ETV Bharat / bharat

ಖಲಿಸ್ತಾನಿ ಜಾಲ ಭೇದಿಸಲು ಪಂಜಾಬ್‌ನ ಮೋಗಾ - ಖನ್ನಾ ಮೇಲೆ ಎನ್‌ಐಎ ದಾಳಿ

author img

By ETV Bharat Karnataka Team

Published : Nov 22, 2023, 4:14 PM IST

ಚಂಡೀಗಢ
ಚಂಡೀಗಢ

ಖಲಿಸ್ತಾನಿ ಜಾಲ ಭೇದಿಸಲು ಪಂಜಾಬ್​ನ ಮೋಗಾ ಹಾಗೂ ಖನ್ನಾದಲ್ಲಿ ಎನ್​ಐಎ ದಾಳಿ ನಡೆಸಿದೆ.

ಮೊಗಾ/ಖನ್ನಾ/ಚಂಡೀಗಢ : ಖಲಿಸ್ತಾನಿ ಜಾಲವನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಮತ್ತೊಮ್ಮೆ ಪಂಜಾಬ್ - ಹರಿಯಾಣದಲ್ಲಿ ದಾಳಿ ನಡೆಸಿದೆ. ಎರಡೂ ರಾಜ್ಯಗಳಲ್ಲಿ ಸುಮಾರು 15 ಕಡೆ ದಾಳಿ ನಡೆಸಲಾಗಿದೆ. ಪಂಜಾಬ್‌ನ ಮೋಗಾದಲ್ಲಿರುವ ಗುರ್ಲಭ್ ಸಿಂಗ್ ಅವರ ಮನೆ ಮತ್ತು ಮಾದಕ ವ್ಯಸನ ಕೇಂದ್ರದ ಮೇಲೆ ದಾಳಿ ನಡೆಸಲಾಯಿತು ಮತ್ತು ಮಾಜಿ ಜಿಲ್ಲಾಧ್ಯಕ್ಷ ಸರಬ್ಜಿತ್ ಸಿಂಗ್ ಸಿ ಆರ್ ಕಾಂಗ್ ಅವರ ಮನೆ ಮೇಲೂ ದಾಳಿ ನಡೆದಿದೆ.

ಇವರು ಲೂಧಿಯಾನಾದ ಖನ್ನಾದಲ್ಲಿರುವ ಮಾಜಿ ಶಾಸಕ ಸಿಮರ್‌ಜಿತ್ ಸಿಂಗ್ ಬೈನ್ಸ್‌ಗೆ ನಿಕಟರಾಗಿದ್ದರು ಎಂಬುದು ತಿಳಿದುಬಂದಿದೆ. ಇದಲ್ಲದೇ ಬೇರೆ ಕಡೆಗಳಲ್ಲೂ ತನಿಖೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಹಲವು ರಾಜ್ಯಗಳಲ್ಲಿ ಖಾಲಿಸ್ತಾನಿ ಜಾಲದ ನೆಲೆಗಳ ಮೇಲೆ ಎನ್‌ಐಎ ಕ್ರಮ ಕೈಗೊಂಡಿತ್ತು.

ಮೊಗಾದ ಗುರ್ಲಭ್ ಸಿಂಗ್ ಮನೆ ಮೇಲೆ ದಾಳಿ : ಖಲಿಸ್ತಾನಿ ಜಾಲದ ತನಿಖೆಗಾಗಿ ತನಿಖಾ ಸಂಸ್ಥೆ ಈ ದಾಳಿ ನಡೆಸುತ್ತಿದೆ. ಬುಧವಾರ ಬೆಳಗ್ಗೆ ತನಿಖಾ ಸಂಸ್ಥೆಯು ಮೊಗಾದ ಚಾರಿಕ್‌ನ ಝಂಡಿವಾಲಾ ಗ್ರಾಮದಲ್ಲಿರುವ ಗುರ್ಲಭ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿತು. ಎನ್‌ಐಎ ಜತೆಗೆ ಸ್ಥಳೀಯ ಪೊಲೀಸರು ಕೂಡ ಹಾಜರಿದ್ದರು. ತಂಡವು ಗುರ್ಲಭ್ ಸಿಂಗ್ ಪತ್ನಿ ಹರ್ ಪ್ರೀತ್ ಕೌರ್ ಅವರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿತು. ತನಿಖಾ ಸಂಸ್ಥೆಯು ಅವರನ್ನು ನವೆಂಬರ್ 24 ರಂದು ಚಂಡೀಗಢಕ್ಕೆ ಕರೆದಿದೆ. ಇದಲ್ಲದೇ, ಹರಿಯಾಣದ ಕೆಲವು ಜಿಲ್ಲೆಗಳಲ್ಲಿ ಖಲಿಸ್ತಾನಿ ಜಾಲಕ್ಕೆ ಸಂಬಂಧಿಸಿದ ಜನರ ಮೇಲೆ ದಾಳಿ ನಡೆಸಲಾಗಿದೆ.

ಗುರ್ಲಭ್‌ನ ಹೆಂಡತಿ ಹೇಳಿದ್ದೇನು ? : ಈ ಬಗ್ಗೆ ಗುರ್ಲಭ್ ಸಿಂಗ್ ಅವರ ಪತ್ನಿ ಹರ್ ಪ್ರೀತ್ ಕೌರ್ ಮಾತನಾಡಿ, ನಾನು ಮತ್ತು ತನ್ನ ಪತಿ ಪಂಜಾಬ್‌ನ ಸಮಸ್ಯೆಗಳು ಸೇರಿದಂತೆ ಸಾಹಿತ್ಯ ಮತ್ತು ಇತಿಹಾಸದ ಬಗ್ಗೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆಯುತ್ತೇವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಐಎ ಈ ದಾಳಿ ನಡೆಸಿದೆ. ಖಲಿಸ್ತಾನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದ ಅವರು, ಪಂಜಾಬ್‌ನ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ. ಇದರೊಂದಿಗೆ ಬ್ಯಾಂಕ್ ಖಾತೆಗಳ ಬಗ್ಗೆಯೂ ಎನ್‌ಐಎ ವಿಚಾರಣೆ ನಡೆಸಿದ್ದು, ಇದೀಗ ತನಿಖೆಗಾಗಿ ಚಂಡೀಗಢಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.

ಲೂಧಿಯಾನ ಖನ್ನಾದಲ್ಲೂ ದಾಳಿ : ಬುಧವಾರ ಬೆಳಗ್ಗೆ ಲೂಧಿಯಾನದ ಖನ್ನಾದಲ್ಲಿ ಎನ್‌ಐಎ ದಾಳಿ ನಡೆಸಿತು. ಇಲ್ಲಿ ಲೋಕ ಇನ್ಸಾಫ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ, ಸಿಮರ್‌ಜಿತ್ ಸಿಂಗ್ ಬೈನ್ಸ್ ಅವರ ನಿಕಟವರ್ತಿಯಾಗಿದ್ದ ಸರಬ್ಜಿತ್ ಸಿಂಗ್ ಸಿ ಆರ್ ಕಾಂಗ್ ಅವರ ಮನೆ ಮತ್ತು ವ್ಯಸನಮುಕ್ತ ಕೇಂದ್ರದ ಮೇಲೆ ದಾಳಿ ನಡೆಸಲಾಯಿತು. ಬೆಳಗ್ಗೆ 6 ಗಂಟೆ ಸುಮಾರಿಗೆ ಎನ್‌ಐಎ ತಂಡ ಬಹೋಮಜ್ರಾ ಗ್ರಾಮದಲ್ಲಿರುವ ಸಿ ಆರ್ ಕಾಂಗ್ ಅವರ ಮನೆಗೆ ತಲುಪಿದೆ. ಸುಮಾರು 3 ಗಂಟೆಗಳ ಕಾಲ ಅಲ್ಲಿ ಸುದೀರ್ಘ ತನಿಖೆ ಮುಂದುವರೆಯಿತು. ಕಾಂಗ್ ಅವರ ವಿದೇಶಿ ಸಂಬಂಧಗಳನ್ನು ಪರಿಶೀಲಿಸಲಾಯಿತು. ಅಲ್ಲಿ ವಿಚಾರಣೆ ನಡೆಸಿದ ನಂತರ, ಎನ್‌ಐಎ ತಂಡವು ಸಿಆರ್‌ನೊಂದಿಗೆ ಜಿಟಿ ರೋಡ್ ಭಟ್ಟಿಯಾನ್‌ನಲ್ಲಿರುವ ಅವರ ಡಿ-ಅಡಿಕ್ಷನ್ ಕೇಂದ್ರವನ್ನು ತಲುಪಿತು. ಇಲ್ಲಿಯೂ ಸುಮಾರು ಅರ್ಧ ಗಂಟೆಗಳ ಕಾಲ ತನಿಖೆ ನಡೆಯಿತು. ಇದಾದ ಬಳಿಕ ಎನ್‌ಐಎ ತಂಡ ಅಲ್ಲಿಂದ ತೆರಳಿತು.

ದಾಳಿ ನಡೆಸಿದ್ದು ಏಕೆ? : ಸುಮಾರು 10 ತಿಂಗಳ ಹಿಂದೆ ಅಮೆರಿಕದಲ್ಲಿರುವ ಬಾಬಾ ಬಾಘೆಲ್ ಎಂಬ ವ್ಯಕ್ತಿಯೊಂದಿಗೆ ಸಿ ಆರ್ ಕಾಂಗ್ ದೂರವಾಣಿ ಸಂಭಾಷಣೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅವರ ವಿಡಿಯೋ ಕಾಲ್ ಸಂಭಾಷಣೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಬಾ ಬಾಘೆಲ್ ಈಗಾಗಲೇ ಎನ್‌ಐಎ ಸೇರಿದಂತೆ ದೇಶದ ಇತರ ಏಜೆನ್ಸಿಗಳ ರಾಡಾರ್‌ನಲ್ಲಿದ್ದಾರೆ. ಹಾಗಾಗಿ ಈ ಬಗ್ಗೆ ಆಳವಾದ ತನಿಖೆ ನಡೆಸಲು ಎನ್‌ಐಎ ಇಲ್ಲಿ ದಾಳಿ ನಡೆಸಿದೆ. ಬಾಘೆಲ್‌ಗೂ ಕಾಂಗ್‌ಗೂ ಏನು ಸಂಬಂಧ? ಕಾಂಗ್ ಬಾಘೆಲ್ ಜೊತೆ ಏಕೆ ಮಾತನಾಡಿದ್ದಾರೆ ? ಇಲ್ಲಿಯವರೆಗೆ ನೀವು ಎಷ್ಟು ಬಾರಿ ಮಾತನಾಡಿದ್ದೀರಿ ? ನೀವು ಎಷ್ಟು ಸಮಯದಿಂದ ಒಬ್ಬರಿಗೊಬ್ಬರು ತಿಳಿದಿದ್ದೀರಿ? ಈ ಎಲ್ಲ ಪ್ರಶ್ನೆಗಳಿಗೆ ಸಿ ಆರ್ ಕಾಂಗ್ ಉತ್ತರಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಸ್ತುತ ತನಿಖೆಯಲ್ಲಿ ಸಿ ಆರ್ ಕಾಂಗ್‌ನ ಯಾವುದೇ ವಿದೇಶಿ ಸಂಪರ್ಕವು ಬಹಿರಂಗವಾಗಿಲ್ಲ. ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿ ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಖಲಿಸ್ತಾನಿ ಬಂಧಿಸಿದ್ದ ದೆಹಲಿ ಪೊಲೀಸರು : ಒಂದು ದಿನದ ಹಿಂದೆ ದೆಹಲಿ ಪೊಲೀಸರ ವಿಶೇಷ ಸೆಲ್ ಹರಿಯಾಣದ ಕುರುಕ್ಷೇತ್ರದಿಂದ ಮಾಲಕ್ ಸಿಂಗ್ ಅವರನ್ನು ಬಂಧಿಸಿದೆ. ಸೆಪ್ಟೆಂಬರ್ 27 ರಂದು, ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಅವರ ಆಜ್ಞೆಯ ಮೇರೆಗೆ, ಮಲಕ್ ಸಿಂಗ್ ದೆಹಲಿಯ ISBT ಬಸ್ ನಿಲ್ದಾಣದ ಗೋಡೆಗಳ ಮೇಲೆ ಖಲಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಬರೆದಿದ್ದರು. ಇದಲ್ಲದೇ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಪಂದ್ಯದ ಮೊದಲು ದೆಹಲಿ ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಖಲಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಬರೆಯುವ ಕೆಲಸವನ್ನು ಪನ್ನು ಅವರಿಗೆ ನೀಡಿದ್ದರು.

ಇದನ್ನೂ ಓದಿ: 'ದೇಶದ ಭದ್ರತೆಗೆ ಅಪಾಯ': ಜಮ್ಮು ಕಾಶ್ಮೀರದ 4 ಸರ್ಕಾರಿ ನೌಕರರು ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.