ETV Bharat / bharat

ಅವರದು 'ಸತ್ತಾ(ಅಧಿಕಾರ)ಗ್ರಹ'ವೇ ಹೊರತು 'ಸತ್ಯಾಗ್ರಹ'ವಲ್ಲ.. ಈ ದೇಶ 'ಹಿಂದೂ'ಗಳದ್ದು, 'ಹಿಂದುತ್ವವಾದಿ'ಗಳದ್ದಲ್ಲ.. ರಾಹುಲ್ ಗಾಂಧಿ

author img

By

Published : Dec 12, 2021, 3:52 PM IST

Rahul Gandhi
ರಾಹುಲ್ ಗಾಂಧಿ

'ಹಿಂದೂ' ಮತ್ತು 'ಹಿಂದುತ್ವವಾದಿ'. ಎರಡು ಪದಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ನಾನು ಹಿಂದೂ. ಆದರೆ, ಹಿಂದುತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಹಿಂದೂ. ಆದರೆ, ಗೋಡ್ಸೆ ಹಿಂದುತ್ವವಾದಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ..

ಜೈಪುರ (ರಾಜಸ್ಥಾನ): ಹಿಂದುತ್ವವಾದಿಗಳು ಅಧಿಕಾರವನ್ನು ಮಾತ್ರ ಬಯಸುತ್ತಾರೆ ಮತ್ತು ಅವರು 2014ರಿಂದ ಅಧಿಕಾರದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ, ಅಂತಹ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುವ ಹಿಂದೂಗಳನ್ನು ಮರಳಿ ಕರೆತರುವಂತೆ ಜನರಿಗೆ ಕರೆ ನೀಡಿದ್ದಾರೆ.

ಜೈಪುರದಲ್ಲಿ ಮೆಹಂಗೈ ಹಠಾವೋ ರ‍್ಯಾಲಿಯನ್ನುದ್ದೇಶಿಸಿ ರಾಹುಲ್​ ಗಾಂಧಿ ಮಾತು

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ (ಹಣದುಬ್ಬರ) ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ವಿದ್ಯಾಧರ್‌ನಗರ ಕ್ರೀಡಾಂಗಣದಲ್ಲಿ ‘ಮೆಹಂಗೈ ಹಠಾವೋ' ಎಂಬ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದೆ. ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೈ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದಾರೆ.

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ಅವರು, ಭಾರತದ ರಾಜಕೀಯದಲ್ಲಿ ಇಂದು ಎರಡು ಲೋಕಗಳ ನಡುವೆ ಪೈಪೋಟಿ ಇದೆ. 'ಹಿಂದೂ' ಮತ್ತು 'ಹಿಂದುತ್ವವಾದಿ'. ಎರಡು ಪದಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ನಾನು ಹಿಂದೂ ಆದರೆ ಹಿಂದುತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಹಿಂದೂ, ಆದರೆ ಗೋಡ್ಸೆ ಹಿಂದುತ್ವವಾದಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಜೈಪುರದಲ್ಲಿ ಬೆಲೆ ಏರಿಕೆ ವಿರುದ್ಧ ಮೆಹಂಗೈ ಹಠಾವೋ ರ‍್ಯಾಲಿ

ಹಿಂದೂ ಎಂದರೆ ಯಾರು? ಎಲ್ಲರನ್ನೂ ಅಪ್ಪಿಕೊಳ್ಳುವವನು, ಯಾರಿಗೂ ಹೆದರದವನು ಮತ್ತು ಎಲ್ಲ ಧರ್ಮವನ್ನು ಗೌರವಿಸುವವನು. ಆದರೆ, ಹಿಂದುತ್ವವಾದಿಗಳು ತಮ್ಮ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾರೆ. ಅವರಿಗೆ ಅಧಿಕಾರ ಬಿಟ್ಟು ಬೇರೇನೂ ಬೇಕಾಗಿಲ್ಲ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡಬಹುದು. ಅವರದು 'ಸತ್ತಾ( ಅಧಿಕಾರ)ಗ್ರಹ'ವೇ ಹೊರತು 'ಸತ್ಯಾಗ್ರಹ'ವಲ್ಲ.

"ನೀವು ಬಿಜೆಪಿಯನ್ನು ಆಯ್ಕೆ ಮಾಡಿದಾಗ, ದೇಶ ಪ್ರಗತಿಯಾಗುತ್ತದೆ ಎಂದು ಅವರ ಮೇಲೆ ನಂಬಿಕೆ ಇಟ್ಟಿರಿ. ಬಿಜೆಪಿಯವರು ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಅವರನ್ನು ಕೇಳಲು ಬಯಸುತ್ತೇನೆ, ನೀವು ಏನು ಮಾಡಿದ್ದೀರಿ? ಕಳೆದ ಏಳು ವರ್ಷಗಳಿಂದ ನೀವು ಶಿಕ್ಷಣಕ್ಕಾಗಿ ನಿರ್ಮಿಸಿದ ಒಂದು ಸಂಸ್ಥೆಯನ್ನು ನಮಗೆ ತೋರಿಸಿ, ಆರೋಗ್ಯ ವ್ಯವಸ್ಥೆಗಾಗಿ ನೀವು ನಿರ್ಮಿಸಿದ ಒಂದು ಏಮ್ಸ್ ಅನ್ನು ನಮಗೆ ತೋರಿಸಿ.

ನೀವು ಹಾರಲು ಬಳಸುವ ವಿಮಾನ ನಿಲ್ದಾಣವನ್ನು ಸಹ ಕಾಂಗ್ರೆಸ್ ನಿರ್ಮಿಸಿದೆ. ಆದರೆ, ಇಂದು ಬಿಜೆಪಿ ಸರ್ಕಾರವು ಮಾರಾಟ ಮಾಡಲು ಬಯಸುತ್ತಿದೆ" ಎಂದು ಆರೋಪಿಸಿದರು. ಈ ದೇಶ ಹಿಂದೂಗಳದ್ದು, ಹಿಂದುತ್ವವಾದಿಗಳದ್ದಲ್ಲ ಎಂದು ರಾಹುಲ್‌ ಗಾಂಧಿ ಒತ್ತಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.