ETV Bharat / bharat

ಹೀಗೊಂದು ಪರಿಸರ ಸಂರಕ್ಷಣೆಯ ರಕ್ಷಾಬಂಧನ: 46 ವರ್ಷಗಳಲ್ಲಿ 20 ಲಕ್ಷ ಮರಗಳಿಗೆ 'ರಕ್ಷಾ ಸೂತ್ರ' ಕಟ್ಟಿದ ಪರಿಸರಪ್ರೇಮಿ!

author img

By ETV Bharat Karnataka Team

Published : Aug 31, 2023, 9:41 PM IST

ರಕ್ಷಾ ಸೂತ್ರ ಕಟ್ಟಿದ ಪಲಾಮು ಕೌಶಲ್ ಕಿಶೋರ್ ಜೈಸ್ವಾಲ್
ರಕ್ಷಾ ಸೂತ್ರ ಕಟ್ಟಿದ ಪಲಾಮು ಕೌಶಲ್ ಕಿಶೋರ್ ಜೈಸ್ವಾಲ್

ರಕ್ಷಾ ಬಂಧನ ಹಬ್ಬದ ದಿನ ರಕ್ಷಾ ಸೂತ್ರ ಕಟ್ಟುವ ಮೂಲಕ ಸಹೋದರಿ ತನ್ನ ಸಹೋದರನಿಂದ ರಕ್ಷಣೆಯ ಭರವಸೆ ತೆಗೆದುಕೊಳ್ಳುತ್ತಾಳೆ. ಆದರೆ ಇಲ್ಲೊಬ್ಬ ಪರಿಸರಪ್ರೇಮಿ ರಕ್ಷಾ ಬಂಧನದ ಅರ್ಥವನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಹೀಗೊಂದು ಪರಿಸರ ಸಂರಕ್ಷಣೆಯ ರಕ್ಷಾಬಂಧನ

ಪಲಾಮು (ಜಾರ್ಖಂಡ್​) : ರಕ್ಷಾ ಬಂಧನದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿ ಅವರಿಗೆ ದೀರ್ಘಾಯುಷ್ಯವನ್ನು ಹಾರೈಸುತ್ತಾರೆ. ಆದರೆ ಇದೇ ರಕ್ಷಾ ಬಂಧನವನ್ನು ಇಲ್ಲೊಬ್ಬ ವ್ಯಕ್ತಿ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟು ಆಚರಿಸುತ್ತಿದ್ದಾರೆ. ಇವರು ಕಳೆದ 46 ವರ್ಷಗಳಿಂದ ನಿರಂತರವಾಗಿ ಪರಿಸರ ಉಳಿಸುವ ಅಭಿಯಾನದಲ್ಲಿ ತೊಡಗಿದ್ದು, ಮರಗಳಿಗೆ ರಕ್ಷಣೆಯ ರಾಖಿ ಕಟ್ಟುತ್ತಿದ್ದಾರೆ. ಇಲ್ಲಿಯವರೆಗೆ, ಭಾರತ ಸೇರಿದಂತೆ ಐದು ದೇಶಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮರಗಳಿಗೆ ಈ ರೀತಿಯ ರಕ್ಷಾ ಸೂತ್ರ ಕಟ್ಟಿದ್ದಾರೆ.

ಇಂಥ ಓರ್ವ ಪರಿಸರ ಪ್ರೇಮಿಯ ಹೆಸರು ಕೌಶಲ್ ಕಿಶೋರ್ ಜೈಸ್ವಾಲ್. ಜಾರ್ಖಂಡ್‌ನ ಪಲಮು ಜಿಲ್ಲೆಯ ಛತ್ತರ್‌ಪುರದ ನಿವಾಸಿ. ಜೈಸ್ವಾಲ್ ವನ್ರಾಖಿ ಮೂವ್‌ಮೆಂಟ್‌ನ ಸ್ಥಾಪಕರು. ಈ ಮೂಲಕ ಪರಿಸರ ಉಳಿಸುವ ಅಭಿಯಾನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಭಾರತದ 102 ಜಿಲ್ಲೆಗಳಲ್ಲಿ ಹಾಗೂ ನೇಪಾಳ, ಭೂತಾನ್, ಮಲೇಷಿಯಾ ಮತ್ತು ಸಿಂಗಾಪುರದಲ್ಲಿ ಲಕ್ಷಾಂತರ ಮರಗಳಿಗೆ ರಕ್ಷಾ ಸೂತ್ರ ಕಟ್ಟುವ ಮುಖೇನ ಪರಿಸರ ಉಳಿಸಲು ಕಟಿಬದ್ಧರಾಗಿದ್ದಾರೆ.

