ETV Bharat / bharat

ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್​ಗೆ ಕರ್ನಾಟಕ ಸರ್ಕಾರದ ಅಫಿಡವಿಟ್‌

author img

By ETV Bharat Karnataka Team

Published : Aug 24, 2023, 8:25 PM IST

Updated : Aug 24, 2023, 9:39 PM IST

tamil-nadu-cannot-force-us-to-release-water-karnataka-tells-sc-on-cauvery-water-dispute
ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್​ಗೆ ಕರ್ನಾಟಕ ಸರ್ಕಾರದ ಅಫಿಡವಿಟ್‌

ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಹೊಸ ನಿರ್ದೇಶನಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್​ಗೆ ​ತಮಿಳುನಾಡು ಅರ್ಜಿ ಹಾಕಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ತನ್ನ ಅಫಿಡವಿಟ್‌ ಸಲ್ಲಿಸಿತು.

ನವದೆಹಲಿ: ಕಾವೇರಿ ನದಿ ನೀರು ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನಾದಿನ ಕರ್ನಾಟಕ ಸರ್ಕಾರ ಅಫಿಟವಿಟ್‌ ಸಲ್ಲಿಸಿದೆ. ಬಿಳಿಗುಂಡ್ಲುವಿನ ಅಂತರರಾಜ್ಯ ಗಡಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ-ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕೆ ತಮಿಳುನಾಡಿನ ಅನಗತ್ಯ ವಿರೋಧದಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕರ್ನಾಟಕ ಅಫಿಟವಿಟ್‌ನಲ್ಲಿ ಉಲ್ಲೇಖಿಸಿದೆ.

ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಹೊಸ ನಿರ್ದೇಶನಗಳನ್ನು ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 25ರಂದು ವಿಚಾರಣೆ ನಡೆಸಲಿದೆ. ಹೀಗಾಗಿ ಇದಕ್ಕೂ ಮುನ್ನ ಕರ್ನಾಟಕ ಸರ್ಕಾರ ತನ್ನ ಅಫಿಡವಿಟ್‌ ಸಲ್ಲಿಸಿದೆ.

ಸಾಮಾನ್ಯ ಮಳೆ ವರ್ಷಕ್ಕೆ ನಿಗದಿಪಡಿಸಿದ ನೀರು ಬಿಡುಗಡೆಯ ಪ್ರಕಾರ, ಜೂನ್​ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್​ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್​ನಲ್ಲಿ 36.76 ಟಿಎಂಸಿ, ಅಕ್ಟೋಬರ್​ನಲ್ಲಿ 20.22 ಟಿಎಂಸಿ, ನವೆಂಬರ್​ನಲ್ಲಿ 13.78 ಟಿಎಂಸಿ, ಡಿಸೆಂಬರ್​​ನಲ್ಲಿ 7.35 ಟಿಎಂಸಿ, ಜನವರಿಯಲ್ಲಿ 2.76 ಟಿಎಂಸಿ ಹಾಗೂ ಫೆಬ್ರವರಿಯಲ್ಲಿ 2.5 ಟಿಎಂಸಿ ಸೇರಿ ಮೇ ತಿಂಗಳವರೆಗೆ ಒಟ್ಟು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡುವ ಬಾಧ್ಯತೆ ಹೊಂದಿಲ್ಲ. ಇದಕ್ಕಾಗಿ ತಮಿಳುನಾಡು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ನಾಟಕ ಸರ್ಕಾರ ವಿವರಿಸಿದೆ.

ನೀರು ಹರಿವಿನ ಕೊರತೆಗೆ ಅನ್ವಯಿಸಿದರೆ, ಕರ್ನಾಟಕದ ಕನಿಷ್ಠ ಬೆಳೆ ನೀರಿನ ಅವಶ್ಯಕತೆ ಸುಮಾರು 140 ಟಿಎಂಸಿ ಆಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಜಲಾಶಯಗಳ ಸಂಗ್ರಹ ಮತ್ತು ಒಳಹರಿವನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ಕರ್ನಾಟಕದ ಬೆಳೆಗಳಿಗೆ ಮತ್ತು ಬೆಂಗಳೂರು ನಗರ ಸೇರಿದಂತೆ ಇತರೆ ಪಟ್ಟಣಗಳು ಮತ್ತು ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಈಗಿರುವ ನೀರಿನ ಸಂಗ್ರಹ ಸಾಕಾಗದು ಎಂದು ಹೇಳಿದೆ.

