ETV Bharat / bharat

'ಬಿಜೆಪಿಯ ಟೀಕೆಗೆ ಹೆದರುವುದಿಲ್ಲ, ಏಕೆಂದರೆ ಇದು ಧೈರ್ಯ ಮತ್ತು ಹೇಡಿತನದ ನಡುವಿನ ಹೋರಾಟ'

author img

By

Published : Mar 6, 2023, 9:39 AM IST

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ಒಂದು ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ನಿನ್ನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದರು.

ನವದೆಹಲಿ: "ಬಿಜೆಪಿ ಟೀಕೆಗಳಿಗೆ ನಾನು ಹೆದರುವುದಿಲ್ಲ. ಏಕೆಂದರೆ ಇದು ಧೈರ್ಯ ಮತ್ತು ಹೇಡಿತನದ ನಡುವಿನ ಹೋರಾಟ" ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದರು. ಒಂದು ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಅವರು ಭಾನುವಾರ ಲಂಡನ್​ನಲ್ಲಿ ಆಯೋಜಿಸಿದ್ದ ಭಾರತೀಯ ಸಮುದಾಯದೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದರು.

"ನನ್ನ ವಿರುದ್ದ ಎಷ್ಟೇ ಟೀಕೆಗಳನ್ನು ಮಾಡಿದರೂ ಅದು ನನಗೆ ಒಳ್ಳೆಯದೇ. ಏಕೆಂದರೆ ಇದು ಗೌರವ-ಅಗೌರವ, ಧೈರ್ಯ-ಹೇಡಿತನ, ಪ್ರೀತಿ-ದ್ವೇಷದ ನಡುವಿನ ಹೋರಾಟ. ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಅಂಗಡಿಯನ್ನು ತೆರೆಯಲು ಬಂದಿದ್ದೇವೆ ಎಂದು ಈ ಹಿಂದೆ ನಾನು ಭಾರತ್​ ಜೋಡೋ ಯಾತ್ರೆಯ ಸಮಯದಲ್ಲಿ ಹೇಳಿದ್ದೆ" ಎಂದರು.

"ಒಬ್ಬ ಭಾರತ ಮೂಲದ ರಾಜಕೀಯ ನಾಯಕನಿಗೆ ಕೇಂಬ್ರಿಡ್ಜ್, ಹಾರ್ವರ್ಡ್​ನಂತಹ ವಿಶ್ವವಿದ್ಯಾಲಯಗಳಲ್ಲಿ ಮಾತನಾಡಲು ಅವಕಾಶ ದೊರೆಯುತ್ತದೆ. ಆದರೆ ತನ್ನದೇ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂವಾದ ನಡೆಸಲು ಅವಕಾಶ ದೊರೆಯದಂತಹ ಸ್ಥಿತಿ ಇದೆ. ಇದಕ್ಕೆ ಕಾರಣ ಈಗಿನ ಸರ್ಕಾರ. ಅವರು ಸುಲಭವಾಗಿ ಪ್ರತಿಪಕ್ಷದ ಯಾವುದೇ ಕಲ್ಪನೆಗಳು ಮತ್ತು ವಿರೋಧಗಳನ್ನು ಒಪ್ಪುವುದಿಲ್ಲ. ಈ ಹಿಂದೆ ಪಾರ್ಲಿಮೆಂಟ್​ನಲ್ಲಿ ನೋಟ್​ ಬ್ಯಾನ್​, ಜಿಎಸ್​ಟಿಯಂತಹ ಪ್ರಮುಖ ವಿಷಯದ ಬಗ್ಗೆ ಧ್ವನಿ ಎತ್ತಲು ನಮಗೆ ಅವಕಾಶವನ್ನೇ ಕೊಡಲಿಲ್ಲ. ಅದೇ ಪರಿಸ್ಥಿತಿಯನ್ನು ವಿಶ್ವವಿದ್ಯಾಲಯಗಳಲ್ಲಿಯೂ ಮಾಡಲಾಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿ. ಪರಸ್ಪರ ಅಭಿಪ್ರಾಯಗಳನ್ನು ಕೇಳುವ, ಗೌರವಿಸುವ ಹಾಗೂ ತಮ್ಮ ಬುದ್ದಿವಂತಿಕೆಯ ಬಗ್ಗೆ ಹೆಮ್ಮ ಪಡುವಂತಹ ವಾತಾವರಣವಿದ್ದಂತಹ ದೇಶ ಭಾರತ. ಆದರೀಗ ಆ ವಾತಾವರಣ ಸಂಪೂರ್ಣ ನಾಶವಾಗಿದೆ" ಎಂದು ನುಡಿದರು.

ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡುತ್ತಾ, "ಬಿಜೆಪಿ ವಶಪಡಿಸಿಕೊಂಡಿರುವ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಅಭಿವ್ಯಕ್ತಿ ಸ್ವತಂತ್ರಕ್ಕೆ ಅವಕಾಶ ನೀಡಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4000 ಕಿ.ಮೀ ವರೆಗೆ ಯಾತ್ರೆ ಕೈಗೊಳ್ಳಲಾಯಿತು. ಅದರೊಂದಿಗೆ, ಭಾರತೀಯ ಮೌಲ್ಯಗಳು ಯಾವುವು? ನಮ್ಮ ಧರ್ಮಗಳು ನಮಗೆ ಏನನ್ನು ಹೇಳುತ್ತವೆ? ವಿಭಿನ್ನ ಭಾಷೆಗಳು ನಮಗೇನು ಸಂದೇಶ ನೀಡುತ್ತವೆ? ವಿಭಿನ್ನ ಸಂಸ್ಕೃತಿಗಳು ನಮಗೇನು ತಿಳಿಸುತ್ತವೆ ಎಂಬುದನ್ನೆಲ್ಲ ತಿಳಿಸುವುದೇ ಯಾತ್ರೆಯ ಸಂದೇಶವಾಗಿತ್ತು" ಎಂದು ರಾಹುಲ್ ಗಾಂಧಿ ವಿವರಿಸಿದರು.

ಎಸ್‌.ಜೈಶಂಕರ್‌ ವಿರುದ್ಧ ವಾಗ್ದಾಳಿ: "ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತವಿದೆ. ಆ ವಿಷಯವನ್ನು ನೀವೂ ಗಮನಿಸಿರಬೇಕು" ಎಂದರು. "ಚೀನಾ ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವಿದೇಶಾಂಗ ಸಚಿವರು ಹೇಳುತ್ತಾರೆ. ಚೀನಾ ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೆ ಅವರೊಂದಿಗೆ ಹೇಗೆ ಹೋರಾಡುವುದು? ಇವರ ಸಿದ್ಧಾಂತದ ಹೃದಯಭಾಗದಲ್ಲಿಯೇ ಹೇಡಿತನವಿದೆ" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್​ ಹೇಳಿಕೆ ಪ್ರಸ್ತಾಪಿಸಿ ಟೀಕಾಸಮರ ನಡೆಸಿದರು.

ಇತ್ತೀಚೆಗೆ ಕೇಂಬ್ರಿಡ್ಜ್‌ ವಿವಿಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರ ಪೆಗಾಸಸ್‌ ಮೂಲಕ ನನ್ನ ಮೊಬೈಲ್‌ ಫೋನ್‌ ಗೂಢಚಾರಿಕೆ ಮಾಡುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ" ಎಂದು ಟೀಕಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಬಂಧನ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.