1966ರಲ್ಲಿ ಪಲಮು ಪ್ರದೇಶ ಭೀಕರ ಬರಗಾಲಕ್ಕೆ ತುತ್ತಾಗುತ್ತದೆ. ಅದರ ಭಯಾನಕ ಕಥೆಗಳು ಇಂದಿಗೂ ಜನರ ಬಾಯಲ್ಲಿ ಹರಿದಾಡುತ್ತಿವೆ. ಆ ಸಂದಿಗ್ಧ ಕಾಲದಲ್ಲಿ ಕೌಶಲ್ ಬಾಲಕರಾಗಿದ್ದರು. ಅರಣ್ಯ ನಾಶದಿಂದ ಕ್ಷಾಮ ಉಂಟಾಗುತ್ತಿದೆ. ಮಳೆ ಕಡಿಮೆಯಾಗುತ್ತಿದೆ ಎಂದು ಅವರ ಪೋಷಕರು ಹೇಳುತ್ತಿದ್ದರಂತೆ. ಇದು ಕೌಶಲ್ ಅವರ ಮನಸ್ಸಿನಲ್ಲಿ ಗಾಢವಾಗಿ ಮನೆಮಾಡಿತು.

ಕೆಲವು ವರ್ಷಗಳ ನಂತರ ತಮ್ಮ ಗ್ರಾಮದಲ್ಲಿ ಸುಮಾರು ಒಂಬತ್ತು ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟರು. ಕೆಲವರು ಈ ಮರಗಳನ್ನು ಕಡಿದು ಹಾಕಲು ಆರಂಭಿಸಿದರು. ನಂತರ ಕೌಶಲ್ ಮರಗಳನ್ನು ಉಳಿಸುವ ಅಭಿಯಾನ ಪ್ರಾರಂಭಿಸುತ್ತಾರೆ. ಸ್ಥಳೀಯ ಮಹಿಳೆಯರು ಮತ್ತು ಗ್ರಾಮಸ್ಥರನ್ನು ಒಗ್ಗೂಡಿಸಿ ಮರಗಳಿಗೆ ರಾಖಿ ಕಟ್ಟುವ ಅಭಿಯಾನ ಕೈಗೊಂಡರು. ಕೌಶಲ್ ಕಿಶೋರ್ ಜೈಸ್ವಾಲ್ ಅವರು 1977ರಲ್ಲೇ ಪಲಾಮು ಭೂಮಿಯಿಂದ ವನ್ರಾಖಿ ಚಳವಳಿ ಪ್ರಾರಂಭಿಸಿದರು. ರಕ್ಷಾ ಸೂತ್ರವನ್ನು ಮರಗಳಿಗೆ ಕಟ್ಟುವಂತೆ ಗ್ರಾಮಸ್ಥರ ಮನವೊಲಿಸಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಇವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಇಂದು ನೂರಾರು ಗ್ರಾಮಸ್ಥರು ಅಭಿಯಾನದ ಭಾಗವಾಗಿದ್ದು, ಪರಿಸರ ಉಳಿಸುವಲ್ಲಿ ನಿರತರಾಗಿದ್ದಾರೆ.

ವನ್ರಾಖಿ ಆಂದೋಲನದ ಸಂಸ್ಥಾಪಕ ಕೌಶಲ್ ಕಿಶೋರ್ ಜೈಸ್ವಾಲ್ ವಿಶ್ವಾದ್ಯಂತ ಪರಿಸರ ಸಂರಕ್ಷಣಾ ಅಭಿಯಾನ ನಡೆಸುತ್ತಿದ್ದಾರೆ. ಹಲವು ದೇಶಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದಾರೆ. ಸಿಬಿಎಸ್​ಸಿ ಮತ್ತು ಐಸಿಎಸ್​ಸಿಗಳು ಕೌಶಲ್ ಕಿಶೋರ್ ಜೈಸ್ವಾಲ್ ಅವರ ಅಭಿಯಾನವನ್ನು 6ನೇ ತರಗತಿಯ ಇಂಗ್ಲಿಷ್ ಪಠ್ಯಕ್ರಮದಲ್ಲಿ ಸೇರಿಸಿಕೊಂಡಿವೆ. ಪಲಮುವಿನ ಛತ್ತರ್‌ಪುರದ ಡಾಲಿಯಲ್ಲಿ ಪರ್ಯಾಯವರನ್ ಧರ್ಮ ಮಂದಿರ ಸ್ಥಾಪಿಸಿದ್ದಾರೆ. ಈ ದೇವಾಲಯದ ಸುಮಾರು ಐದು ಎಕರೆ ಭೂಮಿಯಲ್ಲಿ 110 ದೇಶಗಳ ವಿವಿಧ ಜಾತಿಯ ಮರಗಳು ಮತ್ತು ಸಸ್ಯಗಳನ್ನು ನೆಡಲಾಗಿದೆ. ಇವುಗಳಲ್ಲಿ ಮೂರು ಡಜನ್‌ಗಿಂತಲೂ ಹೆಚ್ಚು ಅಪರೂಪದ ಜಾತಿಯ ಸಸ್ಯಗಳಿವೆ.

ಇದನ್ನೂ ಓದಿ: ಅಗಲಿದ ಸಹೋದರಿಯ ನೆನಪು.. ರಕ್ಷಾ ಬಂಧನದಂದು ಮಹಿಳೆಯರಿಗೆ ಉಚಿತ ಆಟೋ ಸೇವೆ ಸಲ್ಲಿಸುವ ಚಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.