ತಮಿಳುನಾಡು ಸದ್ಯದ ಪರಿಸ್ಥಿತಿಯನ್ನು ಸಾಮಾನ್ಯ ಮಳೆ ವರ್ಷದಂತೆಯೇ ಭಾವಿಸಿದೆ. ಸಂಕಷ್ಟದ ವರ್ಷವಲ್ಲ ಎಂಬ ತಪ್ಪು ಊಹೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ದಾಖಲಿಸಿರುವಂತೆ ತಮಿಳುನಾಡಿನಲ್ಲಿ ಮಳೆಯ ಪ್ರಮಾಣವು ಶೇ.25ರಷ್ಟು ಕಡಿಮೆಯಾಗಿದೆ. ಕರ್ನಾಟಕದ ನಾಲ್ಕು ಜಲಾಶಯಗಳ ಒಳಹರಿವು 2023ರ ಆಗಸ್ಟ್ 9ರವರೆಗೆ ಶೇ.42.5ರಷ್ಟು ಕಡಿಮೆ ಇದೆ ಎಂದು ಅಫಿಡವಿಟ್‌ನಲ್ಲಿ ಕರ್ನಾಟಕ ಹೇಳಿದೆ.

ಈ ಮಳೆ ವರ್ಷದ ಆರಂಭದಲ್ಲಿ ತಮಿಳುನಾಡು 69.777 ಟಿಎಂಸಿ (01.06.2023ರಂತೆ) ನೀರು ಸಂಗ್ರಹ ಹೊಂದಿತ್ತು. ಕರ್ನಾಟಕವು 22.08.2023ರವರೆಗೆ 26.768 ಟಿಎಂಸಿ ನೀರು ಹರಿಸಿದೆ. ಹೀಗಾಗಿ ತಮಿಳುನಾಡಿನಲ್ಲಿ ಒಟ್ಟು 96.545 ಟಿಎಂಸಿ ನೀರು ಇರಬೇಕಿತ್ತು. ಆದಾಗ್ಯೂ, ತಮಿಳುನಾಡು ಕೇವಲ 21.655 ಟಿಎಂಸಿ (22.08.2023ರಂತೆ) ನೇರ ಸಂಗ್ರಹ ಉಳಿಸಿಕೊಂಡಿದೆ. ಒಟ್ಟು 69.777 ಟಿಎಂಸಿ ನೀರು ಹರಿಸಿದೆ. ಟ್ರಿಬ್ಯೂನಲ್ ನಿಗದಿಪಡಿಸಿದ 1.851 ಲಕ್ಷ ಎಕರೆಯ ಮಿತಿಯನ್ನೂ ಮೀರಿ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಮಾಡಲು ತಮಿಳುನಾಡು ಅಧಿಕ ನೀರು ಹರಿಸಿದೆ. ಆದ್ದರಿಂದ, ಕಾವೇರಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶದ ಷರತ್ತು-X ಅನ್ನು ಉಲ್ಲಂಘಿಸಿ ತಮಿಳುನಾಡು 69.777 ಟಿಎಂಸಿಯಷ್ಟು ನೀರನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅಫಿಡವಿಟ್​ನಲ್ಲಿ ಕರ್ನಾಟಕ ಉಲ್ಲೇಖಿಸಿದೆ.

ಅಲ್ಲದೇ, ಅಂತರರಾಜ್ಯ ಗಡಿಯಾದ ಬಿಳಿಗುಂಡ್ಲು ಬಳಿ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕದ ಪ್ರಸ್ತಾವವನ್ನು ತಮಿಳುನಾಡು ಅನಗತ್ಯವಾಗಿ ವಿರೋಧಿಸಿದ್ದರಿಂದ ಪ್ರಸ್ತುತ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೆ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಕಾರಣಕ್ಕಾಗಿ ತಮಿಳುನಾಡು ತನ್ನನ್ನು ತಾನೇ ದೂಷಿಸಬೇಕಾಗುತ್ತದೆ. ತಮಿಳುನಾಡಿನ ಸದಸ್ಯರು ಪ್ರಕರಣವನ್ನು ಮಂಡಿಸುವ ಬದಲು ಸಭೆಯಿಂದ ಹೊರನಡೆದಿದ್ದರು ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಆದ್ದರಿಂದ ಹೊಸ ನಿರ್ದೇಶನಗಳಿಗಾಗಿ ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಒತ್ತಾಯಿಸಿದೆ.

ಇದನ್ನೂ ಓದಿ: ಕಾವೇರಿ ನೀರು: ನಾವು ರೈತರ ಹಿತ ಕಾಪಾಡುತ್ತೇವೆ- ಡಿಸಿಎಂ ಡಿ.ಕೆ.ಶಿವಕುಮಾರ್

Last Updated :Aug 24, 2023, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.