ETV Bharat / bharat

'ಸರ್ಕಾರದಿಂದ ಪಡೆದ ಹಣ ವಾಪಸ್ ನೀಡಿ': ಐಎಎಸ್​ ಅಧಿಕಾರಿಗೆ ತೆಲಂಗಾಣ ಹೈಕೋರ್ಟ್​​​ ತಾಕೀತು

author img

By

Published : May 3, 2022, 1:45 PM IST

Telangana High Court orders IAS Smitha Sabharwal to refund Rs 15 lakh legal expenses
'ಸರ್ಕಾರದಿಂದ ಪಡೆದ ಹಣ ವಾಪಸ್ ನೀಡಿ': ಐಎಎಸ್​ ಅಧಿಕಾರಿಗೆ ತೆಲಂಗಾಣ ಹೈಕೋರ್ಟ್​​​ ಸೂಚನೆ

ತಮ್ಮ ವೈಯಕ್ತಿಕ ಪ್ರಕರಣವೊಂದಕ್ಕೆ ಸರ್ಕಾರದ ಖಜಾನೆಯಿಂದ ಹಣ ಮಂಜೂರು ಮಾಡಿಸಿಕೊಂಡಿದ್ದ ಐಎಎಸ್ ಅಧಿಕಾರಿಗೆ ಹಣವನ್ನು ಹಿಂದಿರುಗಿಸಲು ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ..

ಹೈದರಾಬಾದ್ : ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಅವರು ಸರ್ಕಾರದ ಖಜಾನೆಯಿಂದ ಪಡೆದಿದ್ದ 15 ಲಕ್ಷ ರೂಪಾಯಿಯನ್ನು ಮರುಪಾವತಿಸುವಂತೆ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ. 90 ದಿನಗಳಲ್ಲಿ ಹಣವನ್ನು ಪಾವತಿ ಮಾಡಲು ಅಧಿಕಾರಿಗೆ ಸೂಚನೆ ನೀಡಿದ್ದು, ಒಂದು ವೇಳೆ ನಿಗದಿತ ವೇಳೆಯಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಮುಂದಿನ 30 ದಿನಗಳಲ್ಲಿ ಹಣ ವಸೂಲಿ ಮಾಡುವಂತೆ ರಿಜಿಸ್ಟ್ರಾರ್ ಜನರಲ್​ಗೆ ಸೂಚಿಸಲು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ನಡೆದಿದ್ದೇನು?: 2015ರಲ್ಲಿ ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಮತ್ತು ಅವರ ಪತಿ ಹೋಟೆಲೊಂದರಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಆಧರಿಸಿ ನಿಯತಕಾಲಿಕೆಯೊಂದು 'ನೋ ಬೋರಿಂಗ್ ಬಾಬು' ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಮಿತಾ ಸಬರ್ವಾಲ್ ಅವರು ನಿಯತಕಾಲಿಕೆಯ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.

ಈ ಮೊಕದ್ದಮೆಗಾಗಿ ನ್ಯಾಯಾಲಯದ ಶುಲ್ಕವಾಗಿ 9.75 ಲಕ್ಷ ರೂಪಾಯಿಯನ್ನು ಪಾವತಿಸಲು ತೆಲಂಗಾಣ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ ಸರ್ಕಾರ 9.75 ಲಕ್ಷ ರೂಪಾಯಿ ನ್ಯಾಯಾಲಯ ಶುಲ್ಕ ಸೇರಿದಂತೆ, ಇತರ ವೆಚ್ಚ ಸೇರಿದಂತೆ 15 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಸ್ಮಿತಾ ಸಬರ್ವಾಲ್ ತಮ್ಮ ವೈಯಕ್ತಿಕ ವಿಚಾರಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿ.ವಿದ್ಯಾಸಾಗರ್ ಮತ್ತು ಕೆ.ಈಶ್ವರ ರಾವ್ ಎಂಬುವರು ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಾವಲಿ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದು, ಸಂವಿಧಾನದ 282ನೇ ವಿಧಿಯ ಪ್ರಕಾರ ಸಾರ್ವಜನಿಕ ಒಳಿತಿಗಾಗಿ ಹಣವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಆದರೆ, ಖಾಸಗಿ ವ್ಯಕ್ತಿ ಮತ್ತೊಂದು ಖಾಸಗಿ ಸಂಸ್ಥೆಯ ವಿರುದ್ಧ ಹೋಗುವುದು ಸಾರ್ವಜನಿಕ ಹಿತಾಸಕ್ತಿಯಲ್ಲ. ಸ್ಮಿತಾ ಸಬರ್ವಾಲ್ ಅವರ ಖಾಸಗಿ ಪ್ರಕರಣಕ್ಕೆ ಸರ್ಕಾರದ ಖಜಾನೆಯಿಂದ ಹಣ ಪಡೆದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ ಖಾಸಗಿಯವರ ಲಾಭಕ್ಕಾಗಿ ಸಾರ್ವಜನಿಕ ಖಜಾನೆ ಮೇಲೆ ಆರ್ಥಿಕ ಹೊರೆ ಹಾಕುವುದು ಸೂಕ್ತವಲ್ಲ. ಹಣ ಮಂಜೂರು ಮಾಡಿದ ತೆಲಂಗಾಣ ಸರ್ಕಾರದ ನಿರ್ಧಾರ ಅಸಮಂಜಸವಾಗಿದೆ. ಸ್ಮಿತಾ ಸಬರ್ವಾಲ್ ಅವರು ಪಡೆದುಕೊಂಡಿರುವ ಹಣವನ್ನೆಲ್ಲಾ ವಾಪಸ್ ಸರ್ಕಾರಕ್ಕೆ ಮರುಪಾವತಿ ಮಾಡಬೇಕೆಂದು ತೀರ್ಪು ನೀಡಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ರಂಜಾನ್​ ಪ್ರಾರ್ಥನೆ ನಂತರ ಪೊಲೀಸರು, ಯೋಧರ ಮೇಲೆ ಕಲ್ಲು ತೂರಾಟ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.