ETV Bharat / bharat

ಕುಡಿದ ಮತ್ತಲ್ಲಿ ಪುಣೆ ಗೂಗಲ್​ ಕಚೇರಿಗೆ ಹುಸಿ ಬಾಂಬ್​ ಕರೆ.. ಹೈದರಾಬಾದ್​ ವ್ಯಕ್ತಿಯ ಬಂಧನ

author img

By

Published : Feb 13, 2023, 6:30 PM IST

googles-office-in-pune
ಗೂಗಲ್​ ಕಚೇರಿಗೆ ಹುಸಿ ಬಾಂಬ್​ ಕರೆ

ಕುಡಿದ ಮತ್ತಿನಲ್ಲಿ ಗೂಗಲ್​ ಕಚೇರಿಗೆ ಬಾಂಬ್​ ಬೆದರಿಕೆ - ಪುಣೆ ಕಚೇರಿಗೆ ಹೈದರಾಬಾದ್​ ವ್ಯಕ್ತಿಯಿಂದ ಬೆದರಿಕೆ - ಗೂಗಲ್ ಕಚೇರಿಗೆ ಹುಸಿ ಬಾಂಬ್​ ಕರೆ - ಹೈದರಾಬಾದ್​ ವ್ಯಕ್ತಿ ಬಂಧಿಸಿದ ಮುಂಬೈ ಪೊಲೀಸರು

ಮಹಾರಾಷ್ಟ್ರ: ಕುಡಿದ ಮತ್ತಿನಲ್ಲಿ ಜನರು ಏನು ಮಾಡ್ತಾರೆ ಎಂಬುದೇ ತಿಳಿಯದು. ಹೊಟ್ಟೆಯೊಳಗಿದ "ಪರಮಾತ್ಮ" ಆಡಿಸುವ ಆಟದಿಂದ ರಾದ್ಧಾಂತವೇ ಸೃಷ್ಟಿಸುತ್ತಾರೆ. ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಪುಣೆಯಲ್ಲಿರುವ ಗೂಗಲ್ ಕಚೇರಿಯಲ್ಲಿ ಬಾಂಬ್​ ಇದೆ ಎಂದು ಕರೆ ಮಾಡಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಕಚೇರಿ ತಪಾಸಿಸಿದ್ದಾರೆ. ಬಳಿಕ ಇದೊಂದು ಹುಸಿ ಕರೆ ಎಂದು ಗೊತ್ತಾಗಿದೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ.

ಏನಾಯ್ತು: ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್ ಕಚೇರಿಗೆ ವ್ಯಕ್ತಿಯೊಬ್ಬ ಭಾನುವಾರ ಕರೆ ಮಾಡಿ, ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ. ಗಾಬರಿಗೊಂಡ ಅಲ್ಲಿನ ಸಿಬ್ಬಂದಿ ತಕ್ಷಣವೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್​ ಇಟ್ಟ ಕರೆಯಂತೆ ಪುಣೆ ಗೂಗಲ್​ ಇಡೀ ಕಚೇರಿಯನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ.

ಬಾಂಬ್ ಪತ್ತೆ ದಳದ ವ್ಯಾಪಕ ತಪಾಸಣೆ ನಡೆಸಲಾಯಿತು. ಕಚೇರಿಯಲ್ಲಿ ಎಲ್ಲೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಯಾವುದೇ ಬಾಂಬ್ ಕೂಡ ಇರಲಿಲ್ಲ. ಆಗ ಇದೊಂದು ಹುಸಿ ಕರೆ ಎಂದು ಖಚಿತವಾಗಿದೆ. ಇದರ ವಿರುದ್ಧ ಗೂಗಲ್ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹುಸಿ ಕರೆ ಬಂದ ನೆಟ್​ವರ್ಕ್​ ಹಿಡಿದು ತನಿಖೆ ನಡೆಸಿದಾಗ ಹೈದರಾಬಾದ್​ನಿಂದ ಕರೆ ಬಂದಿದ್ದು ಗೊತ್ತಾಗಿದೆ.

ಹೈದರಾಬಾದ್ ತಲುಪಿದ ಮುಂಬೈ ಪೊಲೀಸರು, ಪಣ್ಯಂ ಬಾಬು ಶಿವಾನಂದ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆತ ಕುಡಿದ ಅಮಲಿನಲ್ಲಿ ಕರೆ ಮಾಡಿದ್ದಾಗಿ ಹೇಳಿದ್ದಾನೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಶಾಲೆಗೆ ಬಾಂಬ್​ ಬೆದರಿಕೆ: ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಎನ್​ಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶವೊಂದು ಬಂದಿತ್ತು. ಜನವರಿ 5 ರಂದು ರಾತ್ರಿ 8:30 ರ ಸುಮಾರಿಗೆ ಬಂದಿದ್ದ ಇಮೇಲ್​ನಲ್ಲಿ‌ 'ನನ್ನ ಬಳಿ ನಾಲ್ಕು ಜಿಲೆಟಿನ್ ಕಡ್ಡಿಗಳಿವೆ. ನಾಳೆ ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡ್ತೀನಿ' ಎಂದು ಬರೆಯಲಾಗಿತ್ತು.

ಮೇಲ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಶಾಲಾ ಮಕ್ಕಳನ್ನ ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿತ್ತು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಶಾಲೆ ಪೂರ್ತಿ ತಪಾಸಣೆ ನಡೆಸಿದ್ದರು. ಈ ವೇಳೆ ಯಾವುದೇ ಬಾಂಬ್​ ಸಿಗದೇ ಇದ್ದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಖಚಿತವಾಗಿತ್ತು.

ಸಂದೇಶ ಬಂದ ಮೇಲ್​ನ ಐಪಿ ಅಡ್ರೆಸ್ ಆಧಾರದಲ್ಲಿ ತನಿಖೆ ಕೈಗೊಂಡಾಗ ಅಪ್ರಾಪ್ತ ಬಾಲಕನೊಬ್ಬನ ಕೆಲಸವಾಗಿದೆ ಎಂದು ಗೊತ್ತಾಗಿತ್ತು. ವಿಚಾರಣೆ ವೇಳೆ ಬಾಲಕ 'ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿರುವುದಾಗಿ' ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ನಂತರ ಬಾಲಕನನ್ನು ವಶಕ್ಕೆ ಪಡೆಯಲಾಗಿತ್ತು.

ಓದಿ: ಭಾರತದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಟರ್ಕಿ ರಾಯಭಾರಿ; ಆಪರೇಷನ್​ ದೋಸ್ತ್​ ಮೂಲಕ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.