ETV Bharat / bharat

ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆಯ ತನಿಖೆ ಆರಂಭ

author img

By

Published : Jun 3, 2023, 3:50 PM IST

Updated : Jun 3, 2023, 4:20 PM IST

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ಇದುವರೆಗೆ ಮೃತರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ.
Odisha train accident: Rescue ops completed, restoration work has begun, says Ashwini Vaishnaw
ಒಡಿಶಾ: ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆ ಬಗ್ಗೆ ತನಿಖೆ ಆರಂಭ

ಬಾಲಸೋರ್ (ಒಡಿಶಾ): ಒಡಿಶಾದಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಬಾಲಸೋರ್‌ ಜಿಲ್ಲೆಯ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಶುಕ್ರವಾರ ಸಂಭವಿಸಿದ ಮೂರು ರೈಲುಗಳ ಅಪಘಾತದಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಮೃತರ ಸಂಖ್ಯೆ 261ಕ್ಕೆ ಏರಿದೆ. ಸುಮಾರು 900 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪುನಃಸ್ಥಾಪನೆ ಕಾರ್ಯ ಪ್ರಾರಂಭಿಸಲಾಗಿದೆ. ನಾವು ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಕೋಲ್ಕತ್ತಾ ಭೇಟಿಯನ್ನು ಮೊಟಕುಗೊಳಿಸಿ ಅಪಘಾತದ ಸ್ಥಳಕ್ಕೆ ತಲುಪಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಮಾತನಾಡಿ, ಇದೊಂದು ದುರದೃಷ್ಟಕರ ಘಟನೆ. ಕೆಲವು ತಾಂತ್ರಿಕ ಕಾರಣಗಳಿಂದ ಈ ದುರಂತ ಸಂಭವಿಸಿದೆ. ರೈಲ್ವೆ ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ಮೋದಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಒಡಿಶಾ ರೈಲು ದುರಂತ: ಆಸ್ಪತ್ರೆಯೆದುರು ಸರತಿ ಸಾಲಿನಲ್ಲಿ ನಿಂತು ಸ್ಥಳೀಯರಿಂದ ರಕ್ತದಾನ

ಇಂದು ಬೆಳಗ್ಗೆ ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಂತ್ರಸ್ತರ ರಕ್ಷಣೆ, ಪರಿಹಾರ ಮತ್ತು ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಅಲ್ಲದೇ, ಇಂದು ಒಡಿಶಾಗೆ ಪ್ರಧಾನಿ ತೆರಳಿ ಬಾಲಸೋರ್‌ನಲ್ಲಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಟಕ್‌ನ ಆಸ್ಪತ್ರೆಗೆ ಅವರು ಭೇಟಿ ಕೊಡಲಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ.

ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ತ್ರಿವಳಿ ರೈಲು ದುರಂತದ ನಡೆದಿದೆ. ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳು ಅಪಘಾತಕ್ಕೀಡಾಗಿದ್ದವು. ಒಟ್ಟಾರೆ ಪ್ಯಾಸೆಂಜರ್ ರೈಲುಗಳ ಹದಿನೇಳು ಬೋಗಿಗಳು ಹಳಿ ತಪ್ಪಿ ಅಪಾರ ಪ್ರಮಾಣದ ಪ್ರಾಣ ಹಾನಿ ಉಂಟಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಏಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ತಂಡಗಳು, ಐದು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್​ಎಎಫ್​) ತಂಡಗಳು ಮತ್ತು 24 ಅಗ್ನಿಶಾಮಕ ಸೇವೆಗಳು ಮತ್ತು ತುರ್ತು ಘಟಕಗಳ ತಂಡಗಳು ತೊಡಗಿದ್ದವು. ಭಾರತೀಯ ವಾಯುಪಡೆಯು ಮೃತರು ಮತ್ತು ಗಾಯಾಳುಗಳ ಸ್ಥಳಾಂತರಕ್ಕಾಗಿ ಎಂಐ -17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿತ್ತು.

ಇದನ್ನೂ ಓದಿ: ಬಾಲಸೋರ್​ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್​ಗಳು ರದ್ದು​!

Last Updated :Jun 3, 2023, 4:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.