ನವದೆಹಲಿ : ಸಂಸತ್ ಸದನದ ಘನತೆ ಕಾಪಾಡಲು ಕಳೆದ ಅಧಿವೇಶನದ ಕೊನೆಯ ದಿನ ಅಶಿಸ್ತು ತೋರಿದ 12 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು ಹೇಳಿದ್ದಾರೆ.
ಕಳೆದ ಮುಂಗಾರು ಅಧಿವೇಶನದಲ್ಲಿ ಅಮಾನತುಗೊಂಡವರು ಹಿಂದೆಂದು ಕಂಡರಿಯದ ರೀತಿಯಲ್ಲಿ ಅಶಿಸ್ತು ಪ್ರದರ್ಶಿಸಿದ್ದಾರೆ. ಒಬ್ಬ ಸಂಸದರು ಎಲ್ಇಡಿ ಪರದೆ ಧ್ವಂಸ ಮಾಡಲು ಪ್ರಯತ್ನಿಸಿದ್ದರು.
ಕೆಲವು ಸಂಸದರು ಮಹಿಳಾ ಮಾರ್ಷಲ್ಗಳ ಮೇಲೆ ಹಲ್ಲೆ ನಡೆಸಿದ್ದರು. ಹೀಗಾಗಿ, ಸದನದ ಘನತೆ ಕಾಪಾಡಲು ಕ್ರಮಕೈಗೊಳ್ಳುವುದು ಮುಖ್ಯ ಎಂದು ಗೋಯಲ್ ಸಭಾಪತಿಗಳ ನಿರ್ಧಾರವನ್ನು ಸಮರ್ಥಿಸಿದ್ದಾರೆ.
ಇದರ ನಡುವೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 8 ವಿರೋಧ ಪಕ್ಷದ ನಾಯಕರು ಇಂದು ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ. ಸಂಸದರನ್ನು ಅಮಾನತುಗೊಳಿಸಿರುವ ನಿರ್ಧಾರವನ್ನು ವಾಪಸ್ ಪಡೆಯುವ ಬಗ್ಗೆ ಸಭಾಪತಿಗಳು ಮರುಪರಿಶೀಲಿಸಬೇಕೆಂದು ಈ ನಾಯಕರು ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು, ಸದನದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದ ಸದಸ್ಯರು ತಮ್ಮ ನಡೆಗೆ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ. ಖರ್ಗೆ ಅವರ ಕಚೇರಿಯಲ್ಲಿ ವಿಪಕ್ಷಗಳು ಮತ್ತೊಂದು ಸುತ್ತಿನ ಸಭೆ ನಂತರ ಸಭಾಪತಿಗಳಿಂದ ಈ ಹೇಳಿಕೆ ಹೊರ ಬಿದ್ದಿದೆ.
ಲೋಕಸಭೆ, ರಾಜ್ಯಸಭೆಗಳಲ್ಲಿಂದೂ ಸಭಾತ್ಯಾಗ..
ಪ್ರತಿಪಕ್ಷ ನಾಯಕರು ಉಭಯ ಸದನಗಳಿಂದ ಹೊರ ನಡೆದ ನಂತರ ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಬಳಿಕ ಸಭೆ ನಡೆಸಿದ್ದಾರೆ. ಸಂಸದರ ಅಮಾನತು ಹಿಂಪಡೆಯುವಿಕೆಯನ್ನು ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಬೆಳಗ್ಗೆ ತಿರಸ್ಕರಿಸಿದ ಹಿನ್ನೆಲೆ ವಿಪಕ್ಷದ ಸದಸ್ಯರು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಸಭಾತ್ಯಾಗ ಮಾಡಿದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ಹಾಗೂ ಹಿಂಸಾತ್ಮಕ ನಡವಳಿಕೆಯಿಂದಾಗಿ ವಿರೋಧ ಪಕ್ಷಗಳ 12 ಸದಸ್ಯರನ್ನು ಡಿಸೆಂಬರ್ 23ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಿಂದ ನಿನ್ನೆ ಅಮಾನತುಗೊಳಿಸಲಾಗಿತ್ತು. ಇವರಲ್ಲಿ ಆರು ಮಂದಿ ಕಾಂಗ್ರೆಸ್, ಟಿಎಂಸಿ ಮತ್ತು ಶಿವಸೇನೆಯ ತಲಾ ಇಬ್ಬರು ಹಾಗೂ ಸಿಪಿಎಂ, ಸಿಪಿಐನ ತಲಾ ಒಬ್ಬರು ಸದಸ್ಯರಿದ್ದಾರೆ.
ಸಿಪಿಎಂನ ಎಲಮರಮ್ ಕರೀಂ (ಸಿಪಿಎಂ), ಕಾಂಗ್ರೆಸ್ನ ಫುಲೋ ದೇವಿ ನೇತಮ್, ಛಾಯಾ ವರ್ಮಾ, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್,ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ಟಿಎಂಸಿಯ ದೋಲಾ ಸೇನ್, ಶಾಂತಾ ಛೆಟ್ರಿ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಹಾಗೂ ಅನಿಲ್ ದೇಸಾಯಿ ಅಮಾನತುಗೊಂಡವರು.
ಇದನ್ನೂ ಓದಿ: ರಾಜ್ಯಸಭಾ ಸದಸ್ಯರ ಅಮಾನತು ಆದೇಶ ಸಮರ್ಥಿಸಿಕೊಂಡ ವೆಂಕಯ್ಯ ನಾಯ್ಡು: ಸದನ ಬಹಿಷ್ಕರಿಸಿ, ಪ್ರತಿಪಕ್ಷಗಳ ಪ್ರತಿಭಟನೆ