀಚೆಗೆ ನಡೆದಿತ್ತು. ಮಣಿ (25) ಮತ್ತು ಜನಾರ್ಧನ ಪೂಜಾರಿ (21) ಮೃತರೆಂದು ಗುರುತಿಸಲಾಗಿದೆ. ಮಣಿ ಕೋಲಾರ ಜಿಲ್ಲೆಯವರು. ಮತ್ತೊಬ್ಬ ಯುವಕ ಜನಾರ್ಧನ್ ಪೂಜಾರಿ ಕೊಪ್ಪಳ ಜಿಲ್ಲೆಯ ಲಿಂಗದಮಂಡಿ ಗ್ರಾಮದವರು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಪರಿಶೀಲನೆ ನಡೆಸಿದ್ದರು. ಮೃತದೇಹಗಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿತ್ತು. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಏಕ ಕಾಲಕ್ಕೆ ಟ್ರ್ಯಾಕ್ಟರ್, ಲಾರಿಗೆ ಡಿಕ್ಕಿ ಹೊಡೆದ ಕಾರು: ಇಬ್ಬರು ಯುವಕರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.