ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವ ಸರ್ಕಾರದ ವಿಶ್ವಾಸಮತ ಯಾಚನೆಗೂ ಕೆಲವೇ ಹೊತ್ತಿಗೆ ಮುಂಚೆ ಉದ್ಧವ್ ಠಾಕ್ರೆ ಬಣದಲ್ಲಿದ್ದ ಮತ್ತೋರ್ವ ಶಾಸಕ ಶಿಂಧೆ ಬಣ ಸೇರಿದ್ದಾರೆ.
ಉದ್ಧವ್ ಠಾಕ್ರೆ ಅವರೊಂದಿಗೆ ಗುರುತಿಸಿಕೊಂಡಿದ್ದ ಶಿವಸೇನೆ ಶಾಸಕ ಸಂತೋಷ್ ಬಂಗಾರ್ ಅವರು ಏಕನಾಥ್ ಶಿಂಧೆ ಬಣ ಸೇರಿದ್ದರಿಂದ ಉದ್ಧವ್ ಠಾಕ್ರೆಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ಬಂಗಾರ್ ಅವರ ಪಕ್ಷಾಂತರದಿಂದ ಈಗ ಶಿಂಧೆ ಬಣ ಒಟ್ಟು 40 ಶಾಸಕರನ್ನು ಹೊಂದಿದೆ.
ಉದ್ಧವ್ ಠಾಕ್ರೆ ರಾಜೀನಾಮೆಯ ನಂತರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಏಕನಾಥ್ ಶಿಂಧೆ ಸರ್ಕಾರವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಪರೀಕ್ಷೆಯನ್ನೂ ಗೆದ್ದುಕೊಂಡಿತು.
ಭಾನುವಾರ, ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗುವುದರೊಂದಿಗೆ ಹೊಸ ಸರ್ಕಾರಕ್ಕೆ ಆನೆಬಲ ಬಂದಂತಾಗಿದೆ. ಸ್ಪೀಕರ್ ಆಗಿ ಚುನಾಯಿತರಾದ ಕೆಲವೇ ಗಂಟೆಗಳಲ್ಲಿ ನಾರ್ವೇಕರ್ ಅವರು, ಶಿವಸೇನಾ ಶಾಸಕ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿ, ಆ ಸ್ಥಾನಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಮರು ನೇಮಕ ಮಾಡಿದ್ದರು. ಅಲ್ಲದೆ ಠಾಕ್ರೆ ಬಣದ ಸುನೀಲ್ ಪ್ರಭು ಅವರನ್ನು ಮುಖ್ಯ ಸಚೇತಕ ಸ್ಥಾನದಿಂದ ವಜಾಗೊಳಿಸಿ ಅವರ ಸ್ಥಾನಕ್ಕೆ ಭರತ್ ಗೊಗಾವಾಲೆ ಅವರನ್ನು ನೇಮಿಸಿದ್ದಾರೆ.