ETV Bharat / bharat

ಮರಾಠ ಮೀಸಲಾತಿ ಹೋರಾಟ: ಏಕನಾಥ್​ ಶಿಂಧೆ ಬಣದ ಸಂಸದ ಹೇಮಂತ್​ ಪಾಟೀಲ್ ರಾಜೀನಾಮೆ ಸಲ್ಲಿಕೆ

author img

By ETV Bharat Karnataka Team

Published : Oct 29, 2023, 8:03 PM IST

Maratha reservation row: Maharashtra MP Hemant Patil announces his resignation
ಮರಾಠ ಮೀಸಲಾತಿ ಹೋರಾಟ: ಏಕನಾಥ್​ ಶಿಂಧೆ ಬಣದ ಸಂಸದ ಹೇಮಂತ್​ ಪಾಟೀಲ್ ರಾಜೀನಾಮೆ ಸಲ್ಲಿಕೆ

Maratha reservation row: ಮರಾಠ ಮೀಸಲಾತಿ ಹೋರಾಟ ಭಾಗವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣದ ಶಿವಸೇನೆ ಸಂಸದ ಹೇಮಂತ್​ ಪಾಟೀಲ್​ ತಮ್ಮ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಹಿಂಗೋಲಿ ಸಂಸದ ಹೇಮಂತ್​ ಪಾಟೀಲ್​ ಭಾನುವಾರ ತಮ್ಮ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮೀಸಲಾತಿ ಹೋರಾಟಗಾರರ ಒತ್ತಡಕ್ಕೆ ಮಣಿದು ತಕ್ಷಣವೇ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು.

ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಿಕೊಡುವಂತೆ ಹೋರಾಟಗಾರರು ಮಹಾರಾಷ್ಟ್ರ ಸರ್ಕಾರಕ್ಕೆ 40 ದಿನಗಳ ಗಡುವು ನೀಡಿದ್ದರು. ಈ ಗಡುವು ಮುಕ್ತಾಯಗೊಂಡಿದ್ದು, ಹೋರಾಟದ ಸಂದರ್ಭದಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಮರಾಠ ಮೀಸಲಾತಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೋರಾಟಗಾರರು ಘೋಷಿಸಿದ್ದಾರೆ.

ಸಿಎಂ ಶಿಂಧೆ ಬಣದ ಸಂಸದ: ಇದರ ನಡುವೆ ಹಿಂಗೋಲಿ ಲೋಕಸಭಾ ಕ್ಷೇತ್ರದಿಂದ ಶಿವಸೇನೆಯಿಂದ ಆಯ್ಕೆಯಾಗಿರುವ ಹೇಮಂತ್ ಪಾಟೀಲ್​ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಎರಡು ದಿನಗಳಲ್ಲಿ ಮರಾಠ ಮೀಸಲಾತಿಗೆ ಆಗ್ರಹಿಸಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಮಂತ್ ಪಾಟೀಲ್ ತಿಳಿಸಿದ್ದಾರೆ. ಕಳೆದ ವರ್ಷ ಶಿವಸೇನೆ ಪಕ್ಷ ಉದ್ಧವ್​ ಠಾಕ್ರೆ ಹಾಗೂ ಏಕನಾಥ್​ ಶಿಂಧೆ ಬಣಗಳಾಗಿ ಇಬ್ಭಾಗವಾಗಿದೆ. ಸದ್ಯ ಏಕನಾಥ್​ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು, ಹೇಮಂತ್ ಪಾಟೀಲ್​ ಇದೇ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಜೋರಾದ ಮರಾಠಾ ಮೀಸಲಾತಿ ಹೋರಾಟ: ಯುವಕ ಆತ್ಮಹತ್ಯೆ

ಇಂದು ಯವತ್ಮಾಳದ ಪೊಫ್ಲಿಯಲ್ಲಿರುವ ವಸಂತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಂಸದ ಹೇಮಂತ್​ ಪಾಟೀಲ್​ ಬಂದಿದ್ದರು. ಆ ವೇಳೆ ಮರಾಠ ಮೀಸಲಾತಿ ಪ್ರತಿಭಟನಾಕಾರರು ಅವರನ್ನು ಸುತ್ತುವರೆದರು. ಹೋರಾಟಗಾರರು ಸಂಸತ್​ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಇದರಿಂದ ಸ್ಥಳದಲ್ಲೇ ಹೇಮಂತ್ ಪಾಟೀಲ್ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಆ ನಂತರ ಪಾಟೀಲ್​ ಲೋಕಸಭೆ ಸ್ಪೀಕರ್​ ಅವರಿಗೆ ರಾಜೀನಾಮೆ ಪತ್ರ ಬರೆದರು. ಮರಾಠ ಮೀಸಲಾತಿಗಾಗಿ ರಾಜಕಾರಣಿಯೊಬ್ಬರು ನೀಡಿದ ಮೊದಲ ರಾಜೀನಾಮೆ ಇದಾಗಿದೆ.

5ನೇ ದಿನಕ್ಕೆ ಮನೋಜ್ ಜಾರಂಗೆ ಉಪವಾಸ: ಮರಾಠ ಮೀಸಲಾತಿಗೆ ಆಗ್ರಹಿಸಿ ಹೋರಾಟಗಾರ ಮನೋಜ್ ಜಾರಂಗೆ ನವಿ ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ ಭಾನುವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿ, ಇಲ್ಲವೇ ಮರಾಠರನ್ನು ಎದುರಿಸಿ. ಈ ಎರಡು ಆಯ್ಕೆಗಳು ಸರ್ಕಾರಕ್ಕೆ ಉಳಿದಿವೆ. ಮೀಸಲಾತಿ ಸಿಗುವವರೆಗೆ ಈ ಬಾರಿ ನಾನು ಯಾವುದೇ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ ಹಾಗೂ ನೀರು ಕೂಡ ಕುಡಿಯುವುದಿಲ್ಲ. ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಮನೋಜ್ ಜಾರಂಜ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮರಾಠಾ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮನೋಜ್ ಜಾರಂಗೆ ಪಾಟೀಲ್; ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೆ ತಲೆಬಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.