ETV Bharat / bharat

ಪ್ರತ್ಯೇಕ ರಸ್ತೆ ಅಪಘಾತದಿಂದ ಉದ್ವಿಗ್ನ ಪರಿಸ್ಥಿತಿ: ಗಾಳಿಯಲ್ಲಿ ಗುಂಡು, ಪೊಲೀಸ್​ ವ್ಯಾನ್​ ಮೇಲೆ ದಾಳಿ

author img

By

Published : Apr 11, 2023, 1:20 PM IST

Etv Bharat
Etv Bharat

ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಆರು ಜನರು ಮೃತಪಟ್ಟ ಘಟನೆ ಅಸ್ಸೋಂನಲ್ಲಿ ನಡೆದಿದೆ. ದಿಬ್ರುಗಢ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಮೂರು ಮಹಿಳೆಯರು ಸಾವನ್ನಪ್ಪಿದ್ದರೆ, ನಾಗಾಂವ್‌ ಜಿಲ್ಲೆಯುಲ್ಲಿ ಮೂವರು ಪುರುಷರು ಮೃತಪಟ್ಟಿದ್ದಾರೆ.

ದಿಬ್ರುಗಢ/ನಾಗಾಂವ್‌ (ಅಸ್ಸೋಂ): ಅಸ್ಸೋಂನ ದಿಬ್ರುಗಢ ಮತ್ತು ನಾಗಾಂವ್‌ ಜಿಲ್ಲೆಯುಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದೆ. ಈ ಎರಡೂ ಘಟನೆಗಳಿಂದ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಿಬ್ರುಗಢ ಜಿಲ್ಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರೆ, ನಾಗಾಂವ್​ನಲ್ಲಿ ಪೊಲೀಸ್​ ವಾಹನದ ಮೇಲೆಯೇ ಆಕ್ರೋಶಿತ ಜನರು ದಾಳಿ ಮಾಡಿದ್ದಾರೆ.

ರಸ್ತೆ ದಾಟುತ್ತಿದ್ದ ಮೂವರು ಮಹಿಳೆಯರು ಸಾವು: ದಿಬ್ರುಗಢ ಜಿಲ್ಲೆಯ ಚಾಬುವಾದಲ್ಲಿ ಸೋಮವಾರ ಸಂಜೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯರನ್ನು ರೀಟಾ ಭಕ್ತ, ಮಿನಾ ಬೇಡಿಯಾ ಮತ್ತು ಸುನಿತಾ ಬೇಡಿಯಾ ಎಂದು ಗುರುತಿಸಲಾಗಿದೆ.

ಈ ಮೂವರು ಸಹ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದರು. ಆದರೆ, ಈ ಸಮಯದಲ್ಲಿ ವೇಗವಾಗಿ ಬಂದ ಡಿಜೈರ್‌ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ಈ ಭೀಕರ ಅಪಘಾತದಲ್ಲಿ ಕಾರು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಮತ್ತೊಂದೆಡೆ, ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಾಯಾಳು ಮಹಿಳೆ ದಿಬ್ರುಗಢ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆ ಬಲಿಯಾದ ವಿಷಯ ತಿಳಿದ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಶುರು ಮಾಡಿದ್ದಾರೆ. ಅಲ್ಲದೇ, ಟೈರ್‌ಗಳನ್ನು ಸುಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್​ ಮಾಡಿದ್ದಾರೆ. ಈ ವೇಳೆ, ಪೊಲೀಸರು ಸಾರ್ವಜನಿಕರ ಮನವೊಲಿಸಲು ಯತ್ನಿಸಿದರಾದರೂ ಪರಿಸ್ಥಿತಿ ಹತೋಟಿ ಸಾಧ್ಯವಾಗಿಲ್ಲ.

ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು: ರಾತ್ರಿ ಮತ್ತೆ ಹಲವರು ಪ್ರತಿಭಟನೆಗೆ ಇಳಿಯಲು ಮುಂದಾದರು. ಆಗ ಕೂಡ ಪೊಲೀಸರು ನ್ಯಾಯ ಕಲ್ಪಿಸುವ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು. ಆದರೂ ಪೊಲೀಸರ ಮಾತನ್ನು ಪ್ರತಿಭಟನಾನಿರತರು ಕೇಳಲು ಸಿದ್ಧರಿರಲಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನತೆಗೊಂಡು ಪ್ರತಿಭಟನಾಕಾರರು ಪೊಲೀಸ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಕಾಟಿ ಮತ್ತು ಟ್ರಕ್ ನಡುವೆ ಡಿಕ್ಕಿ: ಮತ್ತೊಂದೆಡೆ, ನಾಗಾಂವ್‌ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ರಸ್ತೆ ಅಪಘಾತ ಸಂಭವಿಸಿದೆ. ಸ್ಕಾಟಿ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ದಿಮರುಗುರಿ ನಿವಾಸಿಗಳಾದ ಪಂಕಜ್ ದಾಸ್, ಮುನ್ನಾ ದಾಸ್ ಮತ್ತು ಬಿಕ್ರಮ್ ದಾಸ್ ಎಂದು ಗುರುತಿಸಲಾಗಿದೆ. ಈ ಅಪಘಾತದ ನಂತರ ಅನೇಕ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ, ಟ್ರಕ್ ಚಾಲಕ ಪಾನಮತ್ತನಾಗಿರುವುದೇ ಈ ಘಟನೆಗೆ ಕಾರಣ ಎಂದು ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೇ, ಅಪಘಾತ ಸ್ಥಳಕ್ಕೆ 108 ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ತಲುಪಲಿಲ್ಲ. ಸಾಕಷ್ಟು ಹೊತ್ತು ರಸ್ತೆಯಲ್ಲೇ ಮೂವರು ಗಾಯಾಳುಗಳು ಬಿದ್ದಿದ್ದರು ಎಂದು ಸಾರ್ವಜನಿಕರು ದೂರಿದ್ದಾರೆ. ಆಗ ಪೊಲೀಸರು ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲೇ ಪೊಲೀಸ್ ವ್ಯಾನ್ ಮೇಲೆ ರೊಚ್ಚಿಗೆದ್ದ ಜನ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಅಮೆರಿಕ: 100 ದಿನದಲ್ಲಿ 15ನೇ ಸಾಮೂಹಿಕ ಹತ್ಯೆ.. ಗುಂಡಿನ ದಾಳಿಯ ಲೈವ್‌ಸ್ಟ್ರೀಮ್ ಮಾಡಿದ ಶೂಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.