ETV Bharat / bharat

ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಬ್ಯುಸಿ.. ಪ್ರಿಯಾಂಕಾ ಹೆಗಲಿಗೆ ಗುಜರಾತ್​ ಎಲೆಕ್ಷನ್​ ಹೊಣೆ?

author img

By

Published : Sep 24, 2022, 7:49 PM IST

priyanka gandhi vadra
ಪ್ರಿಯಾಂಕಾ ಹೆಗಲಿಗೆ ಗುಜರಾತ್​ ಎಲೆಕ್ಷನ್​ ಹೊಣೆ

ಕೇಂದ್ರ ಸರ್ಕಾರದ ವಿರುದ್ಧ ಮತ್ತು ಪಕ್ಷ ಸಂಘಟನೆಯ ಭಾಗವಾಗಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ನಾಯಕ ರಾಹುಲ್​ ಗಾಂಧಿ ಅವರು ಬ್ಯುಸಿಯಾಗಿದ್ದಾರೆ. ಇತ್ತ ಗುಜರಾತ್​ ಚುನಾವಣೆ ಸಮೀಪಿಸುತ್ತಿರುವ ಕಾರಣ ಪ್ರಿಯಾಂಕಾ ಗಾಂಧಿ ಪ್ರಚಾರ ಹೊಣೆ ಹೊರುವ ಸಾಧ್ಯತೆ ಇದೆ.

ನವದೆಹಲಿ: ದೇಶದಲ್ಲಿ ಕಡುಕಷ್ಟದ ಸ್ಥಿತಿಯಲ್ಲಿರುವ ಕಾಂಗ್ರೆಸ್​ ಪಕ್ಷವನ್ನು ಮರಳಿ ಕಟ್ಟಲು ಅದರ ನಾಯಕ ರಾಹುಲ್​ ಗಾಂಧಿ "ಭಾರತ್ ಜೋಡೋ ಯಾತ್ರೆ"ಯ ನೇತೃತ್ವ ವಹಿಸಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನಲ್ಲಿ ಚುನಾವಣೆ ನಡೆಯಲಿದೆ. ಯಾತ್ರೆ ಮುನ್ನಡೆಸಬೇಕಾದ ರಾಹುಲ್​ ಚುನಾವಣೆಯಲ್ಲಿ ಭಾಗಿಯಾಗದ ಕಾರಣ ಗುಜರಾತ್ ಚುನಾವಣಾ ಹೊಣೆಯನ್ನು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೊರಲಿದ್ದಾರೆ.

ಈ ಬಗ್ಗೆ ಗುಜರಾತ್ ಕಾಂಗ್ರೆಸ್​ ನಾಯಕ ಭರತ್​ ಸಿನ್ಹಾ ಸೋಲಂಕಿ ಈಟಿವಿ ಭಾರತ್​ ಜೊತೆ ಮಾತನಾಡಿ, ರಾಹುಲ್ ಗಾಂದಿ ಅವರು ಯಾತ್ರೆಯಲ್ಲಿ ನಿರತರಾಗಿದ್ದು, ಪ್ರಿಯಾಂಕಾ ಗಾಂಧಿ ಅವರು ಗುಜರಾತ್‌ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಪ್ರಚಾರ ಮಾಡುವಂತೆ ಒತ್ತಾಯಿಸಿದ್ದೇವೆ. ಅವರ ವೇಳಾಪಟ್ಟಿ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಹುಲ್​ ಗಾಂಧಿ ಅವರು ಯಾತ್ರೆಯ ಮಧ್ಯೆ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದೇ ಇರಬಹುದು. ಯಾತ್ರೆಗೆ ಹೆಚ್ಚಿನ ಸ್ಪಂದನೆ ಸಿಗುತ್ತಿರುವ ಕಾರಣ ಗುಜರಾತ್​ನಲ್ಲಿ ಪ್ರಚಾರ ಕಾರ್ಯ ಕುಂದಿದೆ. ಇದಕ್ಕೆ ಪುಷ್ಟಿ ನೀಡಲು ಪ್ರಿಯಾಂಕಾ ಗಾಂಧಿ ಅವರು ಅಖಾಡಕ್ಕೆ ಇಳಿಯಬೇಕು ಎಂಬುದು ಪಕ್ಷದ ನಾಯಕರ ಮಾತಾಗಿದೆ.

ಇದರಿಂದ ಅವರನ್ನು ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿಕೊಳ್ಳಲು ಕೋರಲಾಗಿದೆ. ಈ ಬಗ್ಗೆ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಒಪ್ಪಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಗುಜರಾತ್​ನಲ್ಲಿ ಕಾಂಗ್ರೆಸ್​ ಸ್ಥಿತಿ ಹೇಗಿದೆ: 2017ರ ಚುನಾವಣೆಯ ಉಸ್ತುವಾರಿಯನ್ನು ರಾಹುಲ್​ ಗಾಂಧಿ ಅವರು ವಹಿಸಿಕೊಂಡಿದ್ದರು. ಪಶ್ಚಿಮ ರಾಜ್ಯದ 182 ಸ್ಥಾನಗಳಲ್ಲಿ ಕಾಂಗ್ರೆಸ್​ 77 ಸ್ಥಾನಗಳನ್ನು ಗಳಿಸಿತ್ತು. ಅಲ್ಲದೇ, ಈ ಹಿಂದಿಗಿಂತಲೂ ಹೆಚ್ಚಿನ ಸ್ಥಾನ ಸಂಪಾದಿಸಿತ್ತು. ಇದರಿಂದ ಬಿಜೆಪಿ 99 ಸ್ಥಾನಕ್ಕೆ ಇಳಿದಿತ್ತು. 2022ರ ಚುನಾವಣೆಯಲ್ಲಿ ಇದಕ್ಕಿಂತಲೂ ಕಡಿಮೆ ಸ್ಥಾನಕ್ಕೆ ಇಳಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂಬುದು ಪಕ್ಷದ ನಾಯಕರ ಅಭಿಮತವಾಗಿದೆ.

27 ವರ್ಷಗಳಿಂದ ಗುಜರಾತ್​ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಇಳಿಸಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರಲು ರಾಹುಲ್​ ಗಾಂಧಿ ಅವರು ಕೆಲ ತಿಂಗಳ ಹಿಂದಿನಿಂದಲೇ ಪ್ರಚಾರ ಕಾರ್ಯ ನಡೆಸಿದ್ದರು. ಹಲವು ಯೋಜನೆಗಳ ಜಾರಿ ಭರವಸೆಯನ್ನೂ ನೀಡಿದ್ದಾರೆ.

ಅಡ್ಡಿಯಾದ ಭಾರತ್​ ಜೋಡೋ: ಸೆಪ್ಟೆಂಬರ್ 7 ರಿಂದ ರಾಹುಲ್ ಅವರು ಭಾರತ್ ಜೋಡೋ ಯಾತ್ರೆಯನ್ನು ರಾಷ್ಟ್ರವ್ಯಾಪಿಯಾಗಿ ನಡೆಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಳೆದ ಚುನಾವಣೆಯಲ್ಲಿ ಅವರು ನೀಡಿದ ಸಮಯದಷ್ಟು ಈ ಬಾರಿ ನೀಡಲು ಸಾಧ್ಯವಿರದ ಕಾರಣ ಪ್ರಿಯಾಂಕಾ ಗಾಂಧಿ ಅವರ ಮೊರೆ ಹೋಗಲಾಗುತ್ತಿದೆ.

ಪ್ರಿಯಾಂಕಾ ಉಸ್ತುವಾರಿ ಇದೇ ಮೊದಲಲ್ಲ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯದ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ಹೊಣೆಯನ್ನು ವಹಿಸಿಕೊಂಡಿದ್ದರು. ಉತ್ತರಪ್ರದೇಶದಲ್ಲಿಯೇ ಬೀಡು ಬಿಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿ ಮಹಿಳಾ ಸ್ವಾಯತ್ತತೆ ಆಧಾರದ ಮೇಲೆ ಅವರು ಚುನಾವಣೆಯ ಪ್ರಚಾರ ನಡೆಸಿದ್ದರು.

ಮೈ ಲಡ್ಕಿ ಹೂಂ, ಲಡ್​ಸಕ್ತೇ ಹೂಂ ಎಂಬ ಘೋಷವಾಕ್ಯದೊಂದಿಗೆ ಅವರು ರಾಜ್ಯವ್ಯಾಪಿ ಚುನಾವಣೆ ಪ್ರಚಾರ ನಡೆಸಿದ್ದರು. ಆದರೆ, 403 ವಿಧಾನಸಭಾ ಸ್ಥಾನಗಳಲ್ಲಿ ಪ್ರಿಯಾಂಕಾ ಅವರ ಮುಂದಾಳತ್ವದ ಹೊರತಾಗಿಯೂ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. 2017ರಲ್ಲಿ ಕಾಂಗ್ರೆಸ್ 7 ಶಾಸಕರನ್ನು ಹೊಂದಿತ್ತು. ಈ ಮೂಲಕ 5 ಸ್ಥಾನಗಳನ್ನು ಕಳೆದುಕೊಂಡಿತ್ತು.

ಓದಿ: ರಾಜ್ಯ ರಾಜಕಾರಣದ ವಿಶ್ಲೇಷಣೆ... ಜೆಡಿಎಸ್ ವಿರುದ್ಧ ಬಿಜೆಪಿ ಧ್ವನಿ ಎತ್ತದಿರುವುದೇಕೆ?.. ಏನಿದು ಪ್ಲಾನ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.