ETV Bharat / bharat

4 ಲೋಕಸಭೆ, 14 ರಾಜ್ಯಗಳ 11 ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್​ ಮತ ಎಣಿಕೆ

author img

By

Published : May 2, 2021, 7:12 AM IST

Updated : May 2, 2021, 8:32 AM IST

Bypolls
Bypolls

ತಮಿಳುನಾಡು, ಕೇರಳ, ಅಸ್ಸೋಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತ್ರಿಪುರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ಉತ್ತರಾಖಂಡ್​ನಲ್ಲಿ ಉಪಚುನಾವಣೆ ನಡೆದಿತ್ತು.

ನವದೆಹಲಿ: ತೀವ್ರ ಕುತೂಹಲ ಮೂಡಿಸಿರುವ ಪಂಚ ರಾಜ್ಯಗಳ ವಿಧಾನಸಭೆಗಳು ಸೇರಿ 14 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.

ಕರ್ನಾಟಕ, ಆಂಧ್ರಪ್ರದೇಶ, ತ್ರಿಪುರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ಉತ್ತರಾಖಂಡ್​ನಲ್ಲಿ ಬೈಎಲೆಕ್ಷನ್ ನಡೆದಿದ್ದವು.

ಕರ್ನಾಟಕದಲ್ಲಿ 'ಮಿನಿ ಸಮರ' ಗೆಲ್ಲೋರು ಯಾರು?

ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ಅಕಾಲಿಕ ಮೃತಪಟ್ಟಿದ್ದು, ಅವರು ಪ್ರತಿನಿಧಿಸಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಹಣಾಹಣಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಾಕ್ಷಿಯಾಗಿದೆ. ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮತ್ತು ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣರಾವ್ ಸೋಂಕಿಗೆ ಬಲಿಯಾಗಿದ್ದರಿಂದ ಬೈಎಲೆಕ್ಷನ್​ ನಡೆದಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣು ಸಲಗರ, ಕಾಂಗ್ರೆಸ್‌ನಿಂದ ಮಾಲಾ ಬಿ.ನಾರಾಯಣರಾವ್, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿಖಾದ್ರಿ, ಪಕ್ಷೇತರರಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಯಚೂರಿನ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಹಾಗೂ ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಸೇರಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಆಂಧ್ರದ ಬೈ ಎಲೆಕ್ಷನ್‌ ಚಿತ್ರಣ

ನೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್‌ನಿಂದ ವೈಎಸ್‌ಆರ್ ಕಾಂಗ್ರೆಸ್ ಎಂ, ಬಲ್ಲಿ ದುರ್ಗಪ್ರಸಾದ ರಾವ್ ಅವರ ಮರಣದ ನಂತರ ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಕೆ. ರತ್ನಪ್ರಭಾ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪನಬಕ ಲಕ್ಷ್ಮಿ ಅವರು ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಸ್ಪರ್ಧಿಸಿದ್ದಾರೆ.

ಮಧ್ಯಪ್ರದೇಶ

ಏಪ್ರಿಲ್ 17ರಂದು ಮಧ್ಯಪ್ರದೇಶದ ದಾಮೋ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ರಾಜ್ಯದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. 22 ಅಭ್ಯರ್ಥಿಗಳ ಪೈಕಿ ಮುಖ್ಯ ಸ್ಪರ್ಧೆ ಬಿಜೆಪಿಯ ರಾಹುಲ್ ಲೋಧಿ ಮತ್ತು ಕಾಂಗ್ರೆಸ್​ನ ಅಜಯ್ ಟಂಡನ್ ಇದ್ದಾರೆ. 2018ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ದಾಮೋದಿಂದ ಗೆದ್ದ ಲೋಧಿ ಅವರು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಧಾನಸಭೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಅನಿವಾರ್ಯವಾಗಿ ಉಪಚುನಾವಣೆ ನಡೆದಿತ್ತು.

ತೆಲಂಗಾಣದಲ್ಲೂ ನಡೆದಿತ್ತು ಉಪಚುನಾವಣೆ

ಕಳೆದ ಡಿಸೆಂಬರ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕ ನೋಮುಲಾ ನರಸಿಂಹಯ್ಯ ನಿಧನರಾದ ನಂತರ ತೆಲಂಗಾಣದ ನಾಗಾರ್ಜುನಸಾಗರ ವಿಧಾನಸಭೆ ಉಪಚುನಾವಣೆ ನಡೆಸಬೇಕಾಯಿತು. ಉಪಚುನಾವಣೆಯ ಮುನ್ನಾದಿನದಂದು ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಕೋವಿಡ್​​ ಸೋಂಕಿತನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಶಂಕಿಸಲಾಗಿದೆ. ಮುಖ್ಯಮಂತ್ರಿಯಲ್ಲದೆ ಸಭೆಯಲ್ಲಿ ಭಾಗವಹಿಸಿದ 60 ಮಂದಿಗೆ ಪರೀಕ್ಷೆಯಲ್ಲಿ ಪಾಸಿಟಿವ್​ ದೃಢಪಟ್ಟಿತ್ತು.

ರಾಜಸ್ಥಾನ

ರಾಜಸ್ಥಾನದ ಸಹಾದಾ (ಭಿಲ್ವಾರಾ), ಸುಜನ್‌ಗಢ (ಚುರು) ಮತ್ತು ರಾಜಸಮಂದ್‌ ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಮೂರು ಸ್ಥಾನಗಳಲ್ಲಿ ಕ್ರಮವಾಗಿ ಕೈಲಾಶ್​ ತ್ರಿವೇದಿ, ಮಾಸ್ಟರ್ ಭನ್ವರ್​ಲಾಲ್ ಮೇಘವಾಲ್ (ಈ ಇಬ್ಬರು ಕಾಂಗ್ರೆಸ್) ಮತ್ತು ಕಿರಣ್ ಮಹೇಶರಿ (ಬಿಜೆಪಿ) ಸ್ಪರ್ಧಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಮಾಸ್ಟರ್ ಭನ್ವರ್​ಲಾಲ್ ಮೇಘವಾಲ್ ಅವರು ಅಕಾಲಿಕವಾಗಿ ಮೃತಪಟ್ಟಿದ್ದರು. ಕೈಲಾಶ್ ತ್ರಿವೇದಿ ಮತ್ತು ಕಿರಣ್ ಮಹೇಶ್ವರಿ ಕಳೆದ ವರ್ಷ ಕೊರೊನಾ ವೈರಸ್​ನಿಂದ ನಿಧನರಾದರು. ಹೀಗಾಗಿ, ಅವರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಉಪಾಚುನಾವಣೆ ನಡೆದಿದೆ.

ಇಲ್ಲೆಲ್ಲಾ ಒಂದೊಂದು ಸ್ಥಾನಗಳಷ್ಟೇ..

ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ಉತ್ತರಾಖಂಡದಲ್ಲಿ ತಲಾ ಒಂದೊಂದು ಸ್ಥಾನಗಳ ವಿಧಾನಸಭೆ ಉಪಚುನಾವಣೆ ನಡೆಯಿತು.

ಮಹಾರಾಷ್ಟ್ರ

ಮಹಾರಾಷ್ಟ್ರದ ಪಂಢರಪುರ ವಿಧಾನಸಭಾ ಕ್ಷೇತ್ರದಲ್ಲಿ ಶರದ್ ಪವಾರ್ ಅವರ ಎನ್‌ಸಿಪಿ ಶಾಸಕ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಅವರ ಪುತ್ರ ಭಾಗೀರಥ್ ಭಾಲಕೆ ಅವರನ್ನು ಎನ್​ಸಿಪಿ ಕಣಕ್ಕಿಳಿಸಿತ್ತು. ಬಿಜೆಪಿ ಸಮಾಧಾನ್ ಮಹಾದೇವ್ ಉತ್ತದೇವ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ತನ್ನ ಗುಜುರಾತ್‌ನ ಮೊರ್ವಾ ಹಡಾಫ್ ವಿಧಾನಸಭಾ ಕ್ಷೇತ್ರದಲ್ಲಿ ನಿಮಿಶಾಬೆನ್ ಮನ್​ಹರ್​ಸಿಂಗ್ ಸುತರ್ ಅವರನ್ನು ಕಣಕ್ಕಿಳಿಸಿತು.

ಕೇರಳದ ಮಲಪ್ಪುರಂ ಮತ್ತು ತಮಿಳುನಾಡು ಕನ್ಯಾಕುಮಾರಿ ಲೋಕಸಭೆ ಸ್ಥಾಪನಗಳಿಗೂ ಸಹ ಉಪಚುನಾವಣೆ ನಡೆದಿದೆ.

ವಿಜಯೋತ್ಸವಕ್ಕೆ ಅವಕಾಶವಿಲ್ಲ

ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕುಂಠಿತಗೊಳಿಸಿದ ಕೊರೊನಾ ವೈರಸ್ ಬಿಕ್ಕಟ್ಟಿನ ಭೀಕರತೆಯ ನಡುವೆ ಮತದಾನ ಫಲಿತಾಂಶ ಹೊರಬೀಳಲಿದೆ. ಕೊರೊನಾ ಮಾರ್ಗಸೂಚಿ ಅನ್ವಯ ಗೆದ್ದ ಜನಪ್ರತಿನಿಧಿಗಳು ಮೆರವಣಿಗೆ ಮಾಡದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.

Last Updated :May 2, 2021, 8:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.