ETV Bharat / bharat

ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ

author img

By PTI

Published : Dec 14, 2023, 8:21 AM IST

Parliament security breach
ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪ: ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ, ಐವರು ಆರೋಪಿಗಳ ಬಂಧನ

Parliament security breach: ಸಂಸತ್ತಿನ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿದ್ದರು. ಇದರಿಂದ ಕಲಾಪಕ್ಕೆ ತೀವ್ರ ಅಡ್ಡಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬುಧವಾರ ಲೋಕಸಭೆ ಅಧಿವೇಶನ ವೀಕ್ಷಕರ ಗ್ಯಾಲರಿಯಿಂದ ದಿಢೀರ್​​ ಜಿಗಿದ ಇಬ್ಬರು ಯುವಕರು ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದರು. ಜೊತೆಗೆ ಘೋಷಣೆಗಳನ್ನು ಕೂಗಿದ್ದರು. ಸದನದಲ್ಲಿದ್ದ ಸಚಿವರು ಹಾಗೂ ಸಂಸದರು ಆತಂಕದಿಂದ ಹೊರ ಬಂದಿದ್ದರು. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಭದ್ರತಾ ಲೋಪ ಆಗಿತ್ತು.

ಕೆಲ ದಿನಗಳ ಹಿಂದೆಯೇ ಸಂಚು- ಪೊಲೀಸ್​ ಮಾಹಿತಿ: ಬುಧವಾರ ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆ ಮಾಡಲು ಆರು ಜನರು ಸಂಚು ರೂಪಿಸಿದ್ದರು. ಈ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆ ಆರು ಆರೋಪಿಗಳು ನಾಲ್ಕು ವರ್ಷಗಳಿಂದ ಪರಿಚಿತರು. ಕೆಲವು ದಿನಗಳ ಹಿಂದೆ ಸಂಸತ್ತಿಗೆ ನುಗ್ಗಲು ಸಂಚು ರೂಪಿಸಿದ್ದರು. ಆರೋಪಿಗಳು ಸಾಮಾಜಿಕ ಜಾಲಾತಾಣಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಬುಧವಾರ ಸಂಸತ್ತಿಗೆ ನುಗ್ಗುವ ಮುನ್ನವೇ ತಮ್ಮಲ್ಲೇ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಭದ್ರತಾ ಉಲ್ಲಂಘನೆ ಮಾಡಿದ ಇಬ್ಬರು ಯುವಕರಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕಲಾಪಕ್ಕೆ ಹಾರಿ, ಕಲರ್​ ಸ್ಮೋಕ್ ಬಾಂಬ್​ ಸ್ಪ್ರೇ ಮಾಡಿದ್ದರು. ಅದೇ ಸಮಯದಲ್ಲಿ ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಸಂಸತ್ತಿನ ಆವರಣದ ಹೊರಗೆ ಘೋಷಣೆ ಕೂಗುತ್ತಾ ಸ್ಮೋಕ್​ ಕ್ರ್ಯಾಕರ್​ ಸಿಡಿಸಿದ್ದರು.

ಆರೋಪಿಗಳಾದ ಸಾಗರ್, ಮನೋರಂಜನ್, ಅಮೋಲ್, ನೀಲಂ ಹಾಗೂ ಸಹಚರ ವಿಶಾಲ್​ನನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳು ಸಂಸತ್ತು ತಲುಪುವ ಮುನ್ನ ಸಹಚರ ವಿಶಾಲ್ ಮನೆಯಲ್ಲಿ ಉಳಿದುಕೊಂಡಿದ್ದರು. ವಿಶಾಲ್​ನನ್ನು ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದ್ದು, ಮತ್ತೋರ್ವ ಸಹಚರ ಲಲಿತ್‌ಗಾಗಿ ಹುಡುಕಾಟ ನಡೆಯುತ್ತಿದೆ. ಭದ್ರತಾ ಲೋಪದ ನಂತರ, ಸಂಸತ್ತಿನ ಸುತ್ತಲಿನ ಪ್ರದೇಶದಲ್ಲಿ ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯಿಂದ ಬಿಗಿಭದ್ರತೆ ಕೈಗೊಳ್ಳಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕವು ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

''ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ತಾವು ಅಸಮಾಧಾನಗೊಂಡಿದ್ದೇವೆ. ಅದಕ್ಕಾಗಿಯೇ ಈ ಕೃತ್ಯವನ್ನು ನಡೆಸಿದ್ದೇವೆ ಎಂದು ವಿಚಾರಣೆಯ ಸಮಯದಲ್ಲಿ ಆರೋಪಿ ಅಮೋಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ'' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

''ಸಾಗರ್, ಮನೋರಂಜನ್, ಅಮೋಲ್, ನೀಲಂ ಮತ್ತು ಲಲಿತ್ ಮಂಗಳವಾರ ರಾತ್ರಿ ಗುರುಗ್ರಾಮ್‌ನ ವಿಶಾಲ್ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ (ಬುಧವಾರ) ಬೆಳಗ್ಗೆ ಸಂಸತ್ತಿಗೆ ತೆರಳಿದ್ದರು. ವಿಶಾಲ್ ಶರ್ಮಾ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ರಾತ್ರಿ ಸಮಯದಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದನು. ಆತ ಮದ್ಯಸೇವನೆ ಮಾಡುತ್ತಿದ್ದನು. ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ವಿಶಾಲ್​ ನೆರೆಹೊರೆಯವರು ಹೇಳಿದ್ದಾರೆ. ಜೊತೆಗೆ ಪೊಲೀಸರು ಆರೋಪಿ ವಿಶಾಲ್​ನ ಪತ್ನಿಯನ್ನು ಸಹ ಬಂಧಿಸಿದ್ದಾರೆ ಮತ್ತು ಘಟನೆಯಲ್ಲಿ ಆಕೆಯ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಮತ್ತು ಆಘಾತಕಾರಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.