ETV Bharat / bharat

ಸಂಸತ್ ಚುನಾವಣೆ ಎದುರಿಸಲು ಅಪಪ್ರಚಾರ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್

author img

By PTI

Published : Sep 7, 2023, 2:46 PM IST

Modi and co using Sanatana ploy to divert attention, will face cases legally: Udhayanidhi Stalin
ಸಂಸತ್ ಚುನಾವಣೆ ಎದುರಿಸಲು ಅಪಪ್ರಚಾರವನ್ನು ಅವಲಂಬಿಸಿದ ಮೋದಿ, ಬಿಜೆಪಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್

ಸಂಸತ್ ಚುನಾವಣೆಯನ್ನು ಎದುರಿಸಲು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಪಪ್ರಚಾರಗಳ ಮೇಲೆ ಅವಲಂಬಿತವಾಗಿದೆ ಎಂದು ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ದೂರಿದ್ದಾರೆ.

ಚೆನ್ನೈ (ತಮಿಳುನಾಡು): ಸನಾತನ ಧರ್ಮದ ಕುರಿತ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿರುವ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಹಾಗೂ ಬಿಜೆಪಿ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ್ದಾರೆ. ಕಳೆದ 9 ವರ್ಷಗಳಿಂದ ಮೋದಿ ಏನೂ ಮಾಡುತ್ತಿಲ್ಲ. ಈ ಬಗ್ಗೆ ಇಡೀ ದೇಶವು ಪ್ರಶ್ನಿಸಿದೆ. ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ರಾಜ್ಯ ಸಚಿವ ಹಾಗೂ ಡಿಎಂಕೆ ಯುವ ಘಟಕದ ಅಧ್ಯಕ್ಷರಾದ ಉದಯನಿಧಿ ಸ್ಟಾಲಿನ್ ಶನಿವಾರ ಸನಾತನ ಧರ್ಮ ಡೆಂಘಿ ಹಾಗೂ ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧ ಮಾಡಬಾರದು. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ಉದಯನಿಧಿ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಅಲ್ಲದೇ, ಈ ಕುರಿತು ಪೊಲೀಸ್​ ಠಾಣೆಗಳಲ್ಲಿ ದೂರುಗಳನ್ನೂ ದಾಖಲಿಸಲಾಗಿದೆ. ಗುರುವಾರ ಬಹಿರಂಗ ಪತ್ರ ಬರೆದಿರುವ ಉದಯನಿಧಿ ಸ್ಟಾಲಿನ್, ತಮ್ಮ ಹೇಳಿಕೆ ಸಂಬಂಧ ದಾಖಲಾದ ಎಲ್ಲ ಪ್ರಕರಣಗಳನ್ನು ಕಾನೂನುಬದ್ಧವಾಗಿಯೇ ಎದುರಿಸುವುದಾಗಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಯೇ ಬಿಜೆಪಿಯವರಿಗೆ ಆಧಾರ: ಕಳೆದ 9 ವರ್ಷಗಳಿಂದ ಬಿಜೆಪಿಯ ಭರವಸೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ. ಜನಕಲ್ಯಾಣಕ್ಕಾಗಿ ನೀವು ನಿಖರವಾಗಿ ಏನು ಮಾಡಿದ್ದೀರಿ ಎಂಬುದು ಪ್ರಸ್ತುತ ನಿಶ್ಶಸ್ತ್ರ, ಫ್ಯಾಸಿಸ್ಟ್ ಬಿಜೆಪಿ ಸರ್ಕಾರದ ವಿರುದ್ಧ ಇಡೀ ದೇಶವು ಒಗ್ಗಟ್ಟಿನಿಂದ ಎತ್ತುತ್ತಿರುವ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿಎನ್‌ಪಿಡಬ್ಲ್ಯುಎಎ ಸಮಾವೇಶದಲ್ಲಿ ನನ್ನ ಭಾಷಣವನ್ನು 'ಜನಾಂಗೀಯ ಹತ್ಯೆಗೆ ಪ್ರಚೋದನೆ' ಎಂದು ಬಿಜೆಪಿ ನಾಯಕರು ತಿರುಚಿದ್ದಾರೆ. ಅವರು (ಬಿಜೆಪಿಯವರು) ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಸ್ತ್ರವೆಂದು ಪರಿಗಣಿಸುತ್ತಾರೆ ಎಂದು ಉದಯನಿಧಿ ಸ್ಟಾಲಿನ್​ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Sanatana Dharma Row: ಉತ್ತರ ಪ್ರದೇಶದಲ್ಲಿ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್

ಆಶ್ಚರ್ಯದ ಸಂಗತಿಯೆಂದರೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಂತಹವರೇ ಸುಳ್ಳು ಸುದ್ದಿಯನ್ನು ಆಧರಿಸಿ ನನ್ನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಗೌರವಾನ್ವಿತ ಸ್ಥಾನಗಳಲ್ಲಿದ್ದೂ ಅಪಪ್ರಚಾರದಲ್ಲಿ ತೊಡಗಿರುವ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಮತ್ತು ಇತರ ನ್ಯಾಯಾಲಯದ ಮೊಕದ್ದಮೆಗಳನ್ನು ನ್ಯಾಯಯುತವಾಗಿ ನಾನು ದಾಖಲಿಸಬೇಕು. ಆದರೆ, ನನಗೆ ರಕ್ಷಿಸಿಕೊಳ್ಳುವ ವಿಧಾನ ಗೊತ್ತಿದೆ. ಬಿಜೆಪಿಯವರಿಗೆ ಅದು ಗೊತ್ತಿಲ್ಲ. ಹೀಗಾಗಿ ಮೊಕದ್ದಮೆಗಳನ್ನು ಹೂಡದಿರುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ಎಲ್ಲ ಧರ್ಮಗಳ ಬಗ್ಗೆ ಡಿಎಂಕೆಗೆ ಗೌರವ: ಡಿಎಂಕೆಯ ಸಂಸ್ಥಾಪಕ ದಿವಂಗತ ಸಿಎನ್ ಅಣ್ಣಾದೊರೈ ಅವರ ಧರ್ಮಗಳ ಕುರಿತು ಹೇಳಿಕೆಯೊಂದು ಇಂದಿಗೂ ಪ್ರಸ್ತುತವಾಗಿದೆ. ಅದು ಹೀಗಿದೆ... ''ಒಂದು ಧರ್ಮವು ಜನರನ್ನು ಸಮಾನತೆಯ ಕಡೆಗೆ ಕೊಂಡೊಯ್ದು ಜನರಿಗೆ ಭ್ರಾತೃತ್ವ ಕಲಿಸಿದರೆ ಆಗ ನಾನು ಸಹ ಆಧ್ಯಾತ್ಮಿಕವಾದಿ. ಒಂದು ಧರ್ಮವು ಜನರನ್ನು ಜಾತಿಗಳ ಹೆಸರಿನಲ್ಲಿ ವಿಭಜಿಸಿದರೆ, ಅದು ಅವರಿಗೆ ಅಸ್ಪೃಶ್ಯತೆ ಮತ್ತು ಗುಲಾಮಗಿರಿಯನ್ನು ಕಲಿಸಿದರೆ, ಆ ಧರ್ಮವನ್ನು ವಿರೋಧಿಸುವ ಮೊದಲ ವ್ಯಕ್ತಿ ನಾನು'' ಎಂಬ ಅಣ್ಣಾದೊರೈ ಹೇಳಿಕೆಯನ್ನು ಉದಯನಿಧಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Sanatan Dharma: ಹೊಸ ಸಂಸತ್​ ಭವನ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದಿರುವುದೇ ಸನಾತನ ಧರ್ಮದ ಭೇದ; ಉದಯನಿಧಿ ಸ್ಟಾಲಿನ್​

ಎಲ್ಲ ಧರ್ಮಗಳನ್ನು ಡಿಎಂಕೆ ಗೌರವಿಸುತ್ತದೆ. ಯಾವುದರ ಬಗ್ಗೆಯೂ ತಿಳಿವಳಿಕೆಯಿಲ್ಲದೇ ಮೋದಿ ಮತ್ತು ಕಂ. ಸಂಸತ್ ಚುನಾವಣೆಯನ್ನು ಎದುರಿಸಲು ಇಂತಹ ಅಪಪ್ರಚಾರಗಳ ಮೇಲೆ ಮಾತ್ರ ಅವಲಂಬಿತವಾಗಿದೆ. ಕಳೆದ 9 ವರ್ಷಗಳಿಂದ ಮೋದಿ ಏನೂ ಮಾಡುತ್ತಿಲ್ಲ. ಕೇಂದ್ರ ಸರ್ಕಾರದಿಂದ ಕಳೆದ ಒಂಬತ್ತು ವರ್ಷಗಳಲ್ಲಿ ಡಿಎಂಕೆಯ ವಿದ್ಯಾರ್ಥಿನಿಯ ದಾಖಲಾತಿ ಹೆಚ್ಚಿಸಲು ಪ್ರೋತ್ಸಾಹ ಧನ ನೀಡುವ ಅಥವಾ ಮುಖ್ಯಮಂತ್ರಿಗಳ ಉಪಹಾರ ಯೋಜನೆ ಅಥವಾ ಮಹಿಳಾ ಹಕ್ಕುಗಳ ಯೋಜನೆಗಳಂತಹ ಯಾವುದಾರೂ ಪ್ರಗತಿಪರ ಯೋಜನೆ ಜಾರಿಗೆ ತರಲಾಗಿದೆಯೇ?, ಮಧುರೈನಲ್ಲಿ ಏಮ್ಸ್​ ಆಸ್ಪತ್ರೆ ನಿರ್ಮಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಮಣಿಪುರದ ಬಗ್ಗೆ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು ಎಂಬ ಭಯದಿಂದ ಮೋದಿ ತಮ್ಮ ಸ್ನೇಹಿತ ಅದಾನಿಯೊಂದಿಗೆ ಜಗತ್ತು ಸುತ್ತುತ್ತಿದ್ದಾರೆ. ವಾಸ್ತವವೆಂದರೆ ಜನರ ಅಜ್ಞಾನವು ಅವರ ನಾಟಕೀಯ ರಾಜಕೀಯದ ಬಂಡವಾಳವಾಗಿದೆ. ಮಣಿಪುರದಲ್ಲಿ ಪ್ರಚೋದಿತವಾದ ಗಲಭೆಯಲ್ಲಿ 250ಕ್ಕೂ ಹೆಚ್ಚು ಜನರ ಹತ್ಯೆ ಹಾಗೂ 7.5 ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಸೇರಿದಂತೆ ಸತ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಮೋದಿ ಮತ್ತು ಕಂ. ಸನಾತನ ತಂತ್ರವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ: Sanatan Dhama: 'ಅರ್ಥ ಮಾಡಿಕೊಳ್ಳದೇ ಬಿಜೆಪಿ ಟೀಕೆ'.. ಪುತ್ರ ಉದಯನಿಧಿ ಸನಾತನ ಧರ್ಮ ವಿವಾದಿತ ಹೇಳಿಕೆ ಬೆಂಬಲಿಸಿದ ಸಿಎಂ ಸ್ಟಾಲಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.