ETV Bharat / bharat

ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕಸರತ್ತು: ಪವಾರ್​ ಮನವೊಲಿಕೆ, ಫಾರೂಕ್​, ಗೋಪಾಲಕೃಷ್ಣ ಗಾಂಧಿ ಹೆಸರು ಮುನ್ನೆಲೆಗೆ

author img

By

Published : Jun 15, 2022, 5:35 PM IST

Updated : Jun 15, 2022, 6:49 PM IST

Opposition leaders adopt a resolution to field a common candidate
ತಿಪಕ್ಷಗಳಿಂದ ಸರ್ವ ಸಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಣಯ

ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚೌಕಟ್ಟಿಗೆ ಭವಿಷ್ಯದಲ್ಲಿ ಮೋದಿ ಸರ್ಕಾರದಿಂದ ಆಗುವ ಹಾನಿ ತಡೆಯುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸುಧೀಂದ್ರ ಕುಲಕರ್ಣಿ ಹೇಳಿದರು.

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಿಂದ ಸರ್ವ ಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ದೆಹಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್‌ ಆಫ್‌ ಇಂಡಿಯಾದಲ್ಲಿ ಇಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕರೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಭೆಯ ನಂತರ ಹಿರಿಯ ನಾಯಕ ಸುಧೀಂದ್ರ ಕುಲಕರ್ಣಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಚುನಾವಣೆಯಲ್ಲಿ ಸಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಪಕ್ಷಗಳು ನಿರ್ಣಯ ತೆಗೆದುಕೊಂಡಿವೆ. ಆ ಅಭ್ಯರ್ಥಿ ನಿಜವಾಗಿಯೂ ಸಂವಿಧಾನದ ರಕ್ಷಕರಾಗಿಬೇಕು. ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚೌಕಟ್ಟಿಗೆ ಮುಂದೆ ಮೋದಿ ಸರ್ಕಾರದಿಂದ ಆಗುವ ಹಾನಿಯನ್ನು ತಡೆಯುವಂತವರಾಗಿಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇಂದು ಹಲವಾರು ಪಕ್ಷಗಳು ಸಭೆಯಲ್ಲಿ ಸೇರಿದ್ದವು. ನಾವು ಒಬ್ಬ ಒಮ್ಮತದ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಈ ಅಭ್ಯರ್ಥಿಗೆ ಎಲ್ಲರೂ ಬೆಂಬಲ ನೀಡಲಿದ್ದಾರೆ. ಈ ಬಗ್ಗೆ ಇತರರೊಂದಿಗೂ ಸಮಾಲೋಚನೆ ನಡೆಸುತ್ತೇವೆ. ಇದೊಂದು ಉತ್ತಮ ಆರಂಭವಾಗಿದ್ದು, ನಾವು ಹಲವಾರು ತಿಂಗಳ ನಂತರ ಒಟ್ಟಿಗೆ ಕುಳಿತಿದ್ದೇವೆ ಮತ್ತು ಮುಂದೆ ಕೂಡ ಮತ್ತೆ ಒಗ್ಗಟ್ಟಾಗಿಯೇ ಇರುತ್ತೇವೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪವಾರ್​, ಫಾರೂಕ್​, ಗಾಂಧಿ ಹೆಸರು ಪ್ರಸ್ತಾಪ?: ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಹಲವರ ಹೆಸರುಗಳು ಪ್ರಸ್ತಾವವಾಗಿದೆ. ಪ್ರಮುಖವಾಗಿ ಎನ್​ಸಿಪಿ ವರಿಷ್ಠ ಶರದ್​ ಪವಾರ್​ ಹೆಸರು ಮತ್ತೊಮ್ಮೆ ಕೇಳಿ ಬಂದಿದೆ. ಜೊತೆಗೆ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹಾಗೂ ಜಮ್ಮು-ಕಾಶ್ಮೀರ ಎನ್​ಸಿ ಪಕ್ಷದ ವರಿಷ್ಠ, ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್​ ಹೆಸರುಗಳ ಪ್ರಸ್ತಾವವಾಗಿದೆ. ಈ ಮೂವರನ್ನು ಹೆಸರನ್ನೂ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಒಪ್ಪದ ಶರದ್​ ಪವಾರ್: ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ಸ್ವತಃ ಶರದ್​ ಪವಾರ್ ಒಪ್ಪಿಕೊಂಡಿಲ್ಲ. ಈ ವಿಷಯವನ್ನು ಸಿಪಿಐ ನಾಯಕ ಬಿನೋಯ್ ವಿಶ್ವಂ ತಿಳಿಸಿದ್ದು, ಇಂದಿನ ಪ್ರತಿಪಕ್ಷಗಳ ಸಭೆಯಲ್ಲಿ ಎಲ್ಲ ಪಕ್ಷಗಳು ಶರದ್ ಪವಾರ್ ಹೆಸರನ್ನು ಪ್ರಸ್ತಾಪಿಸಿದವು. ಆದರೆ, ಆರೋಗ್ಯದ ಕಾರಣದಿಂದಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪವಾರ್​ ಹೇಳಿದ್ದಾರೆ. ಆದರೂ, ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಎಲ್ಲಾ ಪಕ್ಷಗಳು ವಿನಂತಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್​​ ರಚನಾತ್ಮಕ ಪಾತ್ರ: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್​​ ರಚನಾತ್ಮಕ ಪಾತ್ರ ವಹಿಸಲಿವೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸಂವಿಧಾನವನ್ನು ಎತ್ತಿಹಿಡಿಯಲು, ಜಾತ್ಯತೀತ ರಚನೆಯನ್ನು ಕಾಪಾಡಲು, ದ್ವೇಷದ ಶಕ್ತಿಗಳ ವಿರುದ್ಧ ಮಾತನಾಡುವ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಪ್ರತಿಪಕ್ಷಗಳು ಬದ್ಧವಾಗಿರಬೇಕೆಂದೂ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ: ಮಮತಾ ಕರೆದ ಸಭೆಯಲ್ಲಿ 17 ಪಕ್ಷಗಳ ನಾಯಕರು ಭಾಗಿ

Last Updated :Jun 15, 2022, